Saturday, September 20, 2008

ಕನಸಿನರಮನೆಯ ಅತಿಥಿ ದೇವರುಗಳ ಗಮನಕ್ಕೆ

ನಾನು ಜಾಗ ಬದಲಿಸಿದ್ದೇನೆ. ಅಂದರೆ ಈವರೆಗೆ ಬ್ಲಾಕ್‌ಸ್ಪಾಟ್‌ನಲ್ಲಿದ್ದ ನನ್ನ ಬ್ಲಾಗ್, ಇನ್ಮುಂದೆ ವರ್ಡ್‌ಪ್ರೆಸ್‌ನಲ್ಲಿ ಮುಂದುವರಿಯಲಿದೆ. ಬದಲಾದ ಹೊಸ ವಿಳಾಸ; http://kanasinaramane.wordpress.com/
ಅಲ್ಲಿಗೆ ದಯಮಾಡಿ ಬನ್ನಿ..

Monday, August 18, 2008

ದೊಡ್ಡ ಮುಳ್ಳು, ಚಿಕ್ಕಮುಳ್ಳು ಮತ್ತು ನಾನು!

ಒಂದು ದೊಡ್ಡಮುಳ್ಳು, ಇನ್ನೊಂದು ಚಿಕ್ಕ ಮುಳ್ಳು.. ಜತೆಗೊಂದು ಸೆಕೆಂಡ್ ಮುಳ್ಳು.. ಈ ಮುಳ್ಳುಗಳ ಗೊಂದಲದಲ್ಲಿ ಗಡಿಯಾರದಲ್ಲಿ ಟೈಮ್ ಹೇಳೋದು ನನ್ಗೆ ಗೊತ್ತಾಗುತ್ತಿರಲಿಲ್ಲ. ಆ ಕೆಲಸ ಅಂಬರದ ಚುಕ್ಕೆಗಳನ್ನು ಎಣಿಸಿದಷ್ಟೆ ತ್ರಾಸದಾಯಕ ಅನ್ನಿಸಿತ್ತು. ಗಡಿಯಾರ ನೋಡಿ ಟೈಮ್ ಹೇಳೋರನ್ನು ಜಾಣರೆಂದು, ವಿದ್ಯಾವಂತರೆಂದು ಆಗ ಪರಿಗಣಿಸಲಾಗಿತ್ತು. ನಾನಂತೂ ೫ನೇ ಕ್ಲಾಸ್ ದಾಟಿದರೂ ಮುಳ್ಳಿನ ಗೊಂದಲದಿಂದ ಹೊರಬಂದಿರಲಿಲ್ಲ. ಆಗಷ್ಟೆ ಬಂದಿದ್ದ ನಂಬರ್ ವಾಚುಗಳು ನನಗೆ ಇಷ್ಟವಾಗಿದ್ದವು. ಮುಳ್ಳುಗಳಿಲ್ಲ ಎಂಬುದು, ನನ್ನ ಇಷ್ಟಕ್ಕೆ ಇನ್ನೊಂದು ಕಾರಣ.
ಅಂಕೆಗಳಿಲ್ಲದಿದ್ದರೂ ಗೆರೆಗಳನ್ನು ನೋಡಿ ಕಾಲ ಹೇಳುವ ಪರಿ ನನ್ನಲ್ಲಾಗ ಕುತೂಹಲದ ವಿಷಯ. ಮೊದಮೊದಲು ‘ನೀನು ದೊಡ್ಡವನಾಗು ಗೊತ್ತಾಗುತ್ತೆ ’ ಎಂದು ಮನೆಯಲ್ಲಿ ಹೇಳುತ್ತಿದ್ದರು. ಕೆಲವು ಸಲ ಅಣ್ಣ, ಅಮ್ಮ, ಅಪ್ಪ -ಹೀಗೆ ಎಲ್ಲರೂ ಟೈಮ್ ನೋಡೋದನ್ನು ಕಲಿಸಲು ತಿಣುಕಿ ವಿಫಲರಾಗಿ, ಕೈಚೆಲ್ಲಿದ್ದರು. ಹಾಗೆಂದು ನಾನು ಲೆಕ್ಕದಲ್ಲಿ ವೀಕೇನು ಇರಲಿಲ್ಲ.
ಅಣ್ಣ ಆಗಷ್ಟೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದ. ಅವನಿಗೆ ಬಂದಿದ್ದ ಸ್ಕಾಲರ್‌ಶಿಪ್‌ನಲ್ಲಿ ಒಂದು ಎಚ್‌ಎಂಟಿ ವಾಚನ್ನು ಬೆಂಗಳೂರಿಂದ ಅಪ್ಪ ತಂದುಕೊಟ್ಟಿದ್ದರು. ಜಗಳ ಮಾಡ್ತೀನಿ ಅಂಥ ಒಂದು ಶೆಲ್ ವಾಚನ್ನು ನನಗೆ ತಂದಿದ್ದರು. ‘ನೀನು ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ನಂಬರ್ ತಗೊಂಡ್ರೆ ನಿನಗೂ ವಾಚ್ ಕೊಡಿಸ್ತೀವಿ’ ಎಂದಿದ್ದರು. ಎಚ್‌ಎಂಟಿ ವಾಚ್‌ಗಿಂತಲೂ ಅದರ ಬಾಕ್ಸೇ ನನಗಾಗ ಬಲು ಇಷ್ಟ. ಅಣ್ಣನಂತೂ ವಾಚ್ ಧರಿಸಿ ಠೀವಿಯಿಂದ ಹೆಜ್ಜೆಹಾಕುತ್ತಿದ್ದ. ಮನೆಗೆ ಬಂದ ತಕ್ಷಣ ಬಾಕ್ಸ್‌ನಲ್ಲಿ ಶಿಸ್ತಿನಿಂದ ಬಿಚ್ಚಿಡುತ್ತಿದ್ದ. ನಾನು ಅವನಿಲ್ಲದ ಹೊತ್ತಲ್ಲಿ ಮನೆಯಲ್ಲಿಯೇ ಗಡಿಯಾರ ಧರಿಸಿ ಖುಷಿಪಡುತ್ತಿದ್ದೆ.
ನನಗೆ ಅಪ್ಪ ತಂದು ಕೊಟ್ಟಿದ್ದ ಶೆಲ್ ವಾಚ್‌ನ ಚೈನ್ ಎರಡು ದಿನಕ್ಕೆ ತುಂಡಾಗಿತ್ತು. ಅಪ್ಪ ಮನೆಯಲ್ಲಿನ ಚಾಕು, ಕಟಿಂಗ್ ಪ್ಲೇಯರ್ ತಕೊಂಡು ಸರಿಮಾಡಿದ್ದರು. ಆದರೂ ಆ ಚೈನ್ ಆಗಾಗ ಕಳಚಿ ಬೀಳುತ್ತಿತ್ತು. ಆಮೇಲಾಮೇಲೆ ನಾನೇ ರಿಪೇರಿ ಮಾಡೋದನ್ನು ಕಲಿತೆ. ರಿಪೇರಿ ಮಾಡೋದರಲ್ಲಿ ನಾನು ಮೊದಲಿಂದಲೂ ಎತ್ತಿದ ಕೈ. ಯಾರಾದರೂ ಟೈಮ್ ಕೇಳಿದರೆ, ೧೦.೧೬ ಅನ್ನುತ್ತಿದ್ದೆ. ೧೧.೨೯ಅನ್ನುತ್ತಿದ್ದೆ. ನಿಮಿಷಗಳು ಬದಲಾಗುವ ಪರಿ, ಈಗಲೂ ನನ್ನ ಪಾಲಿಗೆ ದೊಡ್ಡ ಬೆರಗು.
ಈ ಕೈಗಡಿಯಾರದ ವಿಷಯಕ್ಕೆ ಆಮೇಲೆ ಬರೋಣ. ಟೈಮನ್ನು ಪಕ್ಕದ ಮಸೀದಿಯವರು ಅಲ್ಲಾ ಕೂಗೋದನ್ನು ಅನುಸರಿಸಿ ಅಮ್ಮ ಹೇಳುತ್ತಿದ್ದಳು. ‘ಓ ಈಗ ೮ ಗಂಟೆ, ಆಗಲೇ ೧೨ ಗಂಟೆಯಾಯ್ತಾ..’ ಎಂದು ಅಮ್ಮ ಗೊಣಗುತ್ತಿದ್ದದ್ದು ಈಗಲೂ ಒಂದು ಸವಿನೆನಪು. ಮನೆಯಲ್ಲಿ ಆಗ ಗಡಿಯಾರ ಅಂಥ ಇದ್ದಿದ್ದು, ಅಪ್ಪನದೊಂದೆ. ಅಪ್ಪ ಸ್ಕೂಲ್ ಮೇಷ್ಟ್ರು. ಅಪ್ಪನ ಎಚ್‌ಎಂಟಿ ವಾಚಿನ ಮೇಲೆ ನಮಗೆಲ್ಲ ಏನೋ ಮೋಹ. ಅದರ ಟಿಕ್‌ಟಿಕ್ ನಾದ, ಮುಳ್ಳುಗಳು ಸುತ್ತೋ ಶಿಸ್ತು ನಿಜಕ್ಕೂ ಇಷ್ಟವಾಗಿತ್ತು.
ಬೆಳಬೆಳಗ್ಗೆ ಪೇಪರ್ ಓದಲು ಅಪ್ಪ ಬಸ್ ಸ್ಟಾಂಡ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಪೇಪರ್ ಎಲ್ಲಾ ಮುಗಿಸಿ ದೇಶ ಮತ್ತು ಊರಿನ ಸಮಾಚಾರವನ್ನು ಚೆನ್ನಪ್ಪನ ಹೋಟೆಲ್‌ನಲ್ಲಿ ಚರ್ಚಿಸಿ, ಗೆಳೆಯರ ಕಾಲೆಳೆದು ಅಲ್ಲಿ ಮಾತಿನ ಮಂಟಪ ಕಟ್ಟುವಲ್ಲಿ ಅಪ್ಪ ಎತ್ತಿದ ಕೈ. ಆ ಸುಖದಲ್ಲಿ ಸಮಯ ಹೋಗಿದ್ದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಹೋಟೆಲ್ ಹಿಂದೆಯೇ ಇದ್ದ ಶಾಲೆಯ ಗಂಟೆ ಹೊಡೆದ ತಕ್ಷಣ , ಅಪ್ಪ ಮನೆಯತ್ತ ಬಿರಬಿರನೆ ಬರ್ತಾಯಿದ್ದರು. ೫-೧೦ ನಿಮಿಷದಲ್ಲಿಯೇ ಅವರ ಸ್ನಾನ-ತಿಂಡಿ ಎಲ್ಲಾ ಮುಗಿದು, ಶಾಲೆಯ ಪ್ರಾರ್ಥನೆ ಮುಗಿವ ಹೊತ್ತಿಗೆ ಶಾಲೆಯಲ್ಲವರು ಹಾಜರು.
ಇಲ್ಲಿ ಅಪ್ಪ ಇಲ್ಲದ ಹೊತ್ತಿನಲ್ಲಿ ನಮಗೆ ಸಮಯ ತಿಳಿಯುತ್ತಿರಲಿಲ್ಲ. ನಾನು ಮತ್ತು ಅಣ್ಣ ರಸ್ತೆಯಲ್ಲಿ ನಿಂತು, ಹೋಗಿ ಬರೋರ ಬಳಿ ಸಮಯ ಕೇಳ್ತಾಯಿದ್ವಿ. ‘ಅಣ್ಣಾ ಟೈಮೆಷ್ಟಣ್ಣ ’, ‘ಸಾರ್ ಟೈಮೆಷ್ಟಾಯಿತು ಸಾರ್’ ಎಂಬ ನಮ್ಮ ದಿನನಿತ್ಯದ ಪ್ರಶ್ನೆ, ಆ ರಸ್ತೆಯಲ್ಲಿ ಸುತ್ತಾಡುವ ಅನೇಕರಿಗೆ ಚಿರಪರಿಚಿತ. ಅವರು ೯.೩೦ ಅಂದರೆ, ಕೂಡಲೇ ಮನೆಗೆ ಬಂದು ‘ಅಮ್ಮಾ ಆಗಲೇ ೧೦ ಗಂಟೆ ಆಯಿತು, ಬೇಗ ತಿಂಡಿ ರೆಡಿ ಮಾಡು.. ಸ್ಕೂಲ್‌ಗೆ ಟೈಮಾಯ್ತು’ ಎಂದು ಪೀಡಿಸುತ್ತಿದ್ದೆವು.
ರಸ್ತೆಯಲ್ಲಿ ಬರೋ ೧೦ ಜನರಲ್ಲಿ ಒಬ್ಬರೋ ಇಬ್ಬರೋ ಗಡಿಯಾರ ಹೊಂದಿರುತ್ತಿದ್ದರು. ನಾವು ಟೈಂ ಕೇಳಿದಾಗ, ಠೀವಿಯಿಂದ ಕೈಯೆತ್ತಿ ಸಮಯ ಹೇಳುತ್ತಿದ್ದರು. ಕೆಲವರಿಗೆ ಸಮಯ ಹೇಳೋದು ಗೊತ್ತಿರಲಿಲ್ಲ. ಅವರು ಫ್ಯಾಷನ್‌ಗಾಗಿ ಕಟ್ಟುತ್ತಿದ್ದರು. ಅಂಥವರು ‘ಗಡಿಯಾರ ಯಾಕೋ ಬೆಳಗ್ಗೆಯಿಂದ ನಿಂತೋಗಯ್ತೆ..’ ಎನ್ನುತ್ತಾ ನಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದರು.
‘ಮಕ್ಕಳು ರಸ್ತೆಯಲ್ಲಿ ನಿಂತು ಕಂಡೋರ ಬಳಿ ಟೈಮ್ ಕೇಳೋದನ್ನು ನೋಡೋಕೆ ಆಗೋದಿಲ್ಲ. ಮೊದಲು ಗೋಡೆ ಗಡಿಯಾರ ತನ್ನಿ’ ಎಂದು ಅಮ್ಮ ಕೇಳುತ್ತಿದ್ದಳು. ಅಪ್ಪ , ‘ತರೋಣ. ಈ ಸಲ ಪೇಪರ್ ವ್ಯಾಲ್ಯುಯೇಷನ್‌ಗೆ ಬೆಂಗಳೂರ್‌ಗೆ ಹೋದಾಗ ತರ್ತಿನಿ’ ಎನ್ನುತ್ತಿದ್ದರು. ಈ ಮಧ್ಯೆ ವೀರಗಾನಹಳ್ಳಿಯಲ್ಲಿದ್ದ ಚಿಕ್ಕಪ್ಪನ ಮನೆಯ ಗೋಡೆಯನ್ನು ‘ಮಾಸ್ಟರ್ ಬಿಂ-ಬಾಂ’ ಗಡಿಯಾರ ಅಲಂಕರಿಸಿತ್ತು. ಮಧುಗಿರಿಯಲ್ಲಿ ಸಿಕ್ಕಿದ್ದ ಚಿಕ್ಕಪ್ಪನ ಮಗ ರವಿ, ಈ ವಿಷಯವನ್ನು ನನ್ನ ಕಿವಿಗೆ ಹಾಕಿದ್ದ. ಅವನು ಅದ್ಯಾಕೆ ಹೇಳಿದನೋ ಗೊತ್ತಿಲ್ಲ.
ಈ ಮಧ್ಯೆ ಅಪ್ಪ-ಅಮ್ಮ ಮತ್ತು ನಾನು ವೀರಗಾನಹಳ್ಳಿಗೆ ಹೋಗಿದ್ದೆವು. ಮಾರಮ್ಮನ ಹಬ್ಬವೋ ಅಥವಾ ಇನ್ನೇನೋ ಇತ್ತು. ಹಬ್ಬಕ್ಕಿಂತಲೂ ನಮಗೆ ಗೋಡೆ ಗಡಿಯಾರದ ಮೇಲೆಯೇ ಗಮನ. ಅದು ಗಂಟೆಗೊಮ್ಮೆ ಬಿಂ-ಬಾಂ ಎಂದು ಸದ್ದು ಮಾಡಿದಾಗಲೆಲ್ಲ, ಎದೆಯಲ್ಲಿ ಪುಳಕ. ಕೆಲವೇ ದಿನಗಳಲ್ಲಿ ಅಂಥದ್ದೇ ಗಡಿಯಾರ ತರಲು ಮನೆಯಲ್ಲಿ ಸಿದ್ಧತೆಗಳು ನಡೆದವು. ತುಮಕೂರಿಂದ ನಾವಿದ್ದ ಪಟ್ಟನಾಯ್ಕನಳ್ಳಿಗೆ ಬರ್‍ತಾಯಿದ್ದ ಸದಾಶಿವಯ್ಯ ಮೇಷ್ಟ್ರು ಗಡಿಯಾರ ತರುವ ಹೊಣೆ ಹೊತ್ತುಕೊಂಡರು. ಮಾಸ್ಟರ್ ಬಿಂ-ಬಾಂ ತರಲು, ಗಡಿಯಾರದಂಗಡಿಗೆ ಹೋಗಿದ್ದ ಅವರಿಗೆ, ಅದು ಓಲ್ಡ್ ಫ್ಯಾಷನ್‌ನಂತೆ ಕಂಡಿರಬೇಕು. ಅವರು ಕೀ ರಗಳೆ ಇಲ್ಲದ ಅಜಂತ ಕ್ವಾರ್ಟ್ಜ್ ಗಡಿಯಾರ ತಂದಿದ್ದರು. ಆ ಗಡಿಯಾರಕ್ಕಾಗಿ ಅವರು ಇನ್ನೂ ೫೦ ರೂಪಾಯಿ ಸೇರಿಸಿದ್ದರು.
ಆ ಗಡಿಯಾರ ನೋಡಿದ ಅಪ್ಪನಿಗೆ ಇಷ್ಟವಾಯಿತು. ಆದರೆ ನಮಗ್ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ರಾತ್ರಿ ೧೨ಗಂಟೆಗೆ ೧೨ ಸಲ ಗಂಟೆ ಹೊಡೆದರೆ, ನಿದ್ದೆ ಹೋಗುತ್ತೆ, ಇದು ಚೆನ್ನಾಗಿದೆ. ಕೀ ಕೊಡಬೇಕಿಲ್ಲ. ವರ್ಷಕ್ಕೊಂದು ಸೆಲ್ ಹಾಕಿದರೆ ಸಾಕು’ ಎಂದು ಸದಾಶಿವಯ್ಯ ಮೇಷ್ಟ್ರು ಏನೇನೋ ವಿವರಣೆ ನೀಡಿ, ನಮ್ಮನ್ನು ಒಪ್ಪಿಸಲು ನೋಡಿದರು. ಒಲ್ಲದ ಮನಸ್ಸಿನಲ್ಲಿಯೇ ಗೋಡೆಗೆ ಮೊಳೆ ಹೊಡೆದು ನೇತು ಹಾಕಿದೆವು. ಯಾಕೋ ಅದರ ಅಸ್ತಿತ್ವ ಯಾರಿಗೂ ಕಾಣಿಸುತ್ತಿಲ್ಲ ಎಂದು ನಮಗೆಲ್ಲ ಅನ್ನಿಸಿತ್ತು. ಗಂಟೆ ಬದಲಿಗೆ ಅದು ಮಂಜುಳ ನಿನಾದವನ್ನು ಹೊರಚೆಲ್ಲುತ್ತಿತ್ತು.
ರಾತ್ರಿ ವೇಳೆ ಆ ಸುಮಧುರ ಸಂಗೀತ ಬಂದ್! ರಾತ್ರಿ ೧೦ ಗಂಟೆ ತನಕ ಮ್ಯೂಸಿಕ್ ನುಡಿಸೋ ಗಡಿಯಾರ, ಆಮೇಲೇಕೆ ಸುಮ್ಮನಾಗುತ್ತೆ ಅನ್ನೋದು ನಮಗೆಲ್ಲ ಚಿದಂಬರ ರಹಸ್ಯ. ಗಡಿಯಾರದ ಮೇಲೆ ಬೆಳಕು ಬಿದ್ದರಷ್ಟೆ ಮ್ಯೂಸಿಕ್ ಬರುತ್ತೆ ಅನ್ನೋದನ್ನು ನಾನು ಕಂಡು ಹಿಡಿದು ಜಾಣನಂತೆ ಬೀಗಿದೆ. ಅಪ್ಪ ನನ್ನ ವಾದವನ್ನು ಒಪ್ಪಿಕೊಂಡರು.
ಗಡಿಯಾರದ ಬಗ್ಗೆ ನಮ್ಮ ಪ್ರೀತಿ ಚಿಗುರಲೇ ಇಲ್ಲ. ಯಾಕೋ ಅದನ್ನು ಕಂಡಾಗಲೆಲ್ಲಾ ಎಲ್ಲೋ ಮೋಸ ಹೋದೆವು ಅನ್ನಿಸುತ್ತಿತ್ತು. ನಮ್ಮ ಮನಸ್ಥಿತಿ ಸದಾಶಿವಯ್ಯ ಮೇಷ್ಟ್ರುಗೆ ಅರ್ಥವಾಯಿತು ಅನ್ನಿಸುತ್ತೆ. ಅವರು ಹೊಸದೊಂದು ಮಾಸ್ಟರ್ ಬಿಂ-ಬಾಂ ಗಡಿಯಾರ ತಂದು ಕೊಟ್ಟರು. ಅಜಂತ ಕ್ವಾರ್ಟ್ಜ್ ಗಡಿಯಾರವನ್ನು ತಮ್ಮ ಮನೆಯಲ್ಲಿ ಹಾಕಿಕೊಂಡರು. ಹೊಸ ಗಡಿಯಾರ ಬಂದ ದಿನ ನಮಗೆಲ್ಲ ಏನೋ ಸಡಗರ. ಅಮ್ಮ ಅರಿಷಿಣ-ಕುಂಕುಮ ಇಟ್ಟು ಪೂಜೆ ಮಾಡಿದರು. ಪೆಂಡಿಲಮ್‌ಗೂ ಅರಿಷಿಣ-ಕುಂಕುಮದ ಜತೆ ವಿಭೂತಿ ಸವರಿದೆವು. ಅದು ಗಂಟೆಗೆ ಮತ್ತು ಅರ್ಧ ಗಂಟೆಗೆ ಸದ್ದು ಮಾಡುತ್ತಿತ್ತು. ಹನ್ನೆರಡು ಗಂಟೆ ಬರೋದನ್ನು ಕಾಯುತ್ತಿದ್ದೆವು. ಗಡಿಯಾರ ಒಂದೊಂದು ಗಂಟೆ ಹೊಡೆದಾಗಲೂ ನಾವು ಒಂದು, ಎರಡು, ಮೂರು.. ಹನ್ನೊಂದು, ಹನ್ನೆರಡು ಎಂದು ಎಚ್ಚರಿಕೆಯಿಂದ ಎಣಿಸುತ್ತಿದ್ದೆವು.
ವಾರಕ್ಕೊಮ್ಮೆ ಕೀ ಕೊಡಲು ಅಪ್ಪ ಕುರ್ಚಿ ಮೇಲೆ ಹತ್ತುತ್ತಿದ್ದರು. ಅವರಿಗೆ ಕುರ್ಚಿ ತಂದು ಕೊಡುವುದು ಮತ್ತು ಕೀ ನೀಡುವ ಪ್ರಕ್ರಿಯೆ ವೀಕ್ಷಿಸುತ್ತಿದ್ದೆ. ಆರಂಭದಲ್ಲಿ ಹಿತವಾಗಿದ್ದ ಘಂಟಾನಾದ, ನಂತರ ಕರ್ಣ ಕಠೋರ ಅನ್ನಿಸತೊಡಗಿತು. ಆಮೇಲಾಮೇಲೆ ಕೀ ಕೊಡುವ ಉತ್ಸಾಹ ಅಪ್ಪ ಮತ್ತು ನನ್ನಲ್ಲಿ ಇಲ್ಲವಾಯಿತು. ‘ಮನೆಯಲ್ಲಿನ ಗಡಿಯಾರ ನಿಲ್ಲ ಬಾರದು, ಕೀ ಕೊಡಿ’ ಎಂದು ಅಮ್ಮ ಹೇಳುತ್ತಿದ್ದಳು. ಅವಳ ಬಲವಂತಕ್ಕೆ ಕೀ ಕೊಡುತ್ತಿದ್ದೆವು. ನಮ್ಮ ನಿರುತ್ಸಾಹ ಕಂಡು ಗಡಿಯಾರಕ್ಕೆ ಬೇಸರವಾಗಿರಬೇಕು. ಒಂದು ಒಳ್ಳೆ ದಿನ ಅದು ಕೆಟ್ಟು ನಿಂತಿತು. ಅದನ್ನೇ ಕಾಯುತ್ತಿದ್ದ ನಾನು ಅದನ್ನೆತ್ತಿ ಅಟ್ಟದ ಮೇಲಿಟ್ಟೆ. ಆ ಜಾಗಕ್ಕೆ ಮತ್ತೆ ಕ್ವಾರ್ಟ್ಜ್ ಗಡಿಯಾರವನ್ನು ಅಣ್ಣ ತಂದು ಹಾಕಿದ.
ಈಗ ಮತ್ತೆ ಕೈಗಡಿಯಾರದ ವಿಷಯಕ್ಕೆ ಬರೋಣ. ಆಗ ಯಾರದಾದ್ರೂ ಕೈಯಲ್ಲಿ ಚಿನ್ನದ ಬಣ್ಣದ ವಾಚು ಹೊಳೆಯುತ್ತಿದೆ ಎಂದರೆ, ಹೊಸದಾಗಿ ಮದುವೆಯಾಗಿದ್ದಾನೆ ಎಂದು ಸುಲಭವಾಗಿ ಊಹಿಸಬಹುದಿತ್ತು. ‘ವರದಕ್ಷಿಣೆ, ಉಂಗುರ ಮತ್ತು ಚೈನ್ ಜತೆಗೆ ಗೋಲ್ಡ್ ಕೇಸ್ ವಾಚ್ ಕೊಡಬೇಕು’ ಎಂಬ ಬೇಡಿಕೆಯನ್ನು ವರಮಹಾಶಯರು ಮುಂದಿಡುತ್ತಿದ್ದರು. ಅಂಥಾ ವಾಚ್ ಕಟ್ಟುವ ಬಯಕೆ ನಾವು ಹುಡುಗರಾಗಿದ್ದಾಗಲೇ ಎದೆಯಲ್ಲಿ ಗರಿಗೆದರಿತ್ತು. ನಾನು ಎಸ್ಸೆಸ್ಸೆಲ್ಸಿ ಯನ್ನು ಸೆಕಂಡ್ ಕ್ಲಾಸಲ್ಲಿ ಪಾಸ್ ಮಾಡಿದ್ದು ನಮ್ಮ ಮನೆಮಂದಿಗೆಲ್ಲಾ ಆಶ್ಚರ್ಯದ ಸಂಗತಿ! ಒಂದೋ ಎರಡೋ ಸಬ್ಜೆಕ್ಟ್‌ನಲ್ಲಿ ಡುಮ್ಕಿ ಹೊಡಿತಾನೆ ಎಂದು ಅವರು ಭಾವಿಸಿದ್ದರು. ಬೆಂಗಳೂರಿನಲ್ಲಿದ್ದ ಅಣ್ಣನಿಗಂತೂ ಖುಷಿಯೋ ಖುಷಿ. ಅವನು ಪ್ರತಿ ಸಲ ಊರಿಗೆ ಬಂದಾಗ ೧೦೦ ಗ್ರಾಂ ಚೌಚೌನ್ನು ನನಗಾಗಿ ತರ್ತಾಯಿದ್ದ. ಆ ಸಲ ಸ್ವೀಟನ್ನು ತಂದಿದ್ದ. ಅದೇ ಟೈಮಲ್ಲಿ ಅಪ್ಪನೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ಜತೆಯಲ್ಲಿದ್ದ ಅಣ್ಣ, ‘ಅಪ್ಪಾ ಬಾಬುಗೊಂದು ಗಡಿಯಾರ ಕೊಳ್ಳೋಣವೇ’ ಎಂದ. ಎಚ್‌ಎಂಟಿ ಶೋರೂಂಗೆ ಹೊರಟಿತು ನಮ್ಮ ಸವಾರಿ.
ಅಲ್ಲಿ ಕೀ ಕೊಡುವ ಗಡಿಯಾರಗಳನ್ನು ಅಪ್ಪಾ ನೋಡ್ತಾಯಿದ್ದರು. ಆದರೆ ಅಣ್ಣ, ಕ್ವಾರ್ಟ್ಜ್ ಗಡಿಯಾರಗಳನ್ನು ಕೈಯಲ್ಲಿಡಿದಿದ್ದ. ‘ಅವೆಲ್ಲಾ ಜಾಸ್ತಿ ರೇಟು, ಇದ್ಯಾವುದಾದರೂ ನೋಡು’ ಎಂದರು. ಆದರೆ ಅಣ್ಣ ಅತ್ತ ಸುಳಿಯಲೇ ಇಲ್ಲ. ೬೬೮ ರೂಪಾಯಿ ನೀಡಿ ಕ್ವಾರ್ಟ್ಜ್ ಗಡಿಯಾರ ಕೊಡಿಸಿದ. ಆಗಿನ ಕಾಲಕ್ಕೆ ಅದು ಒಳ್ಳೆ ಗಡಿಯಾರ(ಈಗಲೂ ಸಹಾ). ಹೀರೊ ಹೊಂಡಾ ಸರ್ವೀಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಆಗ ಬರ್ತಾಯಿದ್ದ ಸಂಬಳ ಬರೀ ೪೦೦ ರೂಪಾಯಿ. ಗಡಿಯಾರ ಖರೀದಿಸಿದ ಮೇಲೆ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿಂದೆವು. ಬೆಂಗಳೂರಿನ ಅಂದಿನ ಟ್ರಾಫಿಕ್, ಬಿಎಂಟಿಸಿ ಬಸ್‌ಗಳು, ಜನ ಜಾತ್ರೆ -ಇವೆಲ್ಲವೂ ನನ್ನ ಕಣ್ಣಿಂದ ಕದಲದ ಚಿತ್ರಗಳು.
ಅಣ್ಣ, ಗಡಿಯಾರ ಕೊಡಿಸಿ ಇಂದಿಗೆ ದಶಕಗಳು ಸವೆದಿವೆ. ಆಗಾಗ ಸೆಲ್ ಹಾಕಿಸಿದ್ದು ಬಿಟ್ಟರೇ ರಿಪೇರಿ ತಂಟೆಗೆ ಹೋಗಿಲ್ಲ. ಯಾಕೋ ಗಡಿಯಾರ ಕಂಡಾಗಲೆಲ್ಲ, ಅಣ್ಣ ನೆನಪಾಗುತ್ತಾನೆ. ಅಣ್ಣನೊಂದಿಗೆ ನಮ್ಮ ಮನೆಮಂದಿ ನೆನಪಾಗುತ್ತಾರೆ. ಬೆಂಗಳೂರಿಗೆ ಬಂದಾಗ ಅದು ನನ್ನ ಕೈಯಲ್ಲಿತ್ತು. ಅದರ ಗಾಜು ಒಡೆದದ್ದು, ಅದನ್ನು ಹಾಕಿಸಿದ್ದು ಬಿಟ್ಟರೆ ಬೇರೇನು ಕಿರಿಕಿರಿಗಳಿರಲಿಲ್ಲ. ಈ ಮಧ್ಯೆ ವಾಚನ್ನು ಎಲ್ಲಾದರೂ ನಾನು ಕಳೆದುಕೊಳ್ಳುತ್ತೇನೆ ಎಂದು ಮನಸಿಗೆ ಅನ್ನಿಸತೊಡಗಿತು. ಮತ್ತೊಬ್ಬ ಅಣ್ಣ ಮೊಬೈಲ್ ಕೊಡಿಸಿದ ಮೇಲೆ ಗಡಿಯಾರದ ಅವಶ್ಯಕತೆ ಇಲ್ಲ ಎಂದು ನನಗೆ ನಾನೇ ಅಂದುಕೊಂಡೆ. ಆ ನೆಪದಲ್ಲಿ ಅಣ್ಣನ ಎಚ್‌ಎಂಟಿ ವಾಚನ್ನು ಜೋಪಾನ ಮಾಡುವುದು ಒಳ ಹುನ್ನಾರ! ಅಂದಿನಿಂದ ಗಡಿಯಾರ ಮನೆಯ ಶೋಕೇಸ್‌ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ.
ಗಡಿಯಾರ ಧರಿಸುವುದು ಹಿಂದೆ ದೌಲತ್ತಿನ ಸಂಕೇತ. ಜತೆಗೆ ಶ್ರೀಮಂತಿಕೆ ಮತ್ತು ಗಣ್ಯತೆ ಪ್ರದರ್ಶಿಸುವ ನೆಪವಾಗಿತ್ತು. ಆದರೆ ದಿನಗಳು ಬದಲಾಗಿವೆ. ಕಂಪನಿ ಸಿಇಒ ಸೇರಿದಂತೆ ಬಹುತೇಕರ ಕೈಯಲ್ಲೀಗ ಗಡಿಯಾರ ಉಳಿದಿಲ್ಲ. ಮಾತಿಗೂ, ಸಮಯಕ್ಕೂ ಎಲ್ಲಕ್ಕೂ ಎಲ್ಲರ ಕೈಯಲ್ಲೂ ಕಿಣಿಕಿಣಿ ಮೊಬೈಲ್.
ಎಲ್‌ಕೆಜಿ ಓದುವ ಮಗಳಿಗೆ ಅಣ್ಣ ನಂಬರ್ ತೋರಿಸುವ ಗಡಿಯಾರ ತಂದುಕೊಟ್ಟಿದ್ದಾನೆ. ಬಯಸುವ ಮೊದಲೇ ಗಡಿಯಾರ ಅವಳ ಕಾಲಬುಡಕ್ಕೆ ಬಿದ್ದಿದೆ. ಹೀಗಾಗಿ ಅವಳಲ್ಲಿ ಗಡಿಯಾರದ ಕನಸಿಲ್ಲ. ಮುಳ್ಳುಗಳ ಗೊಂದಲಗಳೂ ಇಲ್ಲ.

Wednesday, August 13, 2008

ಗ್ರಾಮೀಣ ಭಾರತದ ಇಷ್ಟ-ಕಷ್ಟಗಳು!


ಯಾರನ್ನಾದರೂ ಮಾತನಾಡಿಸಿ ನೋಡಿ, ತಮ್ಮ ಊರಿನ ವಿಷಯ ಬಂದಾಗ ಎಲ್ಲರೂ ಭಾವುಕರಾಗುತ್ತಾರೆ. ‘ನಮ್ಮ ಊರು(ಹಳ್ಳಿ) ಆಗಿದೆ, ಹೀಗಿದೆ.. ಇಲ್ಲೇನಿದೆ ಮಣ್ಣು’ ಎನ್ನುತ್ತಾ ತಮ್ಮ ನೆನಪಿನ ಮೆರವಣಿಗೆಗೆ ಕರೆದೊಯ್ಯುತ್ತಾರೆ. ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ವೈರಾಗ್ಯದ ಮಾತಾಡುತ್ತಾರೆ. ತಮ್ಮ ಜೀವನ ಸಂಧ್ಯಾಕಾಲವನ್ನು ಹಳ್ಳಿಯಲ್ಲಿ ಸವೆಸಬೇಕು ಎನ್ನುತ್ತಾರೆ.‘ಈಗಲೇ ಹೋಗಲು ಇಷ್ಟ, ಆದರೆ ನಮ್ಮ ಕಮಿಟ್‌ಮೆಂಟ್‌ಗಳು ನಾವು ನಮ್ಮಿಷ್ಟದಂತೆ ಬದುಕಲು ಬಿಡುತ್ತಿಲ್ಲ’ ಎಂದು ನೂರೊಂದು ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ ಹಳ್ಳಿಗಳ ಕುರಿತಾದ ರೊಮ್ಯಾಂಟಿಕ್ ಕಲ್ಪನೆ ಜಾರಿಯಲ್ಲಿದೆ. ಒಂದರ್ಥದಲ್ಲಿ ಹಳ್ಳಿಗಳು ಹಳ್ಳಿಗಳಾಗೇ ಇರಬೇಕಾ ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ಒಂದರ್ಥದಲ್ಲಿ ಹಳ್ಳಿಗಳು ಬದಲಾಗಿವೆ. ಅತ್ತ ಪಟ್ಟಣಗಳೂ ಆಗದೇ, ಇತ್ತ ಹಳ್ಳಿಯ ಸೊಗಡನ್ನೂ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿವೆ. ಸ್ವಾತಂತ್ರ್ಯಾನಂತರ ಹಳ್ಳಿಗಳ ಸ್ಥಿತಿ ಸುಧಾರಿಸಬೇಕಾಗಿತ್ತು. ಆದರೆ ಬಹುತೇಕ ಹಳ್ಳಿಗಳು ಇನ್ನೂ ವಿದ್ಯುತ್ ದೀಪವನ್ನೇ ಕಂಡಿಲ್ಲ. ರಸ್ತೆಗಳಿಲ್ಲದೇ ಅನೇಕ ಹಳ್ಳಿಗಳು ದ್ವೀಪದಂತೆ ಉಳಿದಿವೆ. ಒಂದು ಬೆಂಕಿಪೊಟ್ಟಣಕ್ಕಾಗಿ ಎರಡು ಮೂರು ಮೈಲು ಸವೆಸಬೇಕಾದ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ. ನನ್ನಳ್ಳಿಯ ಕಾಣುತ್ತಲೇ ಗ್ರಾಮೀಣ ಭಾರತವನ್ನು ಊಹಿಸುವ ಯತ್ನ ನನ್ನದು. ಹೊಟ್ಟೆಪಾಡಿಗಾಗಿ(ವೃತ್ತಿ) ಮಾಯಾನಗರಿ ಬೆಂಗಳೂರಿನಲ್ಲಿ ನಾನಿದ್ದರೂ, ನನ್ನ ಮೂಲ ಬೇರುಗಳು ನನ್ನೂರಿನಲ್ಲಿಯೇ ಇವೆ. ಆನೂಡಿ, ನನ್ನಮ್ಮನ ಊರು. ನನ್ನ ಊರು ಸಹಾ ಹೌದು. ಬಾಲ್ಯಕ್ಕೊಂದು ಬೆರಗುಕೊಟ್ಟ, ಬದುಕಿಗೊಂದಿಷ್ಟು ಮೌಲ್ಯಗಳನ್ನು ಬಳುವಳಿಯಾಗಿ ಕೊಟ್ಟ ಆನೂಡಿಯನ್ನು ಮರೆಯುವುದಾದರೂ ಹೇಗೆ? ಹೀಗಾಗಿಯೇ ಅಲ್ಲಿನ ತವಕ-ತಲ್ಲಣಗಳು ಈಗಲೂ ನನ್ನನ್ನು ಕಾಡುತ್ತವೆ. ಜನಪ್ರತಿನಿಗಳ ನಿರ್ಲಕ್ಷ್ಯ, ಜನ ಸಾಮಾನ್ಯರಲ್ಲಿ ಜಾಗೃತಿಯ ಕೊರತೆಯಿಂದಾಗಿ ನಾನಾ ಪರಿಸರ ಸಂಬಂ ಸಮಸ್ಯೆಗಳು ಇಂದೂ ಜೀವಂತವಾಗಿ ಉಳಿದಿವೆ, ನಾಳೆಯೂ ಸಮಸ್ಯೆಗಳು ತೀರುತ್ತವೆ ಎಂದು ನನಗನಿಸುವುದಿಲ್ಲ. ಯಾವುದಿದು ಆನೂಡಿ? ಎಲ್ಲಿಯದಿದು ಆನೂಡಿ? -ಆನೂಡಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡ ಖ್ಯಾತನಾಮರು ಇಲ್ಲದ ಕಾರಣ, ಈ ಬಗ್ಗೆ ತುಸು ಹೇಳುವುದು ಉಚಿತ. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿದೆ ಆನೂಡಿ. ವಿಚಾರವಾದಿ ಎಚ್.ನರಸಿಂಹಯ್ಯ ಅವರ ಹುಟ್ಟೂರಾದ ಹೊಸೂರು ಪಕ್ಕದಲ್ಲಿರುವ ಆನೂಡಿಯ ಏಕೈಕ ಹೆಗ್ಗಳಿಕೆ, ಅಲ್ಲಿನ ಆಂಜನೇಯ ದೇವಸ್ಥಾನ. ಊರ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ದೇವಸ್ಥಾನ ಬಿಟ್ಟರೆ, ಇಲ್ಲಿನ ಬಗ್ಗೆ ಮಾತನಾಡಲು ಇನ್ನೊಂದು ವಿಷಯ ಸಿಗುವುದಿಲ್ಲ.ಎಲ್ಲಾ ಹಳ್ಳಿಗಳಂತೆಯೇ ಆನೂಡಿಯಲ್ಲೂ ಶೌಚದ್ದೊಂದು ಸಮಸ್ಯೆ. ಬಯಲುಗಳಲ್ಲಿನ ಮೋಟು ಗಿಡಗಳ ಮರೆಯಲ್ಲಿ ಅಡಗಿ ಕೊಳ್ಳುವ ಪರಿಸ್ಥಿತಿ ಈಗಲೂ ಇದೆ. ಮೊದಲು ಊರ ಮುಂದಿನ ನಮ್ಮ ಬಣವೆಯಲ್ಲಿನ ತಿಪ್ಪೆ ಹೆಂಗಸರು ಮತ್ತು ಮಕ್ಕಳ ಶೌಚ ಕೇಂದ್ರವಾಗಿತ್ತು. ಅಲ್ಲಿನ ಅರಳೀಕಟ್ಟೆಯಲ್ಲಿ ಮೈಗಳ್ಳರ ಚೌಕಾಭಾರ, ಬಸವನಕಟ್ಟೆ, ಹೆಡ್ ಮತ್ತಿತರ ದುಡ್ಡಿನ ಆಟಗಳ ಪರಿಣಾಮ ಜನಸಂದಣಿ ಹೆಚ್ಚಿದ ಮೇಲೆ ಅಲ್ಲಿಗೆ ಹೋಗಲು ಹೆಣ್ಣು ಮಕ್ಕಳು ಹಿಂದೆ ಮುಂದೆ ನೋಡುವಂತಾಯಿತು. ಸೂರ್ಯ ಹುಟ್ಟುವ ಮುನ್ನ ಅಥವಾ ಸೂರ್ಯ ಮುಳುಗಿ ಕತ್ತಲಾದ ಮೇಲೆ ಇಬ್ಬರು ಮೂವರು ಹೆಂಗಸರು ಜತೆಯಾಗಿ ಬಣವೆ ಕಡೆ ಹೋಗುತ್ತಿದ್ದರು. ಶೌಚದ ಸ್ವಾಭಾವಿಕ ಪ್ರಕ್ರಿಯೆಗೆ, ಸಮಯ ಕಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು. ಊರಿನ ಗಂಡಸರು ಕೆರೆ ಬದಿಗೋ, ತಮ್ಮ ಕರೆಂಟ್ ರೂಂನ ಬಳಿಗೋ ಹೋಗುತ್ತಾರೆ. ಮೂತ್ರ ವಿಸರ್ಜನೆ ನಂತರ, ಸ್ವಚ್ಛತಾ ಕಾರ್ಯಕ್ಕೆ ನೀರು ಬೇಕೇಬೇಕೆಂಬ ನಿಯಮ ಕೆಲವರಿಗಿಲ್ಲ. ಯಾವುದೋ ಹಸಿರು ಗಿಡದ ಸೊಪ್ಪೋ, ಅಂಗೈ ಅಗಲದ ಕಾಗದ ಸಿಕ್ಕಿದರೂ ಸಾಕು! ಆನೂಡಿ ರಸ್ತೆಯಲ್ಲಿ ಬಸ್ ಇಳಿದು, ಊರು ಪ್ರವೇಶಿಸಲಿರುವ ೪-೫ ಅಡಿ ಅಗಲದ ರಸ್ತೆಯಲ್ಲಿ ಬರುವ ಪ್ರತಿಯೊಬ್ಬರೂ, ಮೂಗಿಗೆ ಕರವಸ್ತ್ರವೊಡ್ಡುವುದು ಅನಿವಾರ್ಯ. ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಲೆಕ್ಕಾಚಾರ ಹಾಕಿ, ರೇಖಾಗಣಿತದಲ್ಲಿ ರೇಖೆ ಎಳೆದಂತೆ, ಕೋನಗಳನ್ನು ಸೇರಿಸಿದಂತೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಾಲಿನ ಜತೆ ಗಲೀಜು ಸಂಬಂಧ ಬೆಳೆಸುತ್ತದೆ! ಯಾಕೆ ಹೀಗೆ? ಕಂಪ್ಯೂಟರ್ ಯುಗದಲ್ಲೂ ಇಂಥ ಅಜ್ಞಾನ ಉಳಿದಿರುವುದನ್ನು ಕಂಡಾಗ, ತುಸು ಬೇಸರವಾಗುತ್ತದೆ. ನೈರ್ಮಲ್ಯದ ಬಗ್ಗೆ ಕಾಳಜಿ ಮೂಡಿಸುವ ನಾನಾ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದ್ದರೂ, ಅವು ಆನೂಡಿಯನ್ನು ತಲುಪಿದಂತಿಲ್ಲ. ಜನರಿಗೆ ರಸ್ತೆಬದಿ ಕೂತು, ಹೊಟ್ಟೆಯಲ್ಲಿರುವುದನ್ನು ಖಾಲಿ ಮಾಡಿದರಷ್ಟೆ ಸಮಾಧಾನ! ನಿಮ್ಮೂರಿನಲ್ಲಿ ಏನಿಲ್ಲದಿದ್ದರೂ ಎಲ್ಲಾ ಕಾಲ ಸೂರ್ಯಕಾಂತಿ ಹೂವುಗಳು ರಸ್ತೆ ಬದಿಯಲ್ಲಿ ಮಾತ್ರವಲ್ಲ, ರಸ್ತೆ ಮೇಲೂ ಹರಡಿರುತ್ತವೆ ಎಂದು ಪಟ್ಟಣದ ಗೆಳೆಯನೊಬ್ಬ ಗೇಲಿ ಮಾಡುತ್ತಿರುತ್ತಾನೆ. ನಿರ್ಮಲ ಕರ್ನಾಟಕ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಒಂದಿಷ್ಟು ಹಣವನ್ನು ಸರಕಾರ ನೀಡಿದ್ದು, ಜನರು ಆ ಹಣವನ್ನು ಪಡೆದದ್ದು ಎಲ್ಲವೂ ಆಗಿದೆ. ಕೆಲವು ಶೌಚಾಲಯಗಳು ಅರ್ಥದಲ್ಲೇ ನಿಂತಿವೆ. ಪೂರ್ಣಗೊಂಡಿರುವ ಕೆಲವು ಶೌಚಾಲಯಗಳನ್ನು ಸ್ಟೋರ್ ರೂಂನಂತೆ ಮೂಟೆಗಳನ್ನು ಹಾಕಲು ಬಳಸುತ್ತಿದ್ದಾರೆ!. ಶೌಚ ಕೊಠಡಿ ಬಳಸಲು ಇಲ್ಲಿನ ಜನರಿಗೆ ಎಂಥದ್ದೋ ಮುಜುಗರ! ಇಲ್ಲಿನ ಶೌಚ ಪುರಾಣ ಕೇಳಿ, ನಿಮಗೆ ಅಚ್ಚರಿಯಾಗಬಹುದು. ಆನೂಡಿಗೆ ಬಂದರೆ ಅದು ಅನುಭವಕ್ಕೆ ಬರುತ್ತದೆ. ದಟ್ಟ ಬಿಸಲಿನ ಬೆನ್ನುತಟ್ಟುವಂತೆ ಎದ್ದು ನಿಂತ ಜಾಲಿ ಗಿಡಗಳು, ಅವುಗಳ ಅಡಿಯಲ್ಲಿ ಮಲಮೂತ್ರದ ರಾಶಿ. ಅದರಿಂದ ಸೂಸುವ ತಾಜಾ ಪರಿಮಳ! ಆನೂಡಿ ಬಗ್ಗೆ ಅಸಹ್ಯ ಪಟ್ಟುಕೊಳ್ಳಲು, ಹೊಸಬರಿಗೆ ಇನ್ನೇನು ಬೇಕು? ಆನೂಡಿ ಎಂದಾಗ ಅಜ್ಜಿಮನೆಯ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡ ನೆನಪಾಗುತ್ತದೆ. ಗಿಡ ಸಣ್ಣದಾದರೂ, ಮೈತುಂಬ ಹಣ್ಣು! ಮನೆ ಮಗನಂತಿದ್ದ ನರಸಪ್ಪ (ನಾನು ಈ ಮನೆಯ ದೊಡ್ಡ ಮಗ ಎಂದು ಆತನೇ, ಊರು ಜನರಿಗೆ ಆಗಾಗ ಹೇಳುತ್ತಿದ್ದ. ಜೀತದ ಪರಿಕಲ್ಪನೆ ಆಗಂತೂ ಇರಲಿಲ್ಲ. ನನ್ನ ಅಜ್ಜಿಯ ಸೆರಗಿನಡಿಯಲ್ಲಿ ಸುಖ ಉಂಡಿದ್ದ ನರಸಪ್ಪ ಮನೆಯವನೇ ಆಗಿ ಬಿಟ್ಟಿದ್ದ) ತರುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣು ಈಗಲೂ ಬಾಯಲ್ಲಿ ನೀರೂರುತ್ತದೆ. ಕಬ್ಬನ್ನು ತಂದು, ಸಣ್ಣಗೆ ಪಿಚ್ಚಗೆ ಮಾಡಿ ಕೊಡುವಲ್ಲಿ ಆತನಿಗೆ ಎಂಥದ್ದೋ ಅಕ್ಕರೆ. ನಾವು ಸಾಕು ಎಂದಷ್ಟು, ಇನ್ನಷ್ಟು ಮತ್ತಷ್ಟು ಎಂದು ಕೊಡುತ್ತಲೇ ಇದ್ದ. ತೋಟಗಳು ಬೋಳಾಗಿ, ಈಗ ಅವೆಲ್ಲಾ ಸೈಟುಗಳಾಗಿವೆ. ಊರು ಮುಂದಿನ ನಮ್ಮಜ್ಜಿಯವರ ತಿಪ್ಪೆಯಿದ್ದ ಹೊಲವನ್ನು ಸರಕಾರವೇ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನವಾಗಿ ಪರಿವರ್ತಿಸಿದೆ. ಅಲ್ಲಿನ ನೀರಿನ ಆಸರೆಯಾಗಿದ್ದ ವೊಡ್ಡು ಮತ್ತು ಬಣವೆಯಲ್ಲಿದ್ದ ಹತ್ತಾರು ಹಣ್ಣಿನ ಮರಗಳು ಈಗ ನೆನಪಷ್ಟೆ. ಮಳೆಯನ್ನೇ ಕೃಷಿಗಾಗಿ ನಂಬಿರುವ ಇಲ್ಲಿನ ಜನರು ಮೊದಲು ಸಮೃದ್ಧವಾಗಿಯೇ ಇದ್ದರು. ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ಕೆರೆಯಲ್ಲಿ ನೀರಿರುತ್ತಿತ್ತು. ಭತ್ತ, ಕಬ್ಬು, ರಾಗಿ, ಅಲಸಂದೆ, ಅವರೆ, ಹೆಸರುಕಾಳು, ಸೂರ್ಯಕಾಂತಿ, ಮೆಣಸಿನಕಾಯಿ -ಹೀಗೆ ಎಲ್ಲವನ್ನೂ ಬೆಳೆಯುತ್ತಿದ್ದರು. ಅವುಗಳನ್ನು ಕಟ್ಟಿಡಲು ಗೋಣಿ ಚೀಲಗಳು ಸಾಕಾಗದೇ, ಮನೆಯ ಮೂಲೆಗಳಿಗೆ ರಾಶಿ ಸುರಿಯುತ್ತಿದ್ದರು. ಮನೆಯಲ್ಲಿನ ವಾಡೆಗಳಲ್ಲಿ ಧಾನ್ಯ ಲಕ್ಷ್ಮಿ ನೆಲೆ ನಿಂತಿದ್ದಳು. ಭೂಮಿಯೊಳಗಿನ ಕಣಜಗಳು ಸಮೃದ್ಧವಾಗಿರುತ್ತಿದ್ದವು. ಮಾವಿನ ತೋಪು, ಆಲೆಮನೆ, ತೋಟಗಳು ಕಣ್‌ಕುಕ್ಕುವಂತಿದ್ದವು. ಬಾಂಬೆ ಮಿಠಾಯಿ, ಪಾಪನ್ ಪಪ್ಪು, ಐಸ್ ಕ್ಯಾಂಡಿ, ಬಟ್ಟೆ ಪಿನ್ -ಹೀಗೆ ಏನೇ ಬರಲಿ, ನಮ್ಮಜ್ಜಿ ದುಡ್ಡು ಕೊಟ್ಟದ್ದಕ್ಕಿಂತ ರಾಗಿ ಕೊಟ್ಟಿದ್ದೆ ಹೆಚ್ಚು. ಮೊರಗಳಲ್ಲಿ ತುಂಬಿತುಂಬಿ ಕೊಡುವುದು ನಮ್ಮಜ್ಜಿ ಪದ್ಧತಿಯಾಗಿತ್ತು. ಮನೆಯಲ್ಲಿ ಹಸು, ಎಮ್ಮೆ, ಎತ್ತು, ಕರು -ಹೀಗೆ ಜಾನುವಾರುಗಳಿಗೊಂಡು ಜಾಗ. ಮನೆಯಲ್ಲಿ ಬೆಣ್ಣೆ, ತುಪ್ಪ, ಮೊಸರಿಗೆ ಎಂದೂ ಕೊರತೆ ಇರಲಿಲ್ಲ. ಊರಿನ ನಾನಾ ಮಂದಿ ಮಜ್ಜಿಗೆ ಕೊಡಕ್ಕಾ, ಮೊಸರು ಕೊಡಕ್ಕಾ ಎಂದು ಬಟ್ಟಲಿಡಿದು ಬರುತ್ತಿದ್ದರು. ನಮ್ಮಜ್ಜಿ ಇಲ್ಲ ಎಂಥದ್ದು ನನಗಂತೂ ನೆನಪಿಲ್ಲ. ಆದರೆ ಅದೆಲ್ಲವೂ ಈಗ ಗತಕಾಲದ ವೈಭವ. ಕಳೆದ ೧೦-೧೫ ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಬಾವಿಯಲ್ಲಿನ ನೀರು ಬತ್ತಿ ಬಹಳ ವರ್ಷಗಳಾಗಿವೆ. ಪೈಪೋಟಿಗೆ ಬಿದ್ದವರಂತೆ ಕೊರೆಸಿದ ಕೊಳಾಯಿಗಳಲ್ಲಿ ಕೆಲವು ಕಾಲೆತ್ತಿವೆ. ಬೋರು, ಮೋಟರ್‌ಗೆ ಸಾವಿರಾರು ರೂಪಾಯಿ ಸುರಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆರೆ ತುಂಬಿ ಎಷ್ಟು ವರ್ಷವಾಯಿತೋ ಗೊತ್ತಿಲ್ಲ. ಮುತ್ಯಾಲಮ್ಮನ ಪರಿಸೆ ಮಾಡದ ಕಾರಣ, ಮಳೆಯಿಲ್ಲ ಎಂದು ಮೊನ್ನೆ ಪೂಜಾರಿ ಮೈತುಂಬಿಕೊಂಡಿದ್ದ ಆಂಜನೇಯ ಸ್ವಾಮಿ ಹೇಳಿದನಂತೆ. ನನ್ನಪ್ಪನಿಗೆ ನನ್ನಜ್ಜ ಬರೆಯುತ್ತಿದ್ದ ಬಹುತೇಕ ಕಾಗದಗಳಲ್ಲಿ, ‘ಇಲ್ಲಿ ಮಳೆಯಿಲ್ಲ‘ ಎಂಬ ಸಾಲು ಸಾಮಾನ್ಯವಾಗಿಬಿಟ್ಟಿದೆ. ಮೊನ್ನೆ ಸಿಕ್ಕಿದ್ದ ತಾತಾ, ಮಳೆ ಕೊರತೆಯ ಬಗ್ಗೆಯೇ ಮಾತಾಡುತ್ತಿದ್ದರು. ವ್ಯವಸಾಯ ಲಾಸಿನ ಬಾಬತ್ತು ಎಂದು ಇಲ್ಲಿನ ಜನರು ಭಾವಿಸಿದ್ದಾರೆ. ಮನೆ ಮಕ್ಕಳು ಪಟ್ಟಣ ಸೇರಿ, ಹೊಟ್ಟೆ ಪಾಡು ನೋಡಿಕೊಂಡಿದ್ದಾರೆ. ನಮ್ಮ ಕಾಲವಂತೂ ಹೀಗಾಯಿತು ಅವರಾದರೂ ಸುಖವಾಗಿರಲಿ ಎಂಬುದು ಅನೇಕರ ಮಾತು. ಹಸಿರ ಜಾಗದಲ್ಲೀಗ ಬರೀ ಸೀಮೆ ಜಾಲಿಯೇ ನಿಂತಿದೆ. ‘ಏಕೆ ಓಡುವಿರಿ ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಎಂಬ ಕೂಗು ಮುಷ್ಕರ ಹೂಡಿರುವ ಮಳೆ ಮೋಡಗಳಿಗೆ ಕೇಳಿಸುತ್ತಿಲ್ಲ. ಮನೆಮಂದಿಗಾಗುವಷ್ಟು ಬೆಳೆದು ಸಂತೃಪ್ತರಾಗಿದ್ದ ನನ್ನ ಅಜ್ಜಿ ಮನೆಯವರೇ ಈಗ, ಅಂಗಡಿಯಲ್ಲಿ ಅಕ್ಕಿ ತರುತ್ತಿದ್ದಾರೆ. ಆಲೆಮನೆ ಎಂಬುದು ಎಲ್ಲಿ ಹೋಯಿತೋ? ಬೆಲ್ಲದ ಘಮಲು ಮನೆಯಲ್ಲೀಗ ಉಳಿದಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಕೆ.ಜಿ.ಲೆಕ್ಕದಲ್ಲಿ ಸಕ್ಕರೆ ತರುವ ನನ್ನ ತಾತನ ಕಂಡಾಗ, ಸಕ್ಕರೆ ರಾಜನಿಗೆ ಎಂಥಾ ಸ್ಥಿತಿ ಬಂತು ಅನ್ನಿಸುತ್ತದೆ? ಬೆಂಗಳೂರಿನಲ್ಲಿರುವ ಮಗ, ಜಮೀನನ್ನು ಮಾರೋಣ ಅನ್ನುತ್ತಿದ್ದಾನಂತೆ. ಹಳ್ಳಿಯಲ್ಲಿ ಭೂಮಿ ಕೇಳೋರಿಲ್ಲ. ಇಲ್ಲಿ ಆ ಹಣದಲ್ಲಿ ಸೈಟು ತೆಗೆದರೆ, ಒಂದೆರಡು ವರ್ಷಕ್ಕೆ ದ್ವಿಗುಣವಾಗುತ್ತೆ ಅನ್ನೋದು ಅವರ ಲೆಕ್ಕಾಚಾರ.

Sunday, August 3, 2008

ಗಾಂಧಿ ‘ಹನಿ’ಗಳು

ಗಾಂಧಿ!

ಕೈಲಾಗದ ಕಾರಣ
ಅಹಿಂಸೆಯೆಂದನಲ್ಲ
ಸುಳ್ಳು ಹೇಳಿದ್ನಲ್ಲ
ಬೀಡಿ ಸೇದಿದ್ನಲ್ಲ
ಕಳ್ಳತನ ಮಾಡಿದ್ನಲ್ಲ
ಆ ಬೊಕ್ಕತಲೆಯ
ಮಾಂಸವಿಲ್ಲದ
ಬಡಕಲ ದೇಹದ
ಹರೆ ಹುಚ್ಚಮುದುಕನೇ
ತಾನೇಗಾಂಧಿ ಅಂದ್ರೆ!

ವಿಳಾಸ

ಸ್ವಲ್ಪ ಮುಂದೆ ಹೋಗಿ
ಅಲ್ಲಿದೆ ರಾಜೀವ್‌ ಗಾಂಧಿ
ಸಮುದಾಯ ಭವನ !
ಅದರ ಬಲಕ್ಕೆ ಕತ್ತು
ತಿರುಗಿಸಿದರೆ ಕಾಣುತ್ತೆ
ಶ್ರೀ ಬಸವೇಶ್ವರ ಆಸ್ಪತ್ರೆ!
ಅದರ ಎಡದಲ್ಲಿದೆ
ಬಿ.ಆರ್‌.ಅಂಬೇಡ್ಕರ್‌ ರಸ್ತೆ !
ರಸ್ತೆಯ ಎಡ ಭಾಗದಲ್ಲಿ
ನೆಹರು ಕ್ರೀಡಾಂಗಣವಿದೆ!
ತಣ್ಣನೆಯ ಸೋನಿಯಾಗಾಂಧಿ ಉದ್ಯಾನವಿದೆ!
ಇನ್ನು ಕಣ್ಣಳತೆಯ ದೂರದಲ್ಲಿದೆ
ಇಂದಿರಾಗಾಂಧಿ ವಿಶ್ವವಿದ್ಯಾಲಯ!
ಅಲ್ಲೇ ಅಲ್ಲೇ
ನಮ್ಮ ಬಡ-ಬಡವ
ಗಾಂಧಿಮನೆ...ಮನೆಯಲ್ಲ... ಗುಡಿಸಲು!

ಕೊಲೆ

ಅಂದು ಗೋಡ್ಸೆಯಿಂದ
ಗಾಂಧಿಯ ಭೌತಿಕ ಕೊಲೆ!
ಇಂದು ನಮ್ಮಿಂದ
ಗಾಂಧಿಯ ಸೈದ್ಧಾಂತಿಕ ಕೊಲೆ!

ಸುರಿಯುತ್ತಲೇ ಇದೆ ಪಾಪಿ ಮಳೆ ಮುಗಿಯದ ಕಣ್ಣೀರಿನಂತೆ...

ನನಗೆ ಈಚೀಚೆಗೆ ಮಳೆ
ಎಂದರೆ ಭಯ! ಅಸಹ್ಯ, ಜಿಗುಪ್ಸೆ..
ಒಂದೊಂದು ಹನಿ
ಮೈ ಮೇಲೆ ಬಿದ್ದರೂ ಯಾತನೆ
ಅಲ್ಲೆಲ್ಲ ಬೊಬ್ಬೆಗಳು!

ಸುರಿಯುತ್ತಲೇ ಇದೆ ಮಳೆ
ಮುಗಿಯದ ಕಣ್ಣೀರಿನಂತೆ! ?
ಯಾಕೆ ಮಗು ಮಲಗಲಿಲ್ವೇ
ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..
ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!

ಹೊರಗಡೆ ಜಿಟಿಜಿಟಿ ಮಳೆ
ಒಳಗೆ ನಾ ಒಂಟಿ
ಮಳೆಯನ್ನು ನೋಡುವ
ಬೆರಗು ನನ್ನಲ್ಲಿ ಉಳಿದಿಲ್ಲ..
ನಾನು ನಿಜಕ್ಕೂ ಬದುಕಿದ್ದೇನೆಯೇ?

ಗಡಿಯಾರ ಓಡುತ್ತಿದೆ.. 10,11,12..
ನಿಂತ ಮಳೆ.. ಶುರುವಾದ ಮಳೆ
ಎಲ್ಲವೂ ಗೊತ್ತಾಗುತ್ತಿದೆ...
ದೀಪ ಆರಿಸಲು ಮನಸ್ಸಾಗುತ್ತಿಲ್ಲ..
ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ ಸದ್ಯಕ್ಕೆ

ಎಲ್ಲವೂ ಖಾಲಿ... ಹೆದರಿಸುವ ನಾಳೆಗಳು
ನಿದ್ದೆ ಕೆಡಿಸುವ ದೆವ್ವಗಳು..
ಮಳೆ ಬಂದು ಭೂಮಿ ತಂಪಾಗುತ್ತದೆ..
ನನ್ನ ಎದೆ ನೆನೆಯುವಂತಹ ಮಳೆ
ಮುಂದೆಯಾದರೂ ಇದೆಯೋ ಇಲ್ಲವೋ?

ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..
ಹಾಸಿದ ಹಾಸಿಗೆ ಮೇಲೆ ನಾನು..
ನನ್ನ ಜೊತೆಗೆ ದಿಂಬು, ಅದರ ಮೇಲೆ
ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..
ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!

ಉಲ್ಲಾಸದ ಹೂಮಳೆ ಎಂದು ಹೊಟ್ಟೆ
ತುಂಬಿದವರು ಕುಣಿದು ಕುಪ್ಪಳಿಸಲಿ..
ದೇವರಿಗಿಂತಲೂ ಹೆಚ್ಚು ಮಳೆಯನ್ನು
ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,
ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!

ಓ ಸುತ್ತಲೂ ಅಂಧಕಾರ.. ಇದ್ದ
ಒಂದೇ ಒಂದು ಬೆಳಕು ಸಹಾ ಕಣ್ಮರೆ..
ಪಾಪಿ ಮಳೆ ದೀಪ ಆರಿಸಿತು.. ನೀನು
ಏನು ಬೇಕಾದರೂ ಆರಿಸಬಹುದು
ನನ್ನೆದೆಯ ಅಗ್ನಿಕುಂಡ ಆರಿಸಲಾರೇ..

ತಾಕತ್ತಿದ್ದರೆ ಪ್ರಯತ್ನಿಸು..
ನಿನಗೆ ಒಳ್ಳೆಯದಾಗಲಿ..

Friday, June 13, 2008

ನಿನ್ನೆ ಅಲ್ಲಿ.. ಇಂದು ಇಲ್ಲಿ.. ನಾಳೆ ಎಲ್ಲೋ?

‘ ಸ್ಥಾವರಕ್ಕಳಿವುಂಡು, ಜಂಗಮಕ್ಕಳಿವಿಲ್ಲ ’ ಎಂಬ ಮಾತಿನಲ್ಲಿ ಈಗಿನ ಯುವಕರಿಗೆ ನಂಬಿಕೆ. ಈಗೀಗ ಕೆಲಸ ಹುಡುಕುವುದೆಷ್ಟು ಸಾಮಾನ್ಯವೋ, ಕೆಲಸ ಬಿಡುವ ಪ್ರವೃತ್ತಿಯೂ ಸಾಮಾನ್ಯವೆನ್ನಿಸಿದೆ. ಪದೇಪದೇ ಕೆಲಸ ಬದಲಿಸುವ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಐಟಿ ರಂಗದಲ್ಲಿ ಈ ವಲಸೆಯಾಟ ಹೆಚ್ಚು.
ಸರಕಾರಿ ಉದ್ಯೋಗ ಸಿಕ್ಕಿದರೆ, ಬದುಕು ಸಾರ್ಥಕವಾಯಿತು ಎನ್ನುವ ಭಾವನೆ ಮೊದಲು ಅನೇಕರಲ್ಲಿತ್ತು. ಆದರೆ, ಸಾಫ್ಟ್‌ವೇರ್ ಹಕ್ಕಿ ರೆಕ್ಕಿ ಬಿಚ್ಚಿದ ಮೇಲೆ ಪರಿಸ್ಥಿತಿ ಬದಲಾಗಿದೆ. ಡಾಲರ್‌ಗಳಲ್ಲಿ ಸಂಬಳವನ್ನು ಲೆಕ್ಕ ಹಾಕಲಾಗುತ್ತಿದ್ದು, ಸಂಬಳ ನಾಲ್ಕೈದು ಅಂಕೆಗಳನ್ನು ತಲುಪಿದೆ. ಕೆಲಸ ಎಲ್ಲಿ, ಹೇಗೆ ಅನ್ನುವುದಕ್ಕಿಂತಲು ಸಂಬಳ ಎಷ್ಟು ಅನ್ನೋದು ಈಗಿನ ಪೀಳಿಗೆಯ ಮೂಲಭೂತ ಪ್ರಶ್ನೆ. ಸಂಬಳದ ಅಂಕೆ-ಸಂಖ್ಯೆಗಳ ಬೆನ್ನತ್ತಿಯೋ ಅಥವಾ ಬೇರೆ ಕಾರಣಕ್ಕೋ, ಕಂಪನಿಯಿಂದ ಕಂಪನಿಗೆ ಜಿಗಿಯುತ್ತಲೇ ಇರುತ್ತಾರೆ.
ಗೂಡಿಂದ ಗೂಡಿಗೆ ಹಾರುವ ಪ್ರವೃತ್ತಿ ತಡೆಯಲು, ಪ್ರತಿಭಾವಂತರು ಮತ್ತು ಅನುಭವಿಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಕಂಪನಿಗಳು ಅನೇಕ ಕಸರತ್ತುಗಳನ್ನು ಮಾಡುತ್ತವೆ. ಆರು ತಿಂಗಳಿಗೊಮ್ಮೆ ಸಂಬಳದಲ್ಲಿ ಹೆಚ್ಚಳ(ಕನಿಷ್ಠ ಶೇ.೧೫ರಿಂದ ೨೦), ವರ್ಷಕ್ಕೆರಡು ಸಲ ಮನರಂಜನೆಗಾಗಿ ಪಿಕ್ನಿಕ್, ಆಗಾಗ ಕೆಲಸದ ಒತ್ತಡ ಕಡಿಮೆ ಮಾಡಲು ನಾನಾ ಕಾರ್ಯಕ್ರಮ, ತರಬೇತಿ -ಹೀಗೆ ಕಂಪನಿಗಳು ಉದ್ಯೋಗಿಗಳನ್ನು ಹಿಡಿದಿಡಲು ಸೌಲತ್ತುಗಳನ್ನು ಒದಗಿಸುತ್ತವೆ. ಆದರೆ ಈ ಟೆಕ್ಕಿಗಳು ವರ್ಷಗಳಿರಲಿ ಒಂದಷ್ಟು ತಿಂಗಳೂ ಒಂದೆಡೆ ನಿಲ್ಲುವ ಜಾಯಮಾನವನ್ನೇ ಹೊಂದಿಲ್ಲ. ಕೆಲಸಕ್ಕೆ ಸೇರಿದ ದಿನವೇ, ಕಾಲು ತೆಗೆಯುವ ಲೆಕ್ಕಾಚಾರ ಅವರ ಮನದಲ್ಲಿ!
ನುರಿತ ಕೆಲಸಗಾರನಿಗೆ ರತ್ನಗಂಬಳಿ
ಬಿಸಿಲಲ್ಲಿ ಅಲೆದಲೆದು ಕೆಲಸ ಹುಡುಕುವ ದಿನಗಳು ಇವಲ್ಲ. ಮರ್ಜಿ, ಬಕೆಟ್ ಹಿಡಿಯೋದು, ದಕ್ಷಿಣೆ ಸಲ್ಲಿಸೋದು ಇವೆಲ್ಲ ಇಲ್ಲಿಲ್ಲ. ‘ಕೆಲಸ ಗೊತ್ತಿದೆಯಾ? ನೀವು ನಮ್ಮಲ್ಲಿಗೆ ಬನ್ನಿ ’ ಎಂದು ಐಟಿ ಕಂಪನಿಗಳು ರತ್ನಗಂಬಳಿ ಹಾಸಿ ಕೈಬೀಸಿ ಕರೆಯುತ್ತವೆ. ಫೋನಲ್ಲಿಯೇ ಕೆಲವು ಸಲ ಸಂದರ್ಶನಗಳು ನಡೆಯುತ್ತವೆ. ಸಂಬಳದ ಬಗ್ಗೆ ಚೌಕಾಶಿ ನಡೆದು, ಕೊನೆಗೆ ಜಾಣರ ಬೆನ್ನತ್ತುತ್ತವೆ. ದಿನಕ್ಕೆ ಎರಡು ಸಲ ಕಾಲ್ ಮಾಡಿ, ಆಹ್ವಾನಿಸುತ್ತವೆ.
ಒಂದಷ್ಟು ವೆಬ್‌ಸೈಟ್‌ಗಳಲ್ಲಿ ಬಯೋಡೇಟಾ ತೇಲಿಬಿಟ್ಟು, ದಿನವೂ ಇ-ಮೇಲ್ ಚೆಕ್ ಮಾಡುವುದು, ಈಗಿನ ಹುಡುಗರ ದಿನಚರಿ. ಕ್ಯಾಂಪಸ್ ಸಂದರ್ಶನಗಳು ಜನಪ್ರಿಯವಾಗುತ್ತಿದ್ದು, ಕೋರ್ಸ್ ಮುಗಿಸುವ ಮುನ್ನವೇ ಉದ್ಯೋಗ ಸಿದ್ಧವಾಗಿ ಕೂತಿರುತ್ತದೆ. ಡಿಗ್ರಿ ನಂತರ ಉದ್ಯೋಗ ಸಂಬಂ ಕೋರ್ಸ್‌ಗಳನ್ನು ಮುಗಿಸಿದರೆ , ಇಂಗ್ಲಿಷ್ ಭಾಷೆ ಮೇಲೆ ತುಸು ಹಿಡಿತ ಸಾಸಿ, ಪಿಯುಸಿ ಓದುವಾಗಲೇ ಒಂದಿಷ್ಟು ಕಂಪ್ಯೂಟರ್ ಕಲಿತು ಬಿಟ್ಟರೆ, ನಿರುದ್ಯೋಗದ ಶಾಪ ಎಂದಿಗೂ ಕಾಡುವುದಿಲ್ಲ. ಆರಂಭದಲ್ಲಿಯೇ ೬-೭ ಸಾವಿರದ ಕೆಲಸ ಸಿಕ್ಕೋದು ಕಷ್ಟ ಅಲ್ಲವೇ ಅಲ್ಲ. ಅನುಭವ ಹೆಚ್ಚಿದಂತೆಲ್ಲ, ಸಂಬಳ ಮತ್ತು ಸವಲತ್ತುಗಳು ಸಹಾ ಹೆಚ್ಚುತ್ತಿರುತ್ತದೆ. ಪಡೆದ ಅನುಭವ, ಇನ್ನೊಂದು ಕಂಪನಿ ಪ್ರವೇಶಿಸಲು ರಹದಾರಿ. ಹೀಗಾಗಿಯೇ ಬಿಇ ಮುಗಿಸಿದ ಯುವಕರು ಆರಂಭದಲ್ಲಿ ಐದಾರು ಸಾವಿರ ಸಂಬಳದ ಕೆಲಸ ಸಿಕ್ಕರೂ ನಿರಾಳವಾಗಿಯೇ ಕೆಲಸ ಮಾಡುತ್ತಾರೆ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಕಲಿಯುವುದು ಮತ್ತು ಅನುಭವ ಗಳಿಸುವುದು ಅವರ ಮುಂದಿರುವ ತಕ್ಷಣದ ಗುರಿ.
ಕೇವಲ ಐದಾರು ಸಾವಿರದಿಂದ ವೃತ್ತಿ ಆರಂಭಿಸಿದ ನನ್ನ ಗೆಳೆಯ ಪ್ರಹ್ಲಾದನ ಈಗಿನ ಸಂಬಳ ೪೦ಸಾವಿರ ರೂಪಾಯಿ. ಬಿ.ಕಾಂ. ಮುಗಿಸಲಾಗದೇ ಒದ್ದಾಡುತ್ತಿದ್ದ ಆತ, ಡೇಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡ. ಆರಂಭದಲ್ಲಿ ಟ್ರೈನಿಯಾಗಿ ಕಂಪನಿಯೊಂದಕ್ಕೆ ಪ್ರವೇಶ ಪಡೆದ. ಕಲಿಯುವ ಉತ್ಸಾಹವಿತ್ತು, ಅವಕಾಶವೂ ಇತ್ತು. ಸಮಯ ಪರಿಪಾಲನೆ, ಕೆಲಸದ ಮೇಲಿನ ಶ್ರದ್ಧೆಯಿಂದ ಕಂಪನಿಯ ಆಡಳಿತ ಮಂಡಳಿಗೆ ಆತ ಅಚ್ಚುಮೆಚ್ಚು. ಒಂದೊಂದೇ ಮೆಟ್ಟಿಲನ್ನು ಆತ ಏರಿದ್ದ. ಕೆಲಸದಲ್ಲಿ ಪರಿಣತನಾಗಿದ್ದ. ಟೀಮ್ ಮೆಂಬರ್ ಆಗಿ, ಟೀಮ್ ಲೀಡರ್ ಆಗಿ ಆತ ಈಗ ಬೆಳೆದು ನಿಂತಿದ್ದಾನೆ.
ಆತನ ಗುರಿ ವಿಸ್ತಾರಗೊಂಡಿದೆ, ಪಯಣ ಇನ್ನಷ್ಟು ಬೆಳೆದಿದೆ. ‘ಒಬ್ಬರ ಕೈಕೆಳಗಿನ ಕೆಲಸ ಸಾಕು ಗುರೂ.. ಒಂದು ಚೂರು ದುಡ್ಡು ಸಿಕ್ಕರೆ, ನಾನೇ ಪುಟ್ಟದೊಂದು ಕಂಪನಿ ಶುರು ಮಾಡುತ್ತೇನೆ ’ ಎನ್ನುತ್ತಾನೆ ಪ್ರಹ್ಲಾದ.
ಗೂಡು ಬಿಡಲೊಂದು ಕಾರಣ
‘ನಿಮ್ಮ ಕೆಲಸ ನಮಗೆ ತೃಪ್ತಿಯಾಗುತ್ತಿಲ್ಲ’ ಎಂದು ಕೆಲವು ಸಲ ಕಂಪನಿಗಳೇ ಗೂಡು ಬಿಡಿಸುತ್ತವೆ. ಆದರೆ ಬಹುತೇಕ ಸಲ ಉದ್ಯೋಗಿಗಳೇ ಕೆಲಸ ಬದಲಿಸುತ್ತಾರೆ.
ಸಂಬಳದ ಆಮಿಷ, ಪ್ರತಿಷ್ಠಿತ ಕಂಪನಿಗಳ ಬಗೆಗಿನ ಮೋಹ, ಇನ್ನಷ್ಟು ಕೆಲಸ ಕಲಿಯುವ ಬಯಕೆ, ಹೊಸತಿಗಾಗಿ ಅನ್ವೇಷಣೆ, ಹಾಲಿ ಕಂಪನಿಯಲ್ಲಿನ ಕೆಲವು ಕಿರಿಕಿರಿಗಳು -ಇವು ಕೆಲಸ ಬಿಡಲು ಮುಖ್ಯವಾದ ನಾಲ್ಕು ಕಾರಣಗಳು.
ನೈಟ್ ಶಿಫ್ಟ್‌ಗಳ ಕಿರಿಕಿರಿ, ಅಕ ಕೆಲಸದೊತ್ತಡ, ರಜೆಗಳ ಕೊರತೆ, ಉದ್ಯೋಗದಲ್ಲಿ ಅಸ್ಥಿರತೆ ಅಂಶಗಳು ಕೆಲವರನ್ನು ಸರಕಾರಿ ನೌಕರಿಯತ್ತ ಸೆಳೆಯುತ್ತವೆ. ಆದರೆ ಇಂಥ ಉದಾಹರಣೆಗಳು ಅತಿ ವಿರಳ.

Sunday, May 18, 2008

ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ?

ನಿನ್ನನ್ನು ಬಿಟ್ಟಿರಲಾರೆ. ಏನೋ ಸೆಳೆತ, ಎಂಥದ್ದೋ ಮೋಹ? ಮೊದಲು ನಾನು ಹೀಗಿರಲಿಲ್ಲ.. ನಿನ್ನ ಸಹವಾಸ ಮಾಡಿದ ಮೇಲೆ ಹೀಗಾದೆ! ಎಲ್ಲರೂ ಹೇಳುವಂತೆ ಕೆಟ್ಟು ಗ್ಯಾರೇಜು ಸೇರಿದೆ. ನಾನಂತೂ ಹಾಗೆ ಭಾವಿಸಿಲ್ಲ. ನೀನು ನನ್ನವಳಾದ ಮೇಲೆ, ಹೊಸ ಲೋಕ ನನ್ನದಾಯಿತು. ಇನ್ನಷ್ಟು ಬೆಳೆದಿದ್ದೇನೆಂಬ ಭಾವ ಮೈಮನಗಳ ಸುಳಿಯಲ್ಲಿ.
ಒಂದು ಕ್ಷಣ ನೀ ದೂರವಾದರೂ ತಲೆ ಗಿರ್ರೆನ್ನುತ್ತೆ. ನಿನ್ನ ಬಗ್ಗೆ ನನಗೆ ಮೊದಲಿಂದಲೂ ಕೆಟ್ಟ ಕುತೂಹಲ. ಮನೆಯಲ್ಲಿ ಯಾರು ಏನನ್ನುತ್ತಾರೋ ಎಂಬ ಅಳುಕಿನಿಂದ ನಿನ್ನನ್ನು ದೂರದಿಂದಲೇ ನೋಡಿ ಸುಮ್ಮನಾಗುತ್ತಿದ್ದೆ. ನಿನಗೆ ತಿಳಿದಿರಲಿಕ್ಕಿಲ್ಲ, ಸಮಯ ಸಿಕ್ಕಾಗಲೆಲ್ಲ ನಾನು ನಿನ್ನ ಬೆನ್ನು ಸವರುತ್ತಿದ್ದೆ. ತೊಡೆ ಚಿವುಟುತ್ತಿದ್ದೆ. ಗಲ್ಲ ಹಿಡಿದು ಏನೇ ಸುಂದರಿ ಎನ್ನುತ್ತಿದ್ದೆ. ನೀನು ನನ್ನನ್ನು ಗುರುತಿಸಿರಲಿಕ್ಕಿಲ್ಲ.
ಶ್ವೇತವರ್ಣೆಯಾದ ನೀನು ಈ ಕರಿಯನಿಗೆ ಸ್ವಂತವಾದ ಆ ದಿನ ಚೆನ್ನಾಗಿ ನೆನಪಿದೆ. ಗೆಳೆಯರ ಬಳಗದ ಮಧ್ಯೆ ನನ್ನ ಪುರುಷತ್ವ ಪರೀಕ್ಷೆಗೊಳಗಾದ ಅಗ್ನಿ ಪರೀಕ್ಷೆಯ ಸಂದರ್ಭವದು! ನಿನ್ನೊಳಗೆ ಒಂದಾಗದ ಹೊರತು, ಅಂದು ಅನ್ಯಮಾರ್ಗವಿರಲಿಲ್ಲ. ಮೊದಲ ಮಿಲನ ಮಹೋತ್ಸವಕ್ಕೆ ಗೆಳೆಯರು ಹುರಿದುಂಬಿಸಿದರು. ಲಿಮಿಟ್ಟುಗಳ ಮೀರುವುದರಲ್ಲೇ ಮುದವಿದೆ, ಗೆಲುವಿದೆ ಎಂದು ನನಗ್ಯಾಕೋ ಅನ್ನಿಸಿತ್ತು.
ಮೊದಲ ಸ್ಪರ್ಶಕ್ಕೇ ನಾ ನಿಜಕ್ಕೂ ಸೋತೆ. ಮುಖದ ಮೇಲೆ ಮೀಸೆ ಚಿಗುರುತ್ತಿವೆ ಎಂದು ಅನಿಸಿದ್ದು, ಆಗಲೇ.
ಆ ಪ್ರಥಮ ಚುಂಬನ ಹಿತಕರವಾಗೇನೂ ಇರಲಿಲ್ಲ. ಪುಣ್ಯಕ್ಕೆ ಹಲ್ಲು ಬೀಳಲಿಲ್ಲ ಅಷ್ಟೆ! ನಿನ್ನ ಸಂಗ, ಬಿಸಿಯುಸಿರಿನ ಹಸಿಬಿಸಿ ಅಪ್ಪುಗೆ ಮೊದಮೊದಲು ಕಷ್ಟವಾಯಿತು. ನಿನ್ನಿಂದ ಬಿಡುಗಡೆ ಪಡೆದಾಗ ಮುಖದ ಮೇಲೆ ಬೆವರ ಹನಿಗಳ ಮುತ್ತಿನ ಮಾಲೆ. ಬರ್ತಾಬರ್ತಾ ನಿನ್ನ ಸಂಗ ಇಷ್ಟವಾಯಿತು. ನನ್ನ ಎದೆಗೂಡಲ್ಲಿ ನಿನಗೆ ಜಾಗ ಕೊಟ್ಟೆ(ನಾ ಕೊಡುವುದೇನು? ನೀನೇ ಬಂದು ಕೂತೆ! ) ‘ನೀನಿಲ್ಲದೇ ನನಗೇನಿದೆ.. ನಿನ್ನಲ್ಲೇ ಈ ಜೀವ ಒಂದಾಗಿದೆ ’ ಎಂಬ ಸಾಲುಗಳನ್ನು ನಮ್ಮಿಬ್ಬರ ಕಂಡೇ ಬರೆದಿರಬೇಕು!
ನಿದ್ದೆ ಬಾರದ ರಾತ್ರಿಯಲ್ಲಿ ನೀನು ನೆನಪಾಗುವೆ. ಆದರೆ ಏನು ಮಾಡಲಿ? ನೀನಿಲ್ಲದ ಹೊತ್ತು, ಗಡಿಯಾರ ಮುಂದಕ್ಕೆ ಹೋಗುವುದೇ ಇಲ್ಲ. ಬೆಳಕಿನ ಸುರುಸುರು ಬತ್ತಿಗಳ ಹಿಡಿದು ಭೂಮಿಗಿಳಿಯಲು ಆ ಸೂರ್ಯನಿಗೇನು ದಾಡಿ? ಕಿಟಕಿಯ ತೆರೆದು ಕತ್ತಲಲ್ಲಿ ಬೆಳಕನ್ನು ಹುಡುಕುತ್ತೇನೆ. ವಿರಹ ವೇತನೆಯಿಂದ ಬಳಲಿ ಬೆಂಡಾದ ನನ್ನ ಮೇಲೆ ನಿನಗೆ ಒಂದಿಷ್ಟೂ ಅನುಕಂಪವಿಲ್ಲ!
ನಿನ್ನ ಸಂಗ ಮಾಡಿದ ಮೇಲೆ, ಕೆಲವರು ನನ್ನಿಂದ ದೂರವಾದರು. ಹೋಗಲಿ ಬಿಡು, ನನಗೇನು? ಜಗತ್ತಿನಲ್ಲಿ ನೀನು ನನ್ನೊಟ್ಟಿಗಿದ್ದರೆ ಸಾಕು, ನೂರೇನು ಸಾವಿರ ವರ್ಷ ಬೇಕಿದ್ದರೂ ಬೆಂಗಳೂರಿನ ಹೊಗೆ ಕುಡಿದು, ಟ್ರಾಫಿಕ್ ಜಾಮ್‌ನಲ್ಲಿ ನರಳುತ್ತಾ ಬಾಳಬಲ್ಲೆ. ಯಾಕೆಂದರೆ; ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು.. ಹೌದು ನೀನು ನನ್ನೊಟ್ಟಿಗೆ ಹೆಜ್ಜೆ ಹಾಕುತ್ತಿರುವೆ. ನಮ್ಮಿಬ್ಬರ ಸಂಬಂಧವನ್ನು ಕೆಲವರು ತಮಗೆ ದೋಚಿದಂತೆ ಅರ್ಥೈಸುತ್ತಾರೆ. ಅದು ಅವರ ಲಿಮಿಟ್ಟು. ನಿನ್ನ ಸಂಗ ಬಿಡುವಂತೆ ನಾನಾ ರೀತಿ ಹೇಳುತ್ತಾರೆ. ನನ್ನ ಜೀವದ ಉಸಿರಲ್ಲಿ ನಿನ್ನ ಉಸಿರು ಬೆರೆತಿದೆ. ಹೀಗಾಗಿ ಬೇರೆಯಾಗುವುದಾದರೂ ಹೇಗೆ ಎಂದು ಯೋಚಿಸುವಾಗಲೇ, ಅಗಲಿಕೆಯ ದಿನ ಸಮೀಪಿಸಿದೆ.
ನಾವಿಬ್ಬರೂ ಒಂದೇ ದೇಹವಾಗಿ ಸುಖಿಸುತ್ತಿರುವ ವೇಳೆಯಲ್ಲಿಯೇ ಅದ್ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾನಂತೂ ರೆಡಿ. ಆದರೆ ಅದೆಲ್ಲ ಆಗದ ಮಾತು. ನೀನಿಲ್ಲದೇ ನಾ ಹೇಗಿರಲಿ? ತಲೆ ಮತ್ತೆ ಗಿರ್ರೆನ್ನುತ್ತಿದೆ, ಬಾ ಕೊನೆಯದಾಗಿ ಒಂದು ಸಲ ಒಂದಾಗೋಣ. ಜಗತ್ತು ನಾಚುವಂತೆ, ಸುಖ ಉಣ್ಣೋಣ.

Sunday, May 11, 2008

ತೆರೆದಿದೆ ಮನೆ ಓ ಬಾ ಬೆಳಕೆ!

ದುಡ್ಡಿಲ್ಲ.. ನಯಾ ಪೈಸೆ ಖರ್ಚಿಲ್ಲ. ಹೀಗಾಗಿ ಸೂರ್ಯನ ಬೆಳಕನ್ನು ಬಳಸಿಕೊಳ್ಳಲು ಏನೂ ಕಷ್ಟವಿಲ್ಲ. ಆದರೆ ಕೆಲವು ಮನೆಗಳನ್ನು ನೋಡಿ, ರಾತ್ರಿ ಯಾವುದೋ, ಹಗಲು ಯಾವುದೋ ಒಂದೂ ಗೊತ್ತಾಗುವುದಿಲ್ಲ. ಯಾವಾಗಲೂ ಆಂಧಕಾರ. ದೀಪವಿಲ್ಲದ ಹೊರತು, ಮನೆಯಲ್ಲಿ ಕ್ಷಣಕಾಲವೂ ನಿಲ್ಲಲಾಗದು.
ಸೂರ್ಯನ ಬೆಳಕನ್ನು ಬಳಸಿಕೊಳ್ಳುವಲ್ಲಿ ನಮ್ಮ ಪೂರ್ವಿಕರು ಅತಿ ಜಾಣರು. ಸಂಪ್ರದಾಯದ ಹೆಸರಲ್ಲಿ, ಸೂರ್ಯನನ್ನು ಬಳಸಿಕೊಳ್ಳಲು ಅವರು ಪ್ರೇರಣೆ ನೀಡಿದ್ದಾರೆ. ಪೂರ್ವಕ್ಕೆ ಬಾಗಿಲು ಇಡಬೇಕು. ಸಾಧ್ಯವಾಗದ ಪಕ್ಷದಲ್ಲಿ ದಕ್ಷಿಣಕ್ಕಾದರೂ ಇಡಬೇಕು ಎನ್ನುವುದು ಹಿರಿ ತಲೆಗಳ ಮಾತಷ್ಟೇ ಅಲ್ಲ. ವಾಸ್ತು ಪಂಡಿತರು ಮತ್ತು ಎಂಜಿನಿಯರ್‌ಗಳು ಸಹಾ ಈ ಸಲಹೆಯನ್ನು ಸಮ್ಮತಿಸುತ್ತಾರೆ.
ಮನೆಗೆ ಮುಖ್ಯವಾದದ್ದು ಮಾರ್ಬಲ್ ಅಲ್ಲ. ಟೀಕ್‌ವುಡ್ಡಿನ ಕಿಟಕಿ ಬಾಗಿಲುಗಳೂ ಅಲ್ಲ. ಗಾಳಿ-ಬೆಳಕು ಮನೆಯ ಸಮೃದ್ಧಿ ಸೂಚಕ. ಈ ಬಗ್ಗೆ ನಾವು ಗಮನ ನೀಡದೇ ಹೋದರೆ, ಮನೆ ಎಂಬುದು ನಮ್ಮ ಪಾಲಿಗೆ ಪಂಚರವಾಗುತ್ತದೆ. ಅದು ನರಕದ ಅನುಭವ ನೀಡುತ್ತದೆ. ಕಿಟಕಿಯಿಂದ ತೂರಿ ಬರುವ ಸೂರ್ಯನ ಬೆಳಗಿನ ಎಳೆಯ ಕಿರಣಗಳು, ‘ಬೆಳಗಾಯಿತು ಮೇಲೆ ಏಳೋ ಸೋಮಾರಿ’ ಎಂದು ನಮ್ಮ ಮೂತಿ ತಿವಿದು ಎಬ್ಬಿಸುತ್ತವೆ. ಸಮಯದ ಪರಿಕಲ್ಪನೆಯನ್ನು ಬೆಳಕು ನಮ್ಮಲ್ಲಿ ತುಂಬುತ್ತದೆ.
ಬೆಳಕೆಂದರೆ ಬರೀ ಬೆಳಕಲ್ಲವೋ..
ಸೂರ್ಯನ ಬೆಳಕು ತನ್ನೊಳಗೆ ತಾಪವನ್ನೂ ಮೈಗೂಡಿಸಿಕೊಂಡಿದೆ. ಆ ಬೆಳಕಿನ ಬಿಸಿ ಒಮ್ಮೊಮ್ಮೆ ಕಚಗುಳಿಗೆ, ಪುಳಕಕ್ಕೆ, ಹಿಂಸೆಗೆ ಮತ್ತು ಅಹಿತಾನುಭವಕ್ಕೆ ಕಾರಣವಾಗುತ್ತದೆ.
ಉತ್ತರ ದಿಕ್ಕಿನಿಂದ ಮನೆಗೆ ನುಗ್ಗುವ ಸೂರ್ಯನ ಬೆಳಕು ತಂಪಾಗಿರುತ್ತದೆ. ಬೇಸಿಗೆಯ ಮಧ್ಯದಲ್ಲಷ್ಟೇ, ತುಸು ಕಾವೇರುತ್ತದೆ. ಆಗಷ್ಟೆ ಸೂರ್ಯ, ತನ್ನ ನೇರ ಕಿರಣಗಳನ್ನು ಚಾಚಿ ಮಲಗುತ್ತಾನೆ. ದಕ್ಷಿಣ ದಿಕ್ಕಿನ ಕಿರಣಗಳು ಬಿಸಿಯೋ ಬಿಸಿ. ಹೀಗಾಗಿ ದಕ್ಷಿಣದಲ್ಲಿರುವ ಕೊಠಡಿಗಳ ಗೋಡೆಗಳು ದಟ್ಟ ಕಡು ಬಣ್ಣಗಳನ್ನು(ನೀಲಿ, ಹಸಿರು ಇತ್ಯಾದಿ) ಹೊಂದಿದ್ದರೆ ಒಳ್ಳೆಯದು.
ಮನೆ ಬಾಗಿಲು ಪೂರ್ವದಲ್ಲಿದ್ದರೆ, ಮನೆಮಂದಿಗೆ ಸುಖಾನುಭವ. ಯಾವ ಬೇಸಿಗೆಯೂ ಇವರಿಗೆ ಕೇಡು ಮಾಡದು! ಪೂರ್ವದಲ್ಲಿ ಬೆಳಗ್ಗೆ ಚುಮುಚುಮು ಬಿಸಿಲು, ಮಧ್ಯಾಹ್ನ ತಂಪೋತಂಪು. ನೇರವಾಗಿ ಸೂರ್ಯ ಕಿರಣ ಬೀಳದ ಕಾರಣ, ಫ್ಯಾನಿನ ಬಳಕೆಯೂ ಕಡಿಮೆ, ಆ ಪರಿಣಾಮ ವಿದ್ಯುತ್ ಬಿಲ್ ಸಹಾಕಡಿಮೆ.
ಇನ್ನು ಪಶ್ಚಿಮ ದಿಕ್ಕಿನಲ್ಲಿರುವ ಮಂದಿಗೆ ಸೂರ್ಯನ ಕಾಟ ಅಷ್ಟಿಷ್ಟಲ್ಲ. ಬೆಳಗ್ಗೆ ಸ್ವಲ್ಪ ಕಾಲ ಬಿಟ್ಟರೆ ಮಧ್ಯಾಹ್ನದಿಂದ ಸಂಜೆವರೆಗೆ ಬಿಸಿಲೋ ಬಿಸಿಲು. ಸಂಜೆಯ ನಂತರ ಬಿಸಿಲಿನ ಕಾವು. ಒಂದು ರೀತಿಯಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಬಿಸಿಲಿನ ದರ್ಬಾರು.
ಬೆಳಕಿನ ರಂಗವಲ್ಲಿ..
ಎಲ್ಲಕ್ಕೂ ಮಿತಿಯಿದೆ. ಬೆಳಕು ಹಿತಕರವಾಗಿರಬೇಕು... ಅದು ಅತಿಯಾದರೆ ಮತ್ತೆ ಅಪಾಯ. ಹೀಗಾಗಿ ನಿಮ್ಮ ಮನೆಯಲ್ಲಿ ಬೆಳಕನ್ನು ಸಮತೋಲನಗೊಳಿಸಲು, ತಜ್ಞರು ಸಲಹೆ ನೀಡುತ್ತಾರೆ. ಯಾವ ಕೊಠಡಿಗೆ ಯಾವ ಬಣ್ಣ ಸೂಕ್ತ ಎಂಬುದನ್ನು ಕೇಳಿ ತಿಳಿದುಕೊಳ್ಳಿ.
ಕಿಟಕಿ, ಬಾಗಿಲು, ಗವಾಕ್ಷಿ ಹೀಗೆ ಸಾಧ್ಯವಿರುವ ಎಲ್ಲಾ ಕಡೆಯಿಂದ ಬೆಳಕು ತೂರಿ ಬರಲಿ. ಕಿಟಕಿ ಮತ್ತು ಬಾಗಿಲುಗಳಲ್ಲಿ ಬೆಳಕು ತೂರಲು ಸಾಧ್ಯವಾಗುವಂತೆ ವಿನ್ಯಾಸಗಳಿರಲಿ. ಕಿಟಕಿಗೆ ದೊಡ್ಡ ಬಾಗಿಲಿಗಿಂತಲೂ, ಅಲಂಕಾರಿಕಾ ಪುಟ್ಟ ಬಾಗಿಲುಗಳು ಒಳ್ಳೆಯದು. ಮನೆಯಲ್ಲಿ ಬೆಳಕು ಹಿಂಸೆ ನೀಡುವ ಕಡೆ ತಂಪು ಕಾಗದ ಅಂಟಿಸಬಹುದು, ಕಡಿಮೆ ಇರುವಕಡೆ ಬೆಳಕನ್ನು ದ್ವಿಗುಣಗೊಳಿಸುವ ಪಾರದರ್ಶಕ ಗಾಜನ್ನು ಬಳಸಬಹುದು. ಬೇಕಿದ್ದರೆ ಕನ್ನಡಿಗಳನ್ನು ಉಪಯೋಗಿಸಬಹುದು. ನಿಮ್ಮ ಕೊಠಡಿಗೆ ಬೆಳಕಿನ ಮೂಲಕ ಹೇಗೆ ಜೀವ ತುಂಬಲು ಸಾಧ್ಯ ಆಲೋಚಿಸಿ. ಅಂದ ಹಾಗೆ, ಮೈಕುಕ್ಕುವ ಬೆಳಕು ಮಲಗುವ ಮನೆಗೆ ಬೇಡವೇ ಬೇಡ. ಬೆಳಕು ನಿರೋಧಕ ದೀಪಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಬಳಸಿ ನೋಡಿ.
ಕಾಲ ಬದಲಾದಂತೆ ಸೂರ್ಯನ ಬೆಳಕು ವ್ಯತ್ಯಾಸವಾಗುತ್ತದೆ. ಹೀಗಾಗಿ ಪರ್ಯಾಯ ದೀಪಗಳು ಇದ್ದೇ ಇರಲಿ. ಸಹಜ ಬೆಳಕಿನ ಕೊರತೆ ನೀಗಿಸಲು, ಒಂದೆರಡು ಗಿಡಗಳು ಮನೆಯಲ್ಲಿರಲಿ. ಹಗಲು ವೇಳೆ ಕೊಠಡಿಗಳಿಗೆ ಸೂರ್ಯನ ಕಿರಣ ಪ್ರವೇಶವಿದ್ದರೆ ತುಂಬಾ ಒಳ್ಳೆಯದು. ಓದುವ ಕೊಠಡಿ ಮತ್ತು ಕಚೇರಿಯಲ್ಲಿ ಸೂರ್ಯನ ಬೆಳಕು ಹರಿದಾಡುತ್ತಿರಬೇಕು.
ಬೆಳಕೆ, ನಿನಗೆ ಕೋಟಿ ನಮನ
ನಿಸರ್ಗದತ್ತ ಬೆಳಕು ಮನೆ ತುಂಬಿದಾಗ, ಮನೆಯಲ್ಲಿರುವವರಲ್ಲಿ ಲವಲವಿಕೆ ಪುಟಿಯುತ್ತದೆ. ಯಾವುದೇ ಖರ್ಚಿಲ್ಲದೇ ಮನೋಲ್ಲಾಸ ಬೆಳಿಕಿನಿಂದ ಲಭ್ಯ. ಸೂರ್ಯನ ಕಿರಣ ಮನೆಯಲ್ಲಿ ಹಾದು ಹೋದರೆ, ಕೊಠಡಿ ಮಿಂಚುತ್ತದೆ, ತಾಜಾತನ ಆವರಿಸುತ್ತದೆ. ಜತೆಗೆ ಆರೋಗ್ಯಕ್ಕೂ ಹಿತ. ಕಸ ಮತ್ತು ಬ್ಯಾಕ್ಟೀರಿಯಾಗಳಿಂದಲೂ ಬೆಳಕು ನಮ್ಮನ್ನು ಪಾರು ಮಾಡಬಲ್ಲದು.
----------------------------------------------------------------------------------
ಬೆಳಕು ತಂದ ಕಾಯಿಲೆ!
ಸೂರ್ಯನಿಂದ ವಿಟಮಿನ್-ಡಿ ಲಭ್ಯ ಎನ್ನುವುದು ಖುಷಿ ವಿಚಾರ. ಆದರೆ ಹೆಚ್ಚಿನ ಪ್ರಖರ ಬಿಸಿಲು ಚರ್ಮದ ಕ್ಯಾನ್ಸರ್‌ಗೂ ದಾರಿಯಾಗಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ. ಅಪಾಯಕಾರಿ ಅತಿ ನೇರಳೆ ಕಿರಣಗಳಿಂದ ನಮ್ಮ ಚರ್ಮಕ್ಕೆ ರಕ್ಷಣೆ ನೀಡಬೇಕಾಗಿದೆ. ಈ ಉದ್ದೇಶಕ್ಕಾಗಿ ಅನೇಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿವೆ.

ಸುಮುಖದ ಜೈತ್ರಯಾತ್ರೆ : ಮಾಳ್ಕೋಡು ಛಲಕ್ಕೆ ಫಲ

ಕನ್ನಡದಲ್ಲಿ ಓದುಗರ ಸಂಖ್ಯೆ ಕಡಿಮೆ, ಮಾರುಕಟ್ಟೆ ಚಿಕ್ಕದು, ಇಲ್ಲಿ ಪುಸ್ತಕ ಪ್ರಕಟಿಸೋದು ಒಂದೇ, ಹಾಳು ಬಾವಿಗೆ ಬೀಳೋದು ಒಂದೇ ಎಂಬ ಮಾತುಗಳ ಮಧ್ಯೆಯೇ ‘ಸುಮುಖ’ ಪ್ರಕಾಶನ ಸದ್ದಿಲ್ಲದೇ ಗೆಲುವಿನತ್ತ ಮುಖಮಾಡಿದೆ. ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿರುವ ಈ ಪ್ರಕಾಶನ, ಅತಿ ಕಡಿಮೆ ಅವಯಲ್ಲಿ ಅಂದರೆ ಕೇವಲ ನಾಲ್ಕೂವರೆ ವರ್ಷಗಳಲ್ಲಿ ೨೦೦ ಪುಸ್ತಕಗಳ ಗಡಿ ದಾಟಿ, ಮುನ್ನಡೆದಿದೆ. ಬಹುಶಃ ಅಲ್ಪಕಾಲದಲ್ಲಿ ಈ ಮಟ್ಟದ ಸಾಧನೆ ಮಾಡಿದ ಇನ್ನೊಂದು ಪ್ರಕಾಶನ ಇರಲಿಕ್ಕಿಲ್ಲ.
‘ಕಾಸಿಗಿಂತಲೂ ಖುಷಿಯೇ ಮುಖ್ಯ, ಕನ್ನಡ ಪ್ರೀತಿಯೇ ದೊಡ್ಡದು’ ಎಂದು ನಂಬಿಕೊಂಡಿರುವ ಸುಮುಖ ಪ್ರಕಾಶನದ ಮಾಲೀಕ ನಾರಾಯಣ ಮಾಳ್ಕೋಡು, ಬರೀ ವ್ಯಾಪಾರಿಯಲ್ಲ. ಅವರೊಬ್ಬ ಲೇಖಕರು, ಸಾಹಿತ್ಯ ಪರಿಚಾರಕರು. ಕನ್ನಡ ಪುಸ್ತಕಗಳನ್ನು ನಾಡಿನುದ್ದಕ್ಕೂ ತಲುಪಿಸುವ ಹಂಬಲ ಹೊಂದಿರುವ ಅವರದು ಕಲ್ಲು ಮುಳ್ಳಿನ ಹಾದಿ. ಗೆಲುವಿನ ಕಿರೀಟ ಧರಿಸಲು ಅವರು ಪಟ್ಟ ಪಾಡು ಒಂದೆರಡಲ್ಲ.
ದರಿದ್ರ ವ್ಯವಸ್ಥೆ ವಿರುದ್ಧ ಬಂಡಾಯ
‘ಪ್ರಕಾಶನ ಆರಂಭಿಸಬೇಕು ಎನ್ನುವ ಹಂಬಲ ನಿಮ್ಮ ಮನದಲ್ಲಿ ಬಂದದ್ದೇಗೆ?’ ಎಂದರೆ , ‘ಈ ಹಿಂದೆ ಲೇಖಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪ್ರಕಾಶಕರಿಂದ ಲೇಖಕರಿಗಾಗುತ್ತಿರುವ ಅನ್ಯಾಯ ನನ್ನ ಅನುಭವಕ್ಕೂ ಬಂದಿತ್ತು. ಒಂದು ಸಾವಿರ ಮುದ್ರಿಸುವುದಾಗಿ ಹೇಳಿ ೧೦ ಸಾವಿರ ಪ್ರತಿಗಳನ್ನು ಪ್ರಕಟಿಸುವುದು, ಲೇಖಕರಿಗೆ ಗೌರವ ಧನ ನೀಡದೇ ನಾಮ ಹಾಕುವ ದರಿದ್ರ ವ್ಯವಸ್ಥೆಯಿಂದ ನಾನು ಬೇಸತ್ತಿದ್ದೆ. ಪ್ರಾಮಾಣಿಕ ಪ್ರಕಾಶನ ತೆರೆಯುವ ಉದ್ದೇಶದಿಂದ ಸುಮುಖಕ್ಕೆ ಚಾಲನೆ ನೀಡಿದೆ ’ ಎನ್ನುತ್ತಾರೆ ಮಾಳ್ಕೋಡು. ಇನ್ನೂ ಒಂದೆಜ್ಜೆ ಮುಂದೆ ಹೋಗಿ ಪ್ರಕಾಶನ ಕ್ಷೇತ್ರದ ಹುಳುಕುಗಳನ್ನು ತೆರೆದಿಡುತ್ತಾರೆ.
ಅವರು ಹೇಳುವಂತೆ ; ‘ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರು ಮತ್ತು ಜನಹಿತ ಪ್ರಕಾಶಕರು ಎಂಬ ಎರಡು ಗುಂಪುಗಳಿವೆ. ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯ ಇಲಾಖೆಯ ದುಡ್ಡು ನಂಬಿ, ಇವರು ಬದುಕುತ್ತಾರೆ. ಇವರ ದೆಸೆಯಿಂದ ಪುಸ್ತಕಗಳು ಲೈಬ್ರೆರಿಯ ಕತ್ತಲೆ ಕೋಣೆಯಲ್ಲಿ ಕೊಳೆಯಬೇಕಾಗುತ್ತದೆ ’
ಪುಸ್ತಕ ನೀತಿ ಜಾರಿಗೆ ಬರಲಿ..
‘ನಮ್ಮಲ್ಲಿ ಸೂಕ್ತ ಜಲನೀತಿಯಿಲ್ಲ. ಅದೇ ರೀತಿ ಪುಸ್ತಕ ನೀತಿಯೂ ಇಲ್ಲ. ಪ್ರಕಾಶನಗಳಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಆದರೆ ಕೆಲವು ಪ್ರಕಾಶಕರು ಬೇರೆಬೇರೆ ಹೆಸರಲ್ಲಿ ೮-೧೦ ಪ್ರಕಾಶನಗಳನ್ನು ಹೊಂದಿದ್ದಾರೆ. ಇದು ಹಣ ನುಂಗಲು ದಾರಿಯಾಗಿದ್ದು, ಪ್ರಾಮಾಣಿಕ ಪ್ರಕಾಶಕರಿಗೆ ತೊಂದರೆಯಾಗಿದೆ. ಗೌರವ ಧನ ನೀಡದೇ ವಂಚಿಸುವ ಪ್ರಕಾಶಕನಿಗೆ ಪಾಠ ಕಲಿಸುವ ಅಥವಾ ಬರಹದ ಹಕ್ಕುಗಳನ್ನು ಮೂರುನಾಲ್ಕು ಪ್ರಕಾಶಕರಿಗೆ ಮಾರುವ ಲೇಖಕನಿಗೆ ಶಿಕ್ಷೆ ನೀಡುವ ಕಾನೂನುಗಳು ನಮ್ಮಲ್ಲಿಲ್ಲ. ಹೀಗಾಗಿ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ನಕಲಿ ಪುಸ್ತಕಗಳ ಜಾಲ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಸಮಗ್ರ ಪುಸ್ತಕ ನೀತಿ ಅತ್ಯಗತ್ಯ’ ಎನ್ನುವುದು ಮಾಳ್ಕೋಡು ಅಭಿಪ್ರಾಯ.
ಬರೀ ಸುಳ್ಳು ನೆವಗಳು!
ಕನ್ನಡದ ಮಾರುಕಟ್ಟೆ ಚಿಕ್ಕದು, ಓದುಗರ ಕೊರತೆ ಇದೆ ಎನ್ನುವ ಮಾತನ್ನು ಮಾಳ್ಕೋಡು ಒಪ್ಪುವುದಿಲ್ಲ. ‘ಇಲ್ಲ.. ಇದು ತಪ್ಪು. ಓದುಗರಿಗೆ ಪುಸ್ತಕಗಳನ್ನು ತಲುಪಿಸಲು ಪ್ರಕಾಶಕರಿಗೆ ದಾರಿಗಳಿಲ್ಲ. ಇದೊಂದು ನೆಟ್‌ವರ್ಕ್ ಸಮಸ್ಯೆ. ಇನ್ನು ಕನ್ನಡ ಪುಸ್ತಕ ಪ್ರಾಕಾರ ಪ್ರಕಾಶನ ಸಂಸ್ಥೆಯಾಗಿ ಬದಲಾಗಿದೆ! ಅದು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. ಎಲ್ಲಾ ಕಡೆ ಪ್ರಕಾಶಕರೇ ಮಳಿಗೆ ತೆರೆಯುವ ವ್ಯವಸ್ಥೆ ಜಾರಿಗೆ ಬರಲು, ಇನ್ನೂ ಸಮಯ ಬೇಕು. ಆ ಮಟ್ಟಕ್ಕೆ ಕನ್ನಡ ಪ್ರಕಾಶಕರು ಬೆಳೆದಿಲ್ಲ. ಹೊಸ ಪುಸ್ತಕಗಳ ಬಗ್ಗೆ ಓದುಗರಿಗೆ ಮಾಹಿತಿ ಸಿಗುತ್ತಿಲ್ಲ. ಕನ್ನಡ ಪತ್ರಿಕೆಗಳನ್ನು ಈ ಬಗ್ಗೆ ದೂರುವಂತಿಲ್ಲ. ಪ್ರಕಟವಾಗುವ ಸಾವಿರಾರು ಪುಸ್ತಕಗಳಿಗೆ ಜಾಗ ನೀಡಲು ಪತ್ರಿಕೆಗಳಿಗೆ ಕಷ್ಟ. ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಆರಂಭಿಸಿ, ಆನೇಕರು ವಿಫಲರಾಗಿದ್ದಾರೆ ’ಎನ್ನುವ ಅವರು, ಓದುಗರನ್ನು ತಲುಪುವ ಹೊಸ ಹಾದಿಗಳತ್ತ ಚಿಂತನೆ ನಡೆಸಿದ್ದಾರೆ.
ಕನ್ನಡ ಪುಸ್ತಕಗಳು ಬಲು ದುಬಾರಿ
‘ಓದುಗರು ಬೆಚ್ಚುವಷ್ಟು ಕೆಲವು ಕನ್ನಡ ಪುಸ್ತಕಗಳು ಬಲು ದುಬಾರಿ’ ಎನ್ನುವ ಮಾತನ್ನು ಅರ್ಧ ಒಪ್ಪುವ ಮಾಳ್ಕೋಡು, ‘ಓದುಗರು ಕೆಲವು ಸಂಗತಿಗಳನ್ನು ತಾಳೆ ಹಾಕಬೇಕು. ನಮ್ಮ ಪ್ರಕಾಶನವು ಪುಟಕ್ಕೆ ೪೦-೪೨ ಪೈಸೆ ನಿಗದಿ ಪಡಿಸುತ್ತದೆ. ಕೆಲವು ಪ್ರಕಾಶಕರು ಲಾಭದ ಆಸೆಯಿಂದ ೭೦-೮೦ ಪೈಸೆ ನಿಗದಿ ಮಾಡುತ್ತಾರೆ. ಯಾವ ಪ್ರಕಾಶಕರು ಸೂಕ್ತ ಎಂಬುದನ್ನು ಲೇಖಕರು ಮತ್ತು ಓದುಗರು ನಿರ್ಧರಿಸಬೇಕು’ ಎನ್ನುತ್ತಾರೆ.
ಪ್ರಕಾಶಕ ಸಂಸ್ಕೃತಿಯ ಹರಿಕಾರ
ಲೇಖಕರು ಸಾಹಿತ್ಯದ ಹರಿಕಾರರಾದರೆ, ಪ್ರಕಾಶಕರು ಸಂಸ್ಕೃತಿಯ ಹರಿಕಾರರು ಎಂದು ಪ್ರತಿಪಾದಿಸುವ ಮಾಳ್ಕೋಡು, ಪ್ರಕಾಶಕರಿಗೆ ಸೂಕ್ತ ಸ್ಥಾನಮಾನ ದಕ್ಕಿಲ್ಲ ಎಂದು ವಿಷಾದಿಸುತ್ತಾರೆ. ‘ಭ್ರಷ್ಟ ಪ್ರಕಾಶಕರಿಗೆ ಮಣೆ ಹಾಕುವುದ ಬೇಡ. ಪ್ರಾಮಾಣಿಕ ಪ್ರಕಾಶಕರನ್ನು ಪ್ರಸ್ತುತ ಬೆಳೆಸಬೇಕಾಗಿದೆ. ನಾನಂತೂ ಪ್ರಕಾಶನವನ್ನು ಕೇವಲ ವ್ಯಾಪಾರವಾಗಿ ಪರಿಗಣಿಸಿಲ್ಲ. ಇದನ್ನು ದೇವರು ಎಂದು ಪರಿಭಾವಿಸಿದ್ದೇನೆ. ದುಡ್ಡು ಮಾಡುವುದೇ ನನ್ನ ಗುರಿಯಾಗಿದ್ದರೆ ಪ್ರಕಾಶನ ತೆರೆಯುತ್ತಿರಲಿಲ್ಲ. ಹೋಟೆಲ್ಲೋ ಅಥವಾ ಬೇಕರಿಯನ್ನೋ ತೆರೆಯುತ್ತಿದ್ದೆ ’ ಎನ್ನುತ್ತಾರೆ.
ಅವು ತಾಳ್ಮೆ ಪರೀಕ್ಷೆಯ ದಿನಗಳು
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೮, ಪಿಯುಸಿಯಲ್ಲಿ ಶೇ.೮೬, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಶೇ.೭೦ ಅಂಕ ಪಡೆದಿರುವ ಮಾಳ್ಕೋಡು ಮನಸ್ಸು ಮಾಡಿದ್ದರೆ ಸರಕಾರಿ ಕೆಲಸ ಗಿಟ್ಟಿಸುವುದು ಕಷ್ಟವಾಗುತ್ತಿರಲಿಲ್ಲ. ಆದರೆ ಅವರ ಆಲೋಚನೆಗಳೇ ವಿರುದ್ಧ ದಿಕ್ಕಿನಲ್ಲಿದ್ದವು. ೫೦೦ ರೂ. ಸಂಬಳಕ್ಕೆ ರಾಗಸಂಗಮ ಮತ್ತು ಚುಟುಕದಲ್ಲಿ ಕೆಲಸ ಮಾಡಿದ ಅವರಿಗೆ ಮೊದಲಿನಿಂದಲೂ ಅಕ್ಷರ ಸಹವಾಸ ಹಿತಕರವೆನಿಸಿತ್ತು. ಬರೆಯುವುದು ಮತ್ತು ಓದುವುದು ಅವರ ನೆಚ್ಚಿನ ಚಟಗಳಾಗಿದ್ದವು.
ಮುದ್ರಣ ಮಾಧ್ಯಮದ ಒಳಹೊರಗನ್ನು ಅರಿತ ಅವರಿಗೆ ಪ್ರಕಾಶನ ಆರಂಭಿಸುವುದು ಕಷ್ಟವಾಗಲಿಲ್ಲ. ಕಷ್ಟಪಟ್ಟು ಕೂಡಿಟ್ಟಿದ್ದ ೨ ಲಕ್ಷ ರೂ. ಹಣವನ್ನು ಹಾಕಿ ೧೦ ಪುಸ್ತಕಗಳನ್ನು ಪ್ರಕಟಿಸಿ,ಸೆಪ್ಟೆಂಬರ್ ೭,೨೦೦೩ರಲ್ಲಿ ಸುಮುಖ ಪ್ರಕಾಶನಕ್ಕೆ ಚಾಲನೆ ನೀಡಿದರು. ಆಮೇಲೆ ಮಾರುಕಟ್ಟೆ ಕಷ್ಟ ಅವರ ಅನುಭವಕ್ಕೆ ಬಂತು. ಮುಂದಿನ ಹಾದಿಯನ್ನು ಆಯ್ಕೆ ಮಾಡಿಯಾಗಿತ್ತು. ಹೀಗಾಗಿ ಅಲ್ಲಿಯೇ ಮುಂದುವರಿಯಲು ಅವರು ಮನಸ್ಸು ಮಾಡಿದರು. ಪ್ರಕಾಶನಕ್ಕೆ ಪೂರಕವಾಗಲೆಂದು ಜನವರಿ ೧೮, ೨೦೦೪ರಲ್ಲಿ ಮಾಗಡಿ ರಸ್ತೆಯ ಟೋಲ್‌ಗೇಟ್ ವೃತ್ತದ ಬಳಿ ಸುಮುಖ ಬುಕ್‌ಹೌಸ್ ತೆರೆದರು. ಅದೊಂದು ಏಕವ್ಯಕ್ತಿ ಕೇಂದ್ರಿತ ಸಾಹಸ. ಕೇವಲ ೫೦೦ ಶೀರ್ಷಿಕೆಗಳ ಪುಸ್ತಕಗಳು ಅಲ್ಲಿದ್ದವು(ಈಗ ೧೦ ಸಾವಿರ ಶೀರ್ಷಿಕೆಯ ನಾನಾ ಪುಸ್ತಕಗಳು ಅಲ್ಲಿವೆ). ಬೆಳಗ್ಗೆ ೯ರಿಂದ ರಾತ್ರಿ ೯ರ ತನಕ ಅವರು ಅಂಗಡಿ ಬಿಟ್ಟು ಕದಲಲಿಲ್ಲ.
ಆಗ ‘ಓ ಪುಸ್ತಕ ಪ್ರಕಾಶನವಾ?’ಎಂದು ಮೂಗು ಮುರಿದವರೇ ಹೆಚ್ಚು. ಮಗ ಹಾಳಾದ ಎಂಬ ಆತಂಕ ಹೆತ್ತವರಲ್ಲಿಯೂ ಇತ್ತು. ಈ ಅಂಶಗಳಿಗೆ ಪುಷ್ಟಿ ನೀಡುವಂತೆ ಮೊದಲ ತಿಂಗಳು ಅವರು ಪುಸ್ತಕ ಮಾರಿ ಸಂಪಾದಿಸಿದ್ದು, ಕೇವಲ ೮೦೦ ರೂಪಾಯಿ! ಅದರಲ್ಲಿ ಕಟ್ಟಡದ ಬಾಡಿಗೆ ೫೦೦ ರೂಪಾಯಿಯನ್ನು ನುಂಗಿತ್ತು. ಆಗ ಅವರು ತುಸು ಗಾಬರಿಗೊಂಡರು. ಎಲ್ಲೋ ತಪ್ಪು ಮಾಡಿದ ಭಯ ಕಾಡಿತು. ಎಡವಿದಂತೆ ಭಾಸವಾಯಿತು. ಆದರೆ ಅವರ ಒಲವು-ನಿಲುವು ಬದಲಾಗಲಿಲ್ಲ.
ಅಕ್ಷರ ಬಂಧ-ಸಂಬಂಧ
ಸಾಹಿತ್ಯದ ನಂಟು ಬೆಸದ ಬಗ್ಗೆ ಹೇಳುತ್ತಾ ಅವರು ವಿದ್ಯಾರ್ಥಿ ದಿನಗಳಿಗೆ ಮರಳುತ್ತಾರೆ. "೯ನೇ ತರಗತಿಯಲ್ಲಿದ್ದಾಗಲೇ ನನ್ನದೊಂದು ಲೇಖನ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾಗಿತ್ತು. ೧೦ನೇ ತರಗತಿಯಲ್ಲಿದ್ದಾಗ ಧಾರವಾಡ ಆಕಾಶವಾಣಿಯಲ್ಲಿ ನನ್ನ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಆ ನಂತರ ಶಿಕ್ಷಣ ಮತ್ತಿತರ ವಿಷಯಗಳನ್ನು ಆಧರಿಸಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ೫೦-೬೦ ಕಾರ್ಯಕ್ರಮಗಳನ್ನು ಮಾಡಿದೆ. ಚಂದನದಲ್ಲಿ ‘ಬೆಳಗು’ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದೆ. ಮೊದಲಿನಿಂದಲೂ ಓದುವಿಕೆ ನಿರಂತರವಾಗಿತ್ತು. ಧಾರವಾಡದಲ್ಲಿ ಪಿಯೂಸಿ ಓದುವಾಗ, ಪತ್ರಿಕೋದ್ಯಮದತ್ತ ಸೆಳೆತ ಶುರುವಾಯಿತು. ಪಾಟೀಲ್ ಪುಟ್ಟಪ್ಪನವರ ಪರಿಚಯವಾಯಿತು. ಓದುತ್ತಲೇ ಕೆಲಸ ಮಾಡತೊಡಗಿದೆ. ವಿಶ್ವವಾಣಿ, ವಿಶಾಲ ಕರ್ನಾಟಕದಿಂದ ಕಾವೇರಿ ಮತ್ತು ಸುಪ್ರಪಾತ ಚಾನೆಲ್‌ವರೆಗೆ ಸುದ್ದಿಮನೆಯಲ್ಲಿ ಕೆಲಸಮಾಡಿದೆ. ರಾಗಸಂಗಮ ಮತ್ತು ಚುಟುಕವನ್ನು ಎರಡು ವರ್ಷಗಳ ಹಿಂದಷ್ಟೆ ಖರೀದಿಸಿದೆ. ನಾನು ಕೆಲಸ ಮಾಡಿದ ಸಂಸ್ಥೆ ಖರೀದಿಸಿದ್ದು, ಖುಷಿ ತಂದಿದೆ " ಎನ್ನುತ್ತಾರೆ.
ಪ್ರಕಾಶನದಲ್ಲಿ ಕಳೆದು ಹೋಗದ ಅವರು ಆಗಸ್ಟ್ ೧೯, ೨೦೦೭ರಿಂದ ಸುಮುಖ, ಕಥಾಲೋಕ(೧೯೪೫ರ ನಂತರ ಕತೆಗಳಿಗೆ ಮೀಸಲಾದ ಪತ್ರಿಕೆ ಇರಲಿಲ್ಲ), ಸುಮ್‌ಸುಮ್ನೆ, ವಿನ್ ಎಂಬ ನಾಲ್ಕು ಮಾಸಪತ್ರಿಕೆಗಳನ್ನು ಮಾಳ್ಕೋಡು ಆರಂಭಿಸಿದ್ದು, ತಿಂಗಳಿಗೆ ೨ ಪುಸ್ತಕ ಪ್ರಕಟಿಸುವ ಗುರಿ ಹೊಂದಿದ್ದಾರೆ. ಅದೀಗ ದ್ವಿಗುಣಗೊಂಡಿದ್ದು, ತಿಂಗಳಿಗೆ ೪-೫ ಪುಸ್ತಕಗಳು ಹೊರಬರುತ್ತಿವೆ. ಹಿರಿಯ ಮತ್ತು ಕಿರಿಯ ಲೇಖಕರ ಪುಸ್ತಕಗಳನ್ನು ಪ್ರೀತಿಯಿಂದ ಅವರು ಪ್ರಕಟಿಸುತ್ತಿದ್ದಾರೆ.
೩೬ವರ್ಷದ ಮಾಳ್ಕೋಡು ನೂರಾರು ವರ್ಷ ಬಾಳಲಿ, ಸಾವಿರಾರು ಪುಸ್ತಕಗಳನ್ನು ಪ್ರಕಟಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ನಿಮ್ಮ ಹಾರೈಕೆಯೂ ಇದೇ ಆದರೆ ಈಗಲೇ ಶುಭಾಶಯ ತಿಳಿಸಿ(ಮೊಬೈಲ್ : ೯೮೪೪೨ ೭೮೭೯೨).

Saturday, May 10, 2008

ಮನೆಯ ಅನ್ನಪೂರ್ಣೆಗೊಂದು ಥ್ಯಾಂಕ್ಸ್ !

‘ದಿನಾ ಉಪ್ಪಿಟ್ಟಾ ?’ ಎಂದು ಆಗಾಗ ಗೊಣಗುತ್ತೇವೆ. ಉಪ್ಪಿಟ್ಟು ಪ್ರಿಯರು ಸಹಾ ಉಪ್ಪಿಟ್ಟಿನ ಜತೆಗೆ, ಕೇಸರಿಬಾತ್ ಬಯಸುವುದುಂಟು. ‘ಬೇಳೆ ಸಾರು ಬೇಜಾರು, ಅದರೊಟ್ಟಿಗೆ ಹಪ್ಪಳ ಮಾಡು’ ಎಂಬುದು ಮನೆಯಲ್ಲಿ ಪುರುಷ ಸಿಂಹಗಳ ಹಕ್ಕೊತ್ತಾಯ. ‘ಎಷ್ಟು ಸಲ ಹೇಳೋದು, ಸಾರಿಗೆ ಬದನೇ ಕಾಯಿ ಹಾಕಬೇಡ ಅನ್ತಾ.. ನಿನ್ ಊಟ ನೀನೇ ತಿಂದ್ಕೋ, ನಾನ್ ಹೊರಗಡೆ ಏನಾದ್ರೂ ನೋಡುಕೋತೀನಿ’ ಎಂದು ಒಂದಲ್ಲ ಒಂದ್ಸಲ ಗೊಣಗಿ, ಮುಖವನ್ನು ಸುಟ್ಟ ಬದನೇಕಾಯಿ ಥರಹಾ ಕಿವುಚುವುದರಲ್ಲಿ ಅದೇನಿದೆಯೋ ಆನಂದ!
ಹೋಟೆಲ್‌ಗೆ ಹೋದರೆ ಇಡ್ಲಿ-ವಡೆ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ನೀರ್ ದೋಸೆ, ಪೂರಿ, ಪಲಾವ್, ಪುಳಿಯೋಗರೆ, ಚೌಚೌ ಬಾತ್.. ಹೀಗೆ ಹನುಮಂತನ ಬಾಲದಂತೆ ಪಟ್ಟಿಯನ್ನು ಸಪ್ಲೈಯರ್ ಒಪ್ಪಿಸುತ್ತಾನೆ. ಎಲ್ಲೆಡೆ ಆಯ್ಕೆ ಸ್ವಾತಂತ್ರ್ಯದ್ದೇ ಗದ್ದಲ. ಕಸದ ತೊಟ್ಟಿ ಯಲ್ಲಿ ಬೀದಿನಾಯಿಗಳ ಜತೆ ಎಂಜಲು ಎಲೆಗೆ ಕಿತ್ತಾಡುವ ನಿರ್ಭಾಗ್ಯ ಹುಡುಗರಿಗೆಲ್ಲಿದೆ ಆಯ್ಕೆ ಸ್ವಾತಂತ್ರ್ಯ?
‘ಸಾರು ಉಪ್ಪು ರೋಸು.. ಇದೇನ್ ತಿನ್ನಲಿ ಅಂಥಾ ಮಾಡಿದ್ದಾ ಅಥ್ವಾ ಕಾಟಾಚಾರಕ್ಕೆ ಬೇಯಿಸಿದ್ದಾ ?’ ಎಂದು ಅಪ್ಪ ಗೊಣಗುವುದನ್ನು ಮಗ ಪಿಳಿಪಿಳಿ ಕಣ್ ಬಿಡುತ್ತಲೇ ಗಮನಿಸಿರುತ್ತಾನೆ. ದೊಡ್ಡವನಾದ ಮೇಲೆ ಇದೇ ಮಾತನ್ನು ಹೆಂಡ್ತಿ ಮುಂದೆ ಚೂರು ತಪ್ಪದಂತೆ ಒಪ್ಪಿಸಿರುತ್ತಾನೆ ! ಬಕಾಸುರನ ಅಣ್ಣ ತಮ್ಮಂದಿರಂತೆ ಊಟ-ತಿಂಡಿ ವಿಷಯದಲ್ಲಿ ಒದ್ದಾಡೋದರಲ್ಲಿ , ಕಿರುಚಾಡುವುದರಲ್ಲಿ ನಾವು ಸದಾ ಮುಂದೆ. ಬೆಳಗ್ಗೆ ಪೇಪರ್ ಬಿಡಿಸಿ ಕೂತರೇ, ಕಾಫಿ ಕೈಗೆ ಬರಬೇಕು. ಓದಿದ್ದು ಮುಗಿದ ತಕ್ಷಣ ತಿಂಡಿ ವಾಸನೆ ಮೂಗಿಗೆ ಬಡಿಯಬೇಕು. ರಾತ್ರಿ ಮನೆಗೋದ ತಕ್ಷಣ, ಹೆಂಡತಿ ಊಟಕ್ಕೆ ಕರೀಬೇಕು. ಊಟ ಮಾಡೋವಾಗ ಅವಳು ತರ್ಲೆ ತಾಪತ್ರಯ ಒಪ್ಪಿಸದೇ, ನಾಲ್ಕು ಕರ್ಣಾನಂದಕರ ನುಡಿಮುತ್ತುಗಳನ್ನು ಉಲಿಯಬೇಕು -ಹೀಗೆ ಬೇಕುಗಳಿಗೆ ಬರೀ ಅರ್ಧ ವಿರಾಮಗಳೇ.
ಏಕತಾನತೆಯಿಂದ ಬೇಸರಿಸದೇ, ಮನೆ ಮಂದಿಯ ಮನಸ್ಥಿತಿಯಿಂದ ಕುಗ್ಗಿದರೂ ತೋರಿಸಿಕೊಳ್ಳದೇ, ಕಾಲಕಾಲಕ್ಕೆ ಬೇಸುವುದರಲ್ಲಿಯೇ ಮನೆಯ ಅನ್ನಪೂರ್ಣೆಗೆ ಸಾರ್ಥಕ್ಯದ ಭಾವ. ಅಡಿಗೆ ರುಚಿಯಾಗಿರಲಿ, ಮನೆ ಮಂದಿ ಹೊಟ್ಟೆ ತುಂಬಾ ತಿನ್ನಲೆಂದೇ ಆಕೆಯ ಹೃದಯ ಹಂಬಲಿಸುತ್ತದೆ. ಏನೋ ಆಗಿ ಸಾರಿಗೆ ಉಪ್ಪೋ, ಖಾರವೋ ಹೆಚ್ಚು ಕಡಿಮೆಯಾದರೆ ಅದಕ್ಕೆ ಅವಳು ಹೊಣೆಯೇ?
ಉಪ್ಪು ಕಡಿಮೆಯಾಗಿದ್ದರೆ, ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಕೈ ಬಿದ್ದೋಗುತ್ತಾ? ಈ ಬದುಕಿಗೆ ಇದೇ ಕಡೆಯ ಊಟವೇನೋ ಎಂಬಂತೆ ವರ್ತಿಸೋದು ನಿಜಕ್ಕೂ ವಿಚಿತ್ರ. ಏನೋ ಮಹಾಪರಾಧ ಮಾಡಿದಂತೆ, ಪ್ರಳಯವಾದಂತೆ ಗುಡುಗಿ, ಆಕೆ ಕಣ್ಣಲ್ಲಿ ತುಂತುರು ಮಳೆ ತರಿಸೋದರಲ್ಲಿ ಅದೇನಿದೆಯೋ ಪುರುಷಾರ್ಥ?
ಮನೆಯಾಚೆ ಸುಮ್‌ಸುಮ್ನೆ ಥ್ಯಾಂಕ್ಸ್ ಎನ್ನುವ ಥ್ಯಾಂಕ್ಸಪ್ಪಗಳಿಗೆ ಮನೆಯಲ್ಲಿ ಗಂಠಲು ಮಟ್ಟ ತಿಂದರೂ, ಅನ್ನಪೂರ್ಣೆಗೊಂದು ಥ್ಯಾಂಕ್ಸ್ ಹೇಳಬೇಕು ಎಂದು ಅನ್ನಿಸೋದಿಲ್ಲ. ಥ್ಯಾಂಕ್ಸ್ ಬಿಡಿ, ಅದು ದೂರದ ಮಾತು. ಕಾಫಿ ಚೆನ್ನಾಗಿದೆ.. ಬಜ್ಜಿ ರುಚಿಯಾಗಿವೆ ಎಂದು ಹೇಳೋದರಲ್ಲಿ ಅದೇನು ಕಳ್ಕೊಳ್ಳುವರೋ ನಮ್ಮ ಪುರುಷ ಸಿಂಹಗಳು? ಜಿಪುಣಾಟಕ್ಕೊಂದು ಮಿತಿ ಬೇಡವೇ? ಛೇ! ಛೇ!!

ಅಪ್ಪನ ಜತೆ ಸವಿಸವಿ ಸಂತೆ

ಪ್ರತಿ ಗುರ್‍ವಾರ ಪಟ್ಟನಾಯಕನಹಳ್ಳಿಯಲ್ಲಿ ಸಂತೆ. ಆವತ್ತು ಸುತ್ತಲ ಕಾಮಗೊಂಡನಹಳ್ಳಿ, ಹೆಂದೊರೆ, ಪಾಳ್ಯ, ನಾದೂರು, ಕೆರೆಯಾಗಲಹಳ್ಳಿ, ಸೀಗಲಹಳ್ಳಿ, ಚಂಗಾವರ, ಯಾದಲಡಕು, ಹುಚ್ಚುಗೀರನಳ್ಳಿ ಸೇರಿದಂತೆ ಹತ್ತಾರು ಹಳ್ಳಿ ಜನ ನಮ್ಮೂರಿಗೆ ಬರ್ತಾ ಇದ್ದರು. ಸಂತೆದಿನ ಬಸ್ಸುಗಳು ದಿನತುಂಬಿದ ಗರ್ಭಿಣಿಯರಂತೆ ಇರ್ತಾ ಇದ್ದವು. ಹೆಜ್ಜೆ ಇಡೋದಕ್ಕೆ ಜಾಗವಿಲ್ಲ.
ಬಸ್ಸುನ ಒಳಗೆ ಜಾಗವಿಲ್ಲದೇ ಬಾಗಿಲಲ್ಲಿ, ಏಣಿ ಮೇಲೆ, ಕಿಟಕಿ ಮೇಲೆ ಜನ ನೇತಾಡೋದು ಆವತ್ತು ಸಾಮಾನ್ಯ. ಟಾಪಲ್ಲಿ ಕೂತ ಜನರು ಬುಸುಬುಸು ಬೀಡಿ ಸೇದುತಾ, ತಮ್ಮ ಕಷ್ಟಸುಖ ಮಾತಾಡಿಕೊಳ್ಳೋರು. ದೇಶದ ರಾಜಕೀಯವನ್ನು ತಮ್ಮ ಮೂಗಿನ ನೇರದಲ್ಲಿ ವ್ಯಾಖ್ಯಾನಿಸೋರು. ಟಿಕೀಟು ಇಲ್ಲದೇ ಊರು ತಲುಪೋರು ಜಾಸ್ತಿ ಜನ ಇದ್ದ ಕಾರಣ, ನಾಲ್ಕೈದು ಜನ ದುಡ್ಡು ವಸೂಲಿಗೆ ಪರದಾಡೋರು. ನಮ್ಮ ವಿಜಿ ಮಾಮಾ ಹನುಮಾನ್ ಬಸ್ ಬುಕ್ ಮಾಡೋನು.
ಸಂತೆ ಮಾಡ್ತಾಯಿದ್ದ ಅಮ್ಮ, ನಮಗೆಲ್ಲ ಸಂತೆಯಿಂದ ಏನಾದರೂ ತರೋಳು. ಸಂತೆಯಲ್ಲಿ ಉಳಿಸಿಕೊಂಡ ಹಣದಲ್ಲಿ ನಾಲ್ಕಾಣಿನೋ, ಎಂಟಾಣಿನೋ ಕೊಡೋಳು. ನಾವು ಬಟಾಣಿಯೋ, ಪೆಪ್ಪರ್‌ಮೆಂಟೋ ತಿಂದು ಖುಷಿಪಡುತ್ತಿದ್ದೆವು. ಅಮ್ಮನಿಗೆ ಹುಷಾರಿಲ್ಲದಿದ್ರೆ, ಅಪ್ಪ ಸಂತೆಗೆ ಹೊರಡೋನು. ನಾನು ಮತ್ತು ನನ್ನಣ್ಣ ಗೌರಜ್ಜಿ ಹೆಣೆದಿದ್ದ ಕಿತ್ತಲೆ ಬಣ್ಣದ ವೈರ್‌ಬ್ಯಾಗ್ ಹಿಡಿದು ಸ್ಕೂಲ್ ಹತ್ತಿರ ಹೋಗ್ತಾಯಿದ್ವಿ.
ಊರಿಗೆ ಕಳಸದಂತಿರುವ ನಮ್ಮಪ್ಪನ ಸ್ಕೂಲ್‌ಗೆ ಹೋಗೋದೇ ನಮಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮುಖಮುಸುಡಿ ತೊಳ್ಕಂಡು ಅಣ್ಣ ರೆಡಿಯಾಗ್ತಾಯಿದ್ದ. ನಾನು ಬೆಕ್ಕಿನಂತೆ ಮುಖ ತೊಳೆದು ಅಣ್ಣನ ಕೈಹಿಡಿದುಕೊಂಡು ಸ್ಕೂಲ್ ದಾರಿ ತುಳಿಯುತ್ತಿದ್ದೆ. ‘ಯಾಕ್ರೋ ಇಷ್ಟು ಲೇಟು’ ಎನ್ನುತ್ತಿದ್ದ ಅಪ್ಪ ನಮ್ಮನ್ನು ಸಂತೆಗೆ ಕರೆದುಕೊಂಡು ಹೋಗೋನು. ನಾನು ಎಲ್ಲಾದರೂ ತಪ್ಪಿಸಿಕೊಳ್ತಿನೇನೋ ಅಂತ ಅಪ್ಪ ನನ್ನ ಕೈಹಿಡಿಯುತ್ತಿದ್ದ. ಅಣ್ಣ ನನ್ನ ಇನ್ನೊಂದು ಕೈಹಿಡಿದುಕೊಳ್ಳುತ್ತಿದ್ದ.
ಜನಗಳ ಮಧ್ಯೆ ತೂರಿಕೊಂಡು ಸಂತೆ ಬೀದಿಗೆ ಹೋಗ್ತಾಯಿದ್ವಿ. ನನಗೆ ಸಂತೆಯಲ್ಲಿ ಗಮನ ಸೆಳೆಯುತ್ತಿದ್ದದ್ದು, ಕಲ್ಲುಗಾಲಿಯ ರಥ. ಅದು ಬಿಸಿಲಿಗೆ ಒಣಗದಿರಲೆಂದು ರಥಕ್ಕೆ ತಗಡಿನ ಶೀಟುಗಳನ್ನು ಹೊದಿಸಿದ್ದರು. ನಾನು ಏನಾದ್ರೂ ಕಾಣುತ್ತೇನೋ ಅಂತ ಇಣುಕಿಣುಕಿ ನೋಡುತ್ತಿದ್ದೆ. ಜಾತ್ರೆ ಟೈಮಲ್ಲಿ ಈ ರಥಕ್ಕೆ ಸಿಂಗಾರಬಂಗಾರ ಮಾಡೋದು ನೆನೆದು, ಮನಸ್ಸು ಅರಳುತ್ತಿತ್ತು. ‘ಅಪ್ಪ ಯಾವಾಗ ಜಾತ್ರೆ?’ ಎನ್ನುತ್ತಿದ್ದೆ. ‘ಇನ್ನೂ ಅದು ದೂರ ಇದೆ. ಈಗ ಆಗಸ್ಟ್ ತಿಂಗಳು. ಜನವರಿಯಲ್ಲಿ ಜಾತ್ರೆ’ ಎಂದು ಅಪ್ಪ ಅನ್ನುತ್ತಿದ್ದ. ಜನವರಿ ಯಾವಾಗ ಬರುತ್ತೆ ಎಂದು ತಿಂಗಳುಗಳನ್ನು ನಾನು ಬೆರಳಲ್ಲಿಯೇ ಎಣಿಸ್ತಾಯಿದ್ದೆ.
ಸಂತೆಯಲ್ಲಿನ ತರಕಾರಿ ಸೋಮಣ್ಣ ಎಲ್ಲರಿಗೂ ಪರಿಚಿತ. ಬ್ಯಾಂಕ್‌ನೋರು, ಮೇಷ್ಟ್ರುಗಳು, ಮೇಡಂಗಳು, ಪೊಲೀಸರು -ಹೀಗೆ ಅಫೀಸಿಯಲ್ಸ್ ಎಲ್ಲರೂ ಆತನ ಬಳಿಯೇ ತರಕಾರಿ ಖರೀದಿಸೋರು. ಚಿಲ್ಲರೆ ಕೊಡೋದರ ಜತೆಗೆ, ಪ್ರೀತಿಯಿಂದ ಆತ ಮಾತಾಡಿಸುತ್ತಿದ್ದ. ಐದಾರು ಜನರ ಜತೆ ಮಾತಾಡುತ್ತಲೇ, ಇನ್ನೈದು ಜನರ ಜತೆ ವ್ಯಾಪಾರ ಮಾಡ್ತಾಯಿದ್ದ. ಹುರುಳಿಕಾಯಿ, ಕ್ಯಾರೆಟ್, ಹೂಕೋಸು, ಬೀಡ್‌ರೂಟ್, ಗೆಡ್ಡೆ ಕೋಸು ಎಲ್ಲವನ್ನೂ ರಾಶಿ ಹಾಕಿಕೊಂಡಿರ್‍ತಾಯಿದ್ದ.
ಕ್ಷಣ ಸಹಾ ಪುರಸೊತ್ತಿಲ್ಲದಂತೆ ಸೋಮಣ್ಣನ ವ್ಯಾಪಾರ ನಡೆಯುತ್ತಿತ್ತು. ಅಪ್ಪ ‘ಕಾಲು ಕೆ.ಜಿ. ಕ್ಯಾರೆಟ್ ಹಾಕಿ’ ಅಂದರೆ ಯಾವುದೋ ಕಲ್ಲನ್ನು ತಕ್ಕಡಿ ತಟ್ಟೆಗೆ ಎಸೆದು ತೂಗುತ್ತಲೆ, ‘ಆಮೇಲೆ ಹುರುಳಿಕಾಯಿ ಹಾಕ್ಲಾ ಮೇಷ್ಟ್ರೆ..’ ಎನ್ನುತ್ತಿದ್ದ. ಹುರುಳಿಕಾಯನ್ನು ಕೈಯಲ್ಲಿ ಮುರಿದ ಅಪ್ಪ, ‘ಹೂಂ ಹಾಕು’ ಅನ್ನೋರು. ತಕ್ಷಣ ಅರ್ಧ ಕೆ.ಜಿ. ಕಲ್ಲನ್ನು ತಟ್ಟೆಗೆ ಎಸೆಯೋನು. ನಮ್ಮ ಅರ್ಧ ಬ್ಯಾಗನ್ನು ಸೋಮಣ್ಣನ ಅಂಗಡಿಯಲ್ಲಿಯೇ ತುಂಬಿಸುತ್ತಿದ್ದೆವು.
ಅಮೇಲೆ ಅದೇ ಸಾಲಲ್ಲಿ ಮುಂದಕ್ಕೆ ಹೋಗ್ತಾಯಿದ್ವಿ. ಅಲ್ಲಿ ಈರುಳ್ಳಿ ಬೆಳ್ಳುಳ್ಳಿ ರಾಶಿಗಳು. ಅಲ್ಲಿ ದಪ್ಪನೆಯ ಈರುಳ್ಳಿ ೨ ಕೆ.ಜಿ. ಖರೀದಿಸಿ, ಒಂದು ರೂಪಾಯಿ ನೀಡಿ, ಒಂದು ಗುಡ್ಡೆ ಬೆಳ್ಳುಳ್ಳಿ ತಗೊಳ್ಳುತ್ತಿದ್ದೆವು. ಅಮೇಲೆ ಟಮೊಟೊ ಖರೀದಿಗೆ ಅಪ್ಪ ಅತ್ತಿತ್ತ ಸುತ್ತಾಡೋನು. ಅಪ್ಪನ ಹಿಂದೆ ಕಣ್‌ಕಣ್ ಬಿಟ್ಟುಕೊಂಡು, ನಾನು ಅಣ್ಣ ಹೆಜ್ಜೆ ಹಾಕುತ್ತಿದ್ದೆವು. ಅಪ್ಪ ಜೋರಾಗಿ ಹೆಜ್ಜೆ ಹಾಕೋನು. ನನ್ನ ಎಳೆದುಕೊಂಡು ಅಪ್ಪನನ್ನು ಅಣ್ಣ ಹಿಂಬಾಲಿಸುತ್ತಿದ್ದ. ‘ಟಮೊಟೊನಾ ಕಡೆಗೆ ಕೊಳ್ಳಬೇಕು.. ಯಾಕಂದ್ರೆ ಮೊದ್ಲೆ ತಕೊಂಡ್ರೆ ಅವು ತಳ ಸೇರಿ ಅಜ್ಜಿಬಜ್ಜಿಯಾಗುತ್ತವೆ ’ ಎಂದು ಅಪ್ಪ ಸಲಹೆ ನೀಡೋನು. ನಾನು ಅಣ್ಣ ಹೂಂಗುಟ್ಟುತ್ತಿದ್ದೆವು.
ಅಪ್ಪನ ಸ್ಟೂಡೆಂಟ್ಸ್ ಅನೇಕರು ತರಕಾರಿ ಮಾರೋರು. ಅವರೆಲ್ಲರೂ ‘ನಮಸ್ಕಾರ ಸಾರ್, ನಾನು ನಿಮ್ಮ ಸ್ಟೂಡೆಂಟ್ ಸಾರ್’ ಅನ್ನೋರು. ತರಕಾರಿ ಕೊಟ್ಟು ‘ದುಡ್ಡು ಬೇಡ ಸಾರ್’ ಎನ್ನೋರು. ಅಪ್ಪ ಬಲವಂತ ಮಾಡಿ ದುಡ್ಡು ಕೊಟ್ಟು ಮುಂದೆ ಹೋಗೋನು. ಅಪ್ಪನ ಪರಿಚಿತರು ಅನೇಕರು ಸಿಗ್ತಾಯಿದ್ದರು. ಆಗ ಒಂದೆರಡು ನಿಮಿಷ ಮಾತಾಡಿ, ಮುಂದೆ ಹೋಗುತ್ತಿದ್ದೆವು.
ಸೊಪ್ಪು ಕೊಳ್ಳೋದಕ್ಕೆ ಸಂತೆ ಕೊನೆಗೆ ಅಂದರೆ ಮಠದ ಪ್ರವೇಶ ದ್ವಾರದ ಕಡೆಗೆ ಬರಬೇಕಿತ್ತು. ನನಗೆ ಅಲ್ಲಿಗೆ ಬರೋದಕ್ಕೆ ಭಯವಾಗುತ್ತಿತ್ತು. ಅಲ್ಲಿ ಎತ್ತುಗಳಿಗೆ ಇಮಾಂ ಸಾಬಿ ಮತ್ತು ಆತನ ಸೋದರರು ಲಾಳ ಕಟ್ಟೋರು. ಎತ್ತುಗಳು ಬೆದರದಿರಲಿ ಎಂದು ಸೇದೋ ಹಗ್ಗದಿಂದ ಕಾಲುಗಳ ಕಟ್ಟಿ ಹಾಕಿ, ಅದರ ಮೇಲೆ ಮೂರುನಾಲ್ಕು ಜನ ಕೂತಿರೋರು. ಸಾಬಿ ತಲೆಗೊಂದು ಟೋಪಿ ಸಿಕ್ಕಿಸಿಕೊಂಡು, ಸೂಕ್ತ ಲಾಳ ಹುಡುಕಿ ಪಾದದ ಮೇಲಿಟ್ಟು ಮೊಳೆ ಹೊಡೆಯೋನು. ಬೆದರಿದ ಎತ್ತುಗಳು ಒದ್ದಾಡುತ್ತಿದ್ದವು. ‘ಭಯ ಯಾಕೆ, ನಾನಿಲ್ವಾ?’ ಎನ್ನುತ್ತಾ ಅಪ್ಪ ಕರೆದುಕೊಂಡು ಹೋಗೋನು. ನಾನು ಎಷ್ಟು ನೋಡಬಾರದು ಅನ್ನಿಸಿದರೂ ಕಣ್ಣು ಅತ್ತಲೇ ಹೋಗುತ್ತಿದ್ದವು. ಅಣ್ಣನಿಗೂ ಭಯ ಇತ್ತು.
‘ಅದನ್ನು ಲಾಳ ಕಟ್ಟೋದು ಅನ್ತಾರೆ. ನಾವು ಚಪ್ಪಲಿ ಹಾಕಿಕೊಳ್ಳೋದಿಲ್ವಾ.. ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟುತ್ತಾರೆ. ಅವುಗಳಿಗೆ ಅದರಿಂದ ಒಳ್ಳೆಯದು. ಒಂಚೂರು ನೋವಾಗೋದಿಲ್ಲ. ಉಗುರು ಕತ್ತರಿಸಿದರೆ ನಮಗೇನು ನೋವಾಗುತ್ತಾ? ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟೋದರಿಂದ ನೋವಾಗದು‘ ಎಂದು ಅಪ್ಪ ವಿವರಣೆ ನೀಡೋನು.
ಸಂತೆಯಲ್ಲಿ ನನಗೆ ಭಯ ಹುಟ್ಟಿಸುತ್ತಿದ್ದ ಸಂಗತಿಗಳು ಇನ್ನೆರಡದಿದ್ವು. ಮೊಂಡರು ಅಪರೂಪಕ್ಕೆ ಸಂತೆಯಲ್ಲಿ ಕಾಣಿಸಿಕೊಳ್ಳೋರು, ಕೈ ಕೊಯ್ಯುಕೊಂಡು ದುಡ್ಡು ಕೇಳೋರು. ‘ಮೊಂಡೋರು ನಾವು ಮೊಂಡೋರು.. ದುಡ್ಡು ಕೊಡವ್ವಾ, ದುಡ್ಡು ಕೊಡೋ ತಂದೇ’ ಎಂದು ಬೇಡೋರು. ನನಗೆ ಅವರು, ಮೈತುಂಬ ಕಾಣಿಸೋ ಗಾಯಗಳು, ಅವರ ಪೊದೆಯಂಥ ತಲೆಗೂದಲು ನೋಡಿ ಸಕತ್ತು ಹೆದರಿಕೆಯಾಗುತ್ತಿತ್ತು.
ಮೊಂಡರ ಜತೆಗೆ ಒಂದೊಂದು ಸಲ ಚಾಟಿ ಬಿಸೋರು ಬರೋರು. ಸೊಂಟದಲ್ಲಿ ಮಗು ನೇತಾಡಿಸಿಕೊಂಡ ಕೊಳಕು ಸೀರೆಯುಟ್ಟ ಹೆಂಗಸು ತಲೆ ಮೇಲೆ ದೇವರನ್ನು ಹೊತ್ತುಕೊಂಡಿರೋಳು. ತಲೆ ಮೇಲಿನ ಬುಟ್ಟಿಯಲ್ಲಿ ಅರಿಶಿಣ ಕುಂಕುಮ, ತಂಗಟೆ ಸೊಪ್ಪು ಮುಡಿದುಕೊಂಡಿದ್ದ ಆ ಹೆಣ್ಣು ದೇವರ ಮುಖವಾಡ, ದೇವರ ಕೋರೆ ಹಲ್ಲುಗಳ ಕಂಡು, ನಾನು ನಿಂತಲ್ಲೆ ಕೈಮುಗಿಯುತ್ತಿದ್ದೆ.
ಚಾಟಿಯಿಂದ ಮೈಗೆ ಬಾಸುಂಡೆ ಬರುವಂತೆ ತೆಳ್ಳಗಿದ್ದ ವ್ಯಕ್ತಿಯೊಬ್ಬ ಹೊಡೆದುಕೊಳ್ಳುತ್ತಿದ್ದ. ಬಾಯಲ್ಲಿ ಬೆಳ್ಳಿ ಮೀಸೆ, ಮುಖದ ತುಂಬ ಅರಿಶಿಣ ಕುಂಕುಮ, ಕೊರಳಲ್ಲಿ ಚಾಟಿ , ತೋಳಲ್ಲಿ ಪಂಚಲೋಹದ ಬಳೆ ಆತನ ವೇಷಭೂಷಣ. ಕೈಯಲ್ಲಿ ತಟ್ಟೆ ಹಿಡಿದು ಅತ ಅಂಗಡಿಗಳ ಮುಂದೆ ನಿಲ್ಲುತ್ತಿದ್ದ. ಅವರು ಕೊಡೋ ೫ ಪೈಸೆ, ೧೦ಪೈಸೆಯನ್ನು ತಟ್ಟೆಗೆ ಹಾಕಿಕೊಳ್ಳುತ್ತಿದ್ದ. ಆಗಾಗ ತಟ್ಟೆಯನ್ನು ನೆಲದ ಮೇಲಿಟ್ಟು, ಕೊರಳಲ್ಲಿ ಹಾಕಿಕೊಂಡಿದ್ದ ಚಾಟಿಯನ್ನು ಬಲಗೈಲಿ ಹಿಡಿದು, ತನ್ನ ಮೈಗೆ ಹೊಡೆದುಕೊಳ್ಳುತ್ತಿದ್ದ. ಆತ ನಮಗೆ ಹೊಡೆಯದಿದ್ದರೂ, ನನಗೆ ನೋವಾದಂತೆ ನಾನು ತತ್ತರಿಸಿದ್ದೆ. ಅಪ್ಪ ಬಿಗಿಯಾಗಿ ಕೈಯಿಡಿದುಕೊಂಡು ನನ್ನನ್ನು ಮುನ್ನಡೆಸುತ್ತಿದ್ದ.
ಸಂತೆ ಮುಗಿಸಿ ಲಿಂಗಣ್ಣನ ಅಂಗಡಿ ಬಳಿಗೆ ಬರುತ್ತಿದ್ದೆವು. ಬಾಯಿತುಂಬ ಎಲೆಅಡಿಕೆ ತುಂಬಿಕೊಂಡಿರುತ್ತಿದ್ದ ಲಿಂಗಣ್ಣ ನಗೋನು. ಸನ್ನೆ ಮೂಲಕವೇ ಉತ್ತರಿಸೋನು. ಏನಾದ್ರೂ ಹೇಳೋ ತುರ್ತು ಬರದ ಹೊರತು, ಬಾಯಲ್ಲಿನ ಎಲೆಅಡಿಕೆ ತಪ್ಪೆಯನ್ನು ಉಗಿಯುತ್ತಿರಲಿಲ್ಲ. ಎಲೆಅಡಿಕೆ ರಸ, ಬಾಯಿಯ ಕಟವಾಯಿಯಿಂದ ಕೆಳಕ್ಕಿಳಿದಿರೋದು. ಅಪ್ಪ ಸಿಜರ್ ಸಿಗರೇಟ್ ಪಡೆದು, ಬೆಂಕಿ ಹಚ್ಚಿ ಹೊಗೆ ಬಿಡ್ತಾಯಿದ್ದ. ತಲಾ ೧೦ಪೈಸೆಗೆ ಬಟಾಣಿಯೋ, ಉಪ್ಪುಗಡಲೆಯೋ ಯಾವುದೋ ಒಂದು ನನ್ನ ಮತ್ತು ನನ್ನಣ್ಣನ ಜೇಬು ಸೇರುತ್ತಿತ್ತು. ನಾವು ಒಂದೊಂದೇ ಕಾಳನ್ನು ಬಾಯಲ್ಲಿ ಹಾಕಿಕೊಳ್ತಾಯಿದ್ವಿ. ಮನೆಗೆ ಬರೋ ಹೊತ್ತಿಗೆ ಸಂಜೆ ಆಗಿರ್‍ತಾಯಿತ್ತು.
ಸೀಮೆ ಎಣ್ಣೆ ಸ್ಟೋವ್ ಹಚ್ಚಿ, ಅಮ್ಮ ಕಾಫಿಗೆ ಇಟ್ಟು ತರಕಾರಿಯನ್ನು ನೆಲದ ಮೇಲೆ ಸುರಿಯೋಳು. ಬದನೆಕಾಯಿ ಚೆನ್ನಾಗಿಲ್ಲ, ಸೊಪ್ಪು ಬಾಡಿದೆ ಎಂದು ಅಮ್ಮ ಗೊಣಗುತ್ತಿದ್ದಳು. ಅದು ಎಷ್ಟು ? ಇದು ಎಷ್ಟು ? ಎಂದು ಅಪ್ಪ ವಿವರಿಸುತ್ತಿದ್ದ. ಕಾಫಿ ಲೋಟಗಳನ್ನು ಅಮ್ಮ ನಮ್ಮ ಮುಂದೆ ಇಡೋಳು. ಲೋಟದ ಮೇಲಿನ ಹೆಚ್.ಸಿ.ಎನ್, ಹೆಚ್.ಸಿ.ಆರ್ ಮತ್ತು ಹೆಚ್.ಸಿ.ಎ. ಇನ್ಸಿಯಲ್‌ಗಳನ್ನು ನಾವು ಪದೇಪದೇ ಓದುತ್ತಿದ್ದವು. ಬ್ರೆಡ್ ಇದ್ದರೆ ಅಮ್ಮ ಕಾಫಿ ಜತೆ ಕೊಡೋಳು.
ಕಬ್ಬಾಕ್ಷಿ ಸೊಪ್ಪುನ ಕ್ಲೀನ್ ಮಾಡಿ, ಅಮ್ಮ ಬಸ್ಸಾರ್‌ಗೆ ರೆಡಿ ಮಾಡೋಳು. ಬಿಸಿ ಬಿಸಿ ಮುದ್ದೆ ಜತೆ ಸಾಂಬರ್ ಹಾಕಿಕೊಂಡು ತಿನ್ನೋದು ಒಂದು ಸಂಭ್ರಮ. ‘ಮುದ್ದೇ.. ನಾ’ ಎಂದು ನಾನೂ ಅಣ್ಣನಂತೆಯೇ ಗೊಣಗುತ್ತಿದ್ದೆ. ಆದರೆ ಮುದ್ದೆ ಯಾಕೋ ಹೊಟ್ಟೆಗೆ ಸಲೀಸಾಗಿ ಸೇರಿ ಬಿಡುತ್ತಿತ್ತು. ಈಗಲೂ ನನಗೆ ಮುದ್ದೆ ಇಷ್ಟವೆ.
ಸಂತೆಯಲ್ಲಿ ಸಿಗದ ವಸ್ತುಗಳೇ ಅಪರೂಪ. ಬೀದಿ ಬದಿಯಲ್ಲಿಯೇ ಪಕೋಡಗಳನ್ನು ಮಾರೋರು. ‘ಧೂಳು ಅವೆಲ್ಲ ತಿನ್ನಬಾರದು’ ಅನ್ನೋನು ಅಪ್ಪ. ನನ್ನ ಫ್ರೆಂಡ್ ಹೆಂಜಾರಿ, ತುಳಸಿರಾಮ ಸಂತೆಯಿಂದ ಪಕೋಡಗಳನ್ನು ಕೊಂಡು ತರೋರು. ಬಸ್‌ಸ್ಟಾಂಡ್‌ನಲ್ಲಿ ಲಕ್ಷ್ಮಣಪ್ಪ ನ ಹಣ್ಣಂಗಡಿ ಪಕ್ಕದಲ್ಲಿರೋ ನಾಗರಾಜಪ್ಪ ತನ್ನ ಅಂಗಡಿಯಲ್ಲಿ ೫೦ ಪೈಸೆಗೊಂದು ಮೆಣಸಿನಕಾಯಿ ಬಜ್ಜಿ ಮಾರೋನು. ಆದ್ರೆ ಸಂತೆಯಲ್ಲಿ ನಾಕಾಣಿಗೆ ಸಿಗೋದು. ಪಕೋಡಗಳು ಬರೀ ೧೦ ಪೈಸೆ. ಒಂದು ರೂಪಾಯಿಗೆ ೧೦ ಪಕೋಡ ತಂದು ಹೆಂಜಾರಿ ತಿನ್ನೋನು. ನನಗೂ ತಿನ್ನು ಅಂತಾ ಕೊಡೋನು. ನಾನು ಭಯದಿಂದಲೇ ಒಂದು ದಿನ ಒಂದೇ ಒಂದು ತಿಂದಿದ್ದೆ. ಅಪ್ಪ-ಅಮ್ಮನ ಎಚ್ಚರಿಕೆ ಮಾತುಗಳು, ಪಕೋಡ ತಿನ್ನದಂತೆ ತಡೆದಿದ್ದವು. ಜತೆಗೆ ಅದರ ರುಚಿಯೂ ಅಷ್ಟರಲ್ಲಿಯೇ ಇತ್ತು.
ಈಗಲೂ ಸಂತೆ ನಡೆಯುತ್ತೆ, ಖುಷಿಯಲ್ಲಿ ತಿರುಗಾಡಲು ಬಾಲ್ಯವಿಲ್ಲ. ಅದಕ್ಕೂ ಹೆಚ್ಚಿನದಾಗಿ ನನ್ನ ಕೈಹಿಡಿದು ನಡೆಸೋಕೆ ಅಪ್ಪ ಇಲ್ಲ. ಯಾಕೋ ಪಟ್ಟನಾಯಕನಹಳ್ಳಿಗೆ ಹೋಗಲು ಮನಸ್ಸೆ ಬರೋದಿಲ್ಲ. ಚೆಡ್ಡಿ ದೋಸ್ತು ಶೆಟ್ಟಿ ಮಂಜ ಅಂಗಡಿ ನೋಡಿಕೊಂಡು ಚೆನ್ನಾಗಿದ್ದಾನೆ.

ಸೀರಿಯಸ್ ಜೋಕ್ಸ್!

ಭಲೇ ಗೌಡ!
ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ ‘ಬೇಕಾದ ವರ ಕೇಳು’ ಎಂದ.
‘ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ’ ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!
ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!
*
ಯಡ್ಡಿ ಖುಷಿ!
ಯಡಿಯೂರಪ್ಪ ಬಲು ಖುಷಿಯಲ್ಲಿದ್ದರು. ಈ ಹಿಂದೆ ಎರಡೂ ಕಿವಿಗೆ ದೇವೇಗೌಡರು ಹೂವು ಮುಡಿಸಿದ್ದಾರೆ. ಎರಡೂ ಕಿವಿ ಖಾಲಿಯಿಲ್ಲದ ಕಾರಣ, ಮುಂದಿನ ಸಲ ಗೌಡರ ಹೂವು ಮುಡಿಸೋ ಪ್ರಯತ್ನ ಫಲಿಸೋದಿಲ್ಲ ಅನ್ನೋದು ಅವರ ನಂಬಿಕೆ. ಆದರೆ ದೇವೇಗೌಡರು ಈ ಸಲ ಹೂವಿಡೋ ಹಳೇ ಐಡಿಯಾ ಪಕ್ಕಕ್ಕಿಟ್ಟು, ನಾಮ ಹಾಕಲು ಮುಂದಾಗಿದ್ದಾರೆ. ತಿರುಪತಿಯಿಂದ ಒಂದು ಲೋಡು ನಾಮದ ಉಂಡೆ ತರಿಸಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ!
*
ಹಡಗಲ್ಲಿ ನಾಡಿನ ನಾಯಕರು!
ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಖಗೆ, ಧರ್ಮಸಿಂಗ್ ಸೇರಿದಂತೆ ನಾಡಿನ ಪ್ರಮುಖರೆಲ್ಲರೂ ಹಡಗು ಹತ್ತಿದ್ದರು. ಒಂದು ತೂತಿನ ಪರಿಣಾಮ ನೀರು ಒಳ ಬರುತ್ತಿತ್ತು. ಒಂದು ವೇಳೆ ಹಡಗು ಮುಳುಗಿದರೆ ಯಾರು ಉಳಿಯುತ್ತಾರೆ?
ತುಂಟ ಮತದಾರನ ಉತ್ತರ : ಯಾರು ಉಳಿಯುವರೋ ಖಾತ್ರಿ ಇಲ್ಲ, ಕನ್ನಡಿಗರಂತೂ ಉಳಿಯುತ್ತಾರೆ!
*
ಎಲೆಕ್ಷನ್ ಗಾದೆಗಳು
* ಮತದಾರರಿಗೊಂದು ಕಾಲ, ಎಂಎಲ್‌ಎಗಳಿಗೊಂದು ಕಾಲ!
* ಬಿ ಫಾರಂಗೋದ ಮಾನ, ಇನ್ನೊಂದು ಪಕ್ಷಕ್ಕೆ ಜಿಗಿದರೆ ಬರುತ್ತಾ?
* ಎಲ್ಲಾ ಶಾಸಕರ ಮನೆ ದೋಸೆಯೂ ತೂತೇ.
* ಗೆದ್ದ ಪಕ್ಷದ ಬಾಲ ಹಿಡಿ
* ಗೆಲ್ಲರಾರದ ಅಭ್ಯರ್ಥಿ ಕ್ಷೇತ್ರ ಡೊಂಕು ಎಂದ!

ನಮಗೂ ಕ್ಷೇಮ! ದೇವರಿಗೂ ಕ್ಷೇಮ!!

ಅದು ಬಿಎಂಟಿಸಿ ಬಸ್ಸು. ಸೀಟ್ ಸಿಕ್ಕಿರಲಿಲ್ಲ. ಬೇಸರದಿಂದಲೇ ಕಂಬಿ ಹಿಡಿದು ನೇತಾಡುತ್ತಿದ್ದೆ. ಎಂದಿನಂತೆ ಮೇಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್. ಇವತ್ತು ಕೆಲಸಕ್ಕೆ ಲೇಟಾಗುತ್ತಿರುವುದನ್ನು ಅರಿತ ಮನಸ್ಸು ಅಸಹನೆಯಿಂದ ಕುದಿಯುತ್ತಿತ್ತು. ಅಷ್ಟರಲ್ಲಿಯೇ ಹಿಂದಿದ್ದ ಇಬ್ಬರು ಯುವಕರ ಮಾತು ಯಾಕೋ ಕುತೂಹಲಕಾರಿಯಾಗಿದೆ ಅನ್ನಿಸಿತು. ಬೇಡವೆಂದರೂ ಕಿವಿಗಳು ಅತ್ತಲೇ ತಿರುಗಿದವು. ನನ್ನಂತೆಯೇ ಅನೇಕರ ಕಿವಿಗಳು ಆ ದಿಕ್ಕಿನತ್ತಲೇ ಬಾಗಿದ್ದವು.
ಜೀನ್ಸ್ ಪ್ಯಾಂಡ್, ನೀಲಿ ಟೀ ಶರ್ಟ್ ಧರಿಸಿದ್ದ ಯುವಕ, ಜತೆಯಲ್ಲಿದ್ದವನಿಗೆ ಮಾರ್ಗದರ್ಶನ ನೀಡುತ್ತಿದ್ದ. ಬಹುಶಃ ಅವರಿಬ್ಬರೂ ಒಂದು ಕಾಲದ ಗೆಳೆಯರಿರಬಹುದು. ತುಂಬಾ ದಿನಗಳ ನಂತರ ಆಕಸ್ಮಿಕವಾಗಿ ಬಸ್‌ನಲ್ಲಿ ಭೇಟಿಯಾಗಿದ್ದಾರೆ ಅನ್ನಿಸಿತು. ಜೀನ್ಸ್ ಪ್ಯಾಂಡ್‌ಧಾರಿ ಭಾಷಣ ಆರಂಭಿಸಿದ್ದ. ತನ್ನ ಬದುಕಿನ ಏರಿಳಿತಗಳು, ಇತ್ತೇಚೆಗಿನ ಉನ್ನತಿ ಬಗ್ಗೆ ಹೇಳುತ್ತಿದ್ದ.
‘ನೋಡು ಮಗಾ, ಇಂಗ್ಲಿಷ್ ಬರೋದಿಲ್ಲ ಎಂಬ ಕೀಳರಿಮೆ ಬೇಡ. ಯಾರಿಗೂ ಶುದ್ಧ ಇಂಗ್ಲಿಷ್ ಗೊತ್ತಿಲ್ಲ. ಇವತ್ತಿನಿಂದಲೇ ತಪ್ಪೋ ಸರಿಯೋ ಮಾತು ಶುರು ಮಾಡು. ಕೆಲಸ ಚಿಕ್ಕದಾದರೂ ಪರವಾಗಿಲ್ಲ ಮುಂದುವರಿಸು. ಜಾಬ್ ವೆಬ್‌ಸೈಟ್‌ಗಳಿಗೆ ಬಯೋಡೇಟಾ ಕಳಿಸು. ದುಡಿಯೋದಕ್ಕಿಂತಲೂ ಮೊದಲು ಅನುಭವ ಸಂಪಾದಿಸಲು ಪ್ರಯತ್ನಿಸು. ಕೆಲಸ ಗೊತ್ತಿದ್ದರೆ, ಇಂದು ಯಾರು ಬೇಕಾದರೂ ಕರೆದು ಅವಕಾಶ ಕೊಡ್ತಾರೆ. ನನ್ನೇ ನೋಡು, ಬರೀ ೫೦೦೦ ರೂಪಾಯಿಗೆ ಅಲ್ಲಿ ಸೇರಿದೆ. ಈಗ ೨೦ಸಾವಿರ ಬರ್‍ತಾಯಿದೆ. ಏನಾದರೂ ಮಾಡಿ ಇನೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿದರೆ, ೩೦-೪೦ ಸಾವಿರ ಎಣಿಸಬಹುದು...’ ಮಾತು ಪ್ರವಾಹದಂತೆ ಹರಿಯುತ್ತಿತ್ತು. ಇನ್ನೊಬ್ಬ ಬಾಯಿಬಿಟ್ಟುಕೊಂಡು ಕೇಳುತ್ತಿದ್ದ.
‘ನಿನಗೇನಿದೆ ಕಷ್ಟ? ಅದರ ೧೦ರಷ್ಟು ತಾಪತ್ರಯ ನನಗಿತ್ತು. ವರ್ಷದ ಹಿಂದೆ ಕಾಯಿಲೆ ಬಿದ್ದು, ಒಂದು ತಿಂಗಳು ಹಾಸಿಗೆ ಹಿಡಿದಿದ್ದೆ. ಏನು ಮಾಡಿದ್ದರೂ ಕೈಗೆ ಬರ್ತಾ ಇರಲಿಲ್ಲ. ಆಗ ನಮ್ಮ ಸೋದರ ಮಾವ, ನನ್ನ ಪಾಲಿಗೆ ದೇವರ ಥರಾ ಬಂದರು’.
‘ಏನ್ ಮಾಡಿದರು?’
‘ಪ್ರಾರ್ಥನೆ ಮಾಡೋದಕ್ಕೆ ಹೇಳಿದರು..’
‘ಪ್ರಾರ್ಥನೆನಾ?’
‘ಹೌದು. ಯೇಸು ಪ್ರಭುವಿನ ಪ್ರಾರ್ಥನೆಯನ್ನು ಅಂದಿನಿಂದ ನಾನು ಶುರು ಮಾಡಿದೆ. ಬೆಳಗ್ಗೆ ಒಂದು ೧೦ ನಿಮಿಷ ಪ್ರಾರ್ಥನೆ ಮಾಡ್ತೀನಿ. ಸಮಸ್ಯೆ ಬಂದಾಗಲೆಲ್ಲ, ಯೇಸು ಪ್ರಭುವನ್ನು ನೆನಪು ಮಾಡಿಕೊಳ್ಳುತ್ತೇನೆ. ವಾರಕ್ಕೊಮ್ಮೆ ಚರ್ಚ್‌ಗೆ ಹೋಗ್ತೀನಿ. ಯೇಸು ಪ್ರಭು ದೆಸೆಯಿಂದ ಕಲ್ಲಿನಂಥ ಕಷ್ಟಗಳು ಕರಗಿ ನೀರಾಗುತ್ತವೆ. ಬೇಕಿದ್ದರೇ ನೀನೂ ಟ್ರೈ ಮಾಡು.. ಕಳಕೊಳ್ಳೋದೇನಿದೆ.. ಒಳ್ಳೆಯದಾಗುತ್ತೆ ಅಂದ್ರೆ, ಪ್ರಾರ್ಥನೆ ಮಾಡೋದು ತಪ್ಪಾ? ನನಗಂತೂ ಒಳ್ಳೆಯದಾಗಿದೆ. ನಿನಗೂ ಒಳ್ಳೆಯದಾಗಲಿ ಅಂಥ ಇಷ್ಟೆಲ್ಲಾ ಹೇಳಿದೆ. ಇದರ್‍ಮೇಲೆ ನಿನ್ನಿಷ್ಟ.. ’ ಎಂದ ಆ ಯುವಕ ತನ್ನ ಸ್ಟಾಪ್ ಬಂದ ತಕ್ಷಣ, ಟಾಟಾ ಹೇಳುತ್ತ ಇಳಿದು ಹೋದ. ತನ್ನ ಗೆಳೆಯನಿಗೆ ಹೇಳುವಂತೆ, ಹಿಡೀ ಬಸ್‌ಗೆ ಆತ ತಾನು ಏನು ಹೇಳಬೇಕಾಗಿದ್ದೋ ಅದನ್ನು ಹೇಳಿದ್ದ.
***
ಗೆಳೆಯ ಕುಮಾರ ಬಿಪಿಎಡ್ ಮಾಡಿ ನಾಲ್ಕಾರು ವರ್ಷಗಳಾಗಿತ್ತು. ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಸೃಷ್ಟಿಸುವಂತೆ, ತಲೆಯಲ್ಲಿ ಬೆಳ್ಳಿ ಕೂದಲ ಸಂತತಿ ಹೆಚ್ಚುತ್ತಿತ್ತು. ಯಾವ ಕೆಲಸವಾದರೂ ಪರವಾಗಿಲ್ಲ ಮಾಡೋದಕ್ಕೆ ರೆಡಿ ಎನ್ನುತ್ತಿದ್ದವನಿಗೆ ಊರಲ್ಲಿನ ಕಾನ್ವೆಂಟ್‌ನಲ್ಲಿ ಕೊನೆಗೂ ಕೆಲಸ ಸಿಕ್ಕಿತು. ಆದರೆ ಆ ಕೆಲಸವನ್ನು ಕೊಡಲು ಆಡಳಿತ ಸಂಸ್ಥೆ ಹಿಂದೆ ಮುಂದೆ ನೋಡಿತ್ತು. ಡಬ್ಬಲ್ ಡಿಗ್ರಿ ಸರದಾರನಿಗೆ ಮೂರಂಕೆಯ ಸಂಬಳ ಕೊಡೋದು ಹೇಗೆ ಎಂಬುದು ಅವರ ತಳಮಳ. ಸಂಬಳಕ್ಕಿಂತಲೂ ಕೆಲಸ ದೊಡ್ಡದು ಎಂಬ ಮನಸ್ಥಿತಿ ಆತನದು. ಕೆಲಸ ಸಿಕ್ಕಿದ ದಿನ ನನಗೆ ಟೀ ಕೊಡಿಸಿ, ಮುಖ ಅರಳಿಸಿದ್ದ.
ಆ ಮಧ್ಯೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಸರಕಾರ, ಅರ್ಜಿ ಆಹ್ವಾನಿಸಿತು. ಸಿಇಟಿ ಪರೀಕ್ಷೆ ಆತನ ಪಾಲಿಗೆ ಸ್ವರ್ಗದ ರಹದಾರಿಯಂತೆ ಕಾಣಿಸಿತ್ತು.
ಅರ್ಜಿ ಗುಜರಾಯಿಸಿದ ಆತ ಬೆಂಗಳೂರಿಗೆ ಹೊರಟ. ಒಂದಷ್ಟು ಪುಸ್ತಕ ತಂದು, ಕಷ್ಟಪಟ್ಟು ಓದುವುದು, ಆ ಮೂಲಕ ಹಠ ಹಿಡಿದು ಕೆಲಸ ಗಿಟ್ಟಿಸುವ ಕನಸು ಆತನದು.
ಈ ಮಧ್ಯೆ ಧರ್ಮಸ್ಥಳಕ್ಕೆ ಹೋಗುವ ಬಯಕೆ ಮನದಲ್ಲಿ ಬಂತು. ಬಹುದಿನದಿಂದ ಬಾಕಿ ಉಳಿದಿದ್ದ ಟೂರ್ ನೆನಪಾಯಿತು. ಧರ್ಮಸ್ಥಳದಲ್ಲಿ ಹರಕೆ ಕಟ್ಟಿದ. ‘ಕೆಲಸ ಸಿಕ್ಕರೆ ನಾನು ಮುಡಿ ಕೊಡ್ತಿನಿ, ಕೈ ಬಿಡಬೇಡವೋ ಮಂಜುನಾಥಾ..’ ಎಂದು ಬೇಡಿಕೊಂಡ. ಮಂಜುನಾಥ ಕೈ ಹಿಡಿದನೋ ಅಥವ ಕುಮಾರನ ಶ್ರಮಕ್ಕೆ ಫಲ ಸಿಕ್ಕಿತೋ ಗೊತ್ತಿಲ್ಲ. ಅವನಂತೂ ‘ಎಲ್ಲವೂ ಮಂಜುನಾಥನ ದಯೆ’ ಎನ್ನುತ್ತಾನೆ. ಆತನ ಮನೆಯಲ್ಲೀಗ ಮಂಜುನಾಥನ ದೊಡ್ಡ ಪಟ ಗೋಡೆಯನ್ನು ಅಲಂಕರಿಸಿದೆ.
***
ಈಗ ಒಂದು ಪ್ರಶ್ನೆ. ಮೇಲಿನ ಎರಡೂ ಪ್ರಕರಣಗಳಲ್ಲಿ ದೇವರು ಕೈಹಿಡಿದನೋ ಅಥವಾ ಎಲ್ಲವೂ ಕಾಕತಾಳಿಯವೋ? ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ರೂಪುಗೊಳ್ಳುತ್ತವೆ. ಆ ವಿಚಾರ ಬಿಡಿ. ದೇವರ ಶಕ್ತಿ ಪರೀಕ್ಷಿಸುವ ಬದಲು, ನಮ್ಮೊಳಗಿನ ಶಕ್ತಿಯನ್ನು ಬಳಸಿಕೊಳ್ಳುವುದರಲ್ಲಿಯೇ ಹೆಚ್ಚು ಖುಷಿಯಿದೆ ಎಂದು ಅಂದುಕೊಳ್ಳುವುದೇ ನಮಗೂ ಮತ್ತು ದೇವರಿಗೂ ಕ್ಷೇಮ.

Tuesday, May 6, 2008

ಹಾಗೇ ಸುಮ್ಮನೆ..

ಅಪ್ಪ
ಅವನು ಅತೀ ಅವಸರದಲ್ಲಿ ಹೊರಟಿದ್ದ. ನೆತ್ತಿಯನ್ನು ಕೆಂಡದಂಥ ಬಿಸಿಲು ಸುಡುತ್ತಿತ್ತು. ಕಾಲಲ್ಲಿ ಚಪ್ಪಲಿ ಬೇರೆಯಿಲ್ಲ. ಕೆಂಪಗೆ ಕಾದ ಕಬ್ಬಿಣದ ಸಲಾಕೆ ಮೇಲೆ ಪಾದವೂರಿದಂತೆ ಅವನಿಗೆ ಅನ್ನಿಸುತ್ತಿತ್ತು.
ಹೆಂಡತಿ ಔಷಧ ಮುಗಿದು ವಾರವಾಗಿತ್ತು. ಔಷಧ ಇಲ್ಲದೇ ಕೆಮ್ಮು ಉಬ್ಬಸದ್ದೇ ಸದಾ ಅಬ್ಬರದ ಸದ್ದು. ಹಾಸಿಗೆಯಲ್ಲಿ ಅವಳದು ಸದಾ ನರಳಾಟ. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಎಂದು ಮಾಲೀಕ, ಕಡೆಯ ಗಡುವು ಕೊಟ್ಟು ಹೋಗಿದ್ದ. ಇನ್ನೂ ಏನೇನೋ ತಾಪತ್ರಯ. ಎಲ್ಲವೂ ನೆನಪಾಯಿತು.
ಕೊನೆಗೂ ಪೋಸ್ಟ್ ಆಫೀಸ್‌ಗೆ ಬಂದು ಎಂ.ಓ. ಫಾರಂ ಪಡೆದ. ನಡುಗುವ ಕೈಯಲ್ಲಿಯೇ ಎಂ.ಓ.ಫಾರಂ ತುದಿಯಲ್ಲಿರುವ ಸಂದೇಶ ಎಂಬ ಜಾಗದಲ್ಲಿ, ‘ಮಗನೇ ನಾವಿಲ್ಲಿ ಕ್ಷೇಮ. ಚೆನ್ನಾಗಿ ಓದು. ಪ್ರವಾಸಕ್ಕೆ ಹೊರಟಿರುವ ವಿಷಯ ನಿನ್ನ ಪತ್ರ ಓದಿದ ಮೇಲೆ ತಿಳಿಯಿತು. ಹಣ ಎಂ.ಓ ಮಾಡಿದ್ದೇನೆ. ಬಳಸಿಕೋ.. ’ ಎಂದು ಎರಡು ಸಾಲು ಬರೆದು, ಐದು ನೂರು ರೂಪಾಯಿ ನೋಟುಗಳನ್ನು ಎಣಿಸಿದ.
ಮಗ
ಅವನ ಅಪ್ಪ ಬಲು ಗಟ್ಟಿ. ಎಂಥಾ ಹಲ್ಲು ನೋವಿದ್ದರೂ, ಅದರ ಆಯಸ್ಸು ಮುಗಿದಿದ್ದರೂ ಕೀಳಲು ವೈದ್ಯರಿಗೆ ಅವಕಾಶ ನೀಡಿರಲಿಲ್ಲ. ನೋಡನೋಡುತ್ತಲೇ ಹಲ್ಲುಗಳು ಅಪ್ಪನ ಬಾಯನ್ನು ಖಾಲಿ ಮಾಡಿದವು. ಕೆಳದವಡೆಯಲ್ಲಿ ಒಂದೆರಡುಮೂರು... ಮೇಲ್ ದವಡೆಯಲ್ಲಿ ಒಂದೆರಡು -ಹೀಗೆ ಮೊಮ್ಮಗ ಸುಲಭವಾಗಿ ಅಪ್ಪನ ಹಲ್ಲನ್ನು ಎಣಿಸುತ್ತಿದ್ದ. ನನಗೆ ಆಗ ಒಳ್ಳೆ ಸಂಬಳವೇನೋ ಬರ್ತಾಯಿತ್ತು. ಆದರೆ ಖರ್ಚುಗಳು ಸಂಬಳವನ್ನು ತಿಂದು ತೇಗುತ್ತಿದ್ದವು.
ಅಪ್ಪ ಅಳಿದುಳಿದ ಹಲ್ಲಿನಲ್ಲಿಯೇ ತಿನ್ನುವುದನ್ನು ಕಲಿತಿದ್ದ. ಬೆರಳಲ್ಲಿಯೇ ಮೂಳೆ ಬಿಡಿಸಿ, ಮಾಂಸವನ್ನು ಚಪ್ಪರಿಸುತ್ತಿದ್ದ. ಕಡಲೆ ಬೀಜವನ್ನು ನುಣ್ಣಗೆ ಕುಟ್ಟಿಸಿಕೊಂಡು ತಿನ್ನುತ್ತಿದ್ದ. ಅವನಿಗೆ ಹಾಗೆ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯಾದರೂ ಏನಿತ್ತು? ಅಪ್ಪನಿಗೆ ಹಲ್ಲು ಕಟ್ಟಿಸಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆವಾಗ, ಇವಾಗ ಎಂದು ಅಂದುಕೊಳ್ಳುತ್ತಲೇ ಇದ್ದೆ. ಅಪ್ಪ ಅವಸರವಿದ್ದವನಂತೆ, ನಮ್ಮ ಹಂಗು ಯಾಕೆ ಎಂಬಂತೆ ಬೊಚ್ಚು ಬಾಯಲ್ಲಿಯೇ ಅಗಲಿದ.
ಈಗ ಅಮ್ಮನ ಹಲ್ಲುಗಳೂ ಸಡಿಲವಾಗಿವೆ. ಹಳೆ ಕೆಲಸದ ಪಿಎಫ್ ಹಣ ಬಂದ ಮೇಲೆ ಹಲ್ಲು ಕಟ್ಟಿಸಬೇಕು. ಅವಳಿಗೀಗೀಗ ಚಪಾತಿ ತಿನ್ನಲು ಸಹಾ ಕಷ್ಟವಾಗುತ್ತಿದೆ.
ಅಮ್ಮ
ಅವಳ ಪ್ರಪಂಚದಲ್ಲಿ ಗಂಡ-ಮಕ್ಕಳು ಬಿಟ್ಟರೆ ಬೇರೆಯವರಿಗೆ ಜಾಗವೇ ಇಲ್ಲ. ತೊಟ್ಟಿಲಲ್ಲಿದ್ದ ಮಗ ಹಠ ಮಾಡಿದರೆ, ಇವಳು ಹರಕೆ ಕಟ್ಟುತ್ತಿದ್ದಳು. ತಾನು ನಂಬಿದ್ದ, ಪ್ರತಿ ಶನಿವಾರ ಶ್ರದ್ಧಾ ಭಕ್ತಿಯಿಂದ ಓದುತ್ತಿದ್ದ ಶ್ರೀರಾಮನ ಪೂಜಾ ಮಹಾತ್ಮೆ ಪುಸ್ತಕವನ್ನು ಮಗನ ತಲೆ ಕೆಳಗಿಟ್ಟು, ‘ಶ್ರೀರಾಮಚಂದ್ರ ಕಾಪಾಡಪ್ಪಾ ’ ಅನ್ನುತ್ತಿದ್ದಳು. ಮನೆ, ಮಕ್ಕಳಿಗಾಗಿ ವಾರಕ್ಕೆರಡು ದಿನ ಊಟ ಬಿಟ್ಟಳು. ಮಗನ ಬಗ್ಗೆ ಮೇಷ್ಟ್ರುಗಳು ಒಳ್ಳೆ ಮಾತಾಡಿದಾಗ, ಆಕೆ ಮುಖ ಅರಳಿದ ತಾವರೆ.
ಊರಿನ ಸಾಧುವೊಬ್ಬ ನಿನ್ನ ಮಗ ನವೆಂಬರ್‌ನಲ್ಲಿ ಹುಟ್ಟಿದ್ದಾನೆ. ನವೆಂಬರ್‌ನಲ್ಲಿಯೇ ಕನ್ನಡ ರಾಜ್ಯೋತ್ಸವ, ನಿನ್ನ ಮಗ ಮುಂದೆ ಮಹಾತ್ಮ ಆಗುತ್ತಾನೆ ಎಂದು ಹೇಳಿದ್ದ. ಅಂದು ಆ ಸಾಧುವಿಗೆ ಹೊಟ್ಟೆ ತುಂಬ ಊಟ ಹಾಕಿದ್ದಳು. ಮಗ ನಕ್ಕಾಗ, ಅವಳೂ ನಗುತ್ತಿದ್ದಳು. ಮಗನಿಗೇನಾದರೂ ಗಾಯವಾದರೆ, ಅದರ ನೋವೆಲ್ಲವನ್ನೂ ತಾನೇ ಅನುಭವಿಸುತ್ತಿದ್ದಳು. ಅಂಥ ಅಮ್ಮನ ಕಣ್ಣಲ್ಲಿ ಒಂದು ದಿನ ನೀರು ಬಂತು. ಕಾರಣ; ಅಂದು ಮಗನ ಮದುವೆ ದಿನ! ಮದುವೆ ಎಲ್ಲಿ? ಯಾವಾಗ? ಈ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ!