Tuesday, August 21, 2007

ಗಂಡಂದಿರ ಗೋಳಿನ ಕತೆಗಳಿಗೆ ಇಲ್ಲವೇ ಕೊನೆ?


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ! ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


ಮೋಹನ್ ಮತ್ತು ಮಂಗಳಾ ಹೊಸ ದಂಪತಿಗಳು. ಮದುವೆಯಾಗಿ ಮೊನ್ನೆಗಷ್ಟೇ 9ತಿಂಗಳು ಪೂರ್ಣಗೊಂಡಿವೆ. ಪ್ರತಿರಾತ್ರಿಯೂ ಬೇರೆ ಮನೆ ಮಾಡಿ, ಇಲ್ಲಿ ನನಗೆ ಉಸಿರುಗಟ್ಟುತ್ತಿದೆ ಎಂದು ಮಂಗಳಾ ಹೇಳುತ್ತಲೇ ಇದ್ದಾಳೆ. ಮೋಹನ್ ಮನೆಗೆ ಹಿರಿಯ ಮಗ. ತಂಗಿ ಮದುವೆ, ತಮ್ಮನ ವಿದ್ಯಾಭ್ಯಾಸ, ಅಪ್ಪ ಅಮ್ಮನ ಆರೈಕೆ ಮತ್ತಿತರ ಜವಾಬ್ದಾರಿಗಳು ಅವನ ಮೇಲಿದೆ. ಈಗ ಮನೆಯಿಂದ ಕಾಲ್ ಕಿತ್ತರೆ ಚೆನ್ನಾಗಿರುವುದಿಲ್ಲ ಎಂಬ ತಿಳಿವಳಿಕೆ ಅವನಿಗಿದೆ. ಹೆಂಡತಿಗಾಗಿ ಹೆತ್ತವರ ಬಿಡಲು ಆತನಿಗೆ ಮನಸ್ಸಿಲ್ಲ.


ಮಂಗಳಾ ಹಟ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಹಬ್ಬಕ್ಕೆಂದು ತವರಿಗೆ ಹೋದವಳು, ಮತ್ತೆ ಗಂಡನ ಮನೆಗೆ ಬರಲೇ ಇಲ್ಲ. ಬಾ ಎಂದು ಗಂಡ ಕರೆದರೆ, ಬೇರೆ ಮನೆ ಮಾಡು ಎನ್ನುವ ಶರತ್ತು ಅವಳಿಂದ. ಕೊನೆಗೆ ಬೇಸತ್ತ ಮೋಹನ, ಬೇರೆ ಮನೆ ಮಾಡುವುದು ಅಸಾಧ್ಯ ಎಂದು ಘೋಷಿಸುತ್ತಾನೆ. ಆಗ ಮಂಗಳಾ ತನ್ನ ನಿಜ ಬಣ್ಣ ಪ್ರದರ್ಶಿಸುತ್ತಾಳೆ.ನಿಮ್ಮ ಜೊತೆಗೆ ನಿಮ್ಮ ಅಪ್ಪಅಮ್ಮನ ವಿರುದ್ಧವೂ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ವರದಕ್ಷಿಣೆಗಾಗಿ ನನ್ನನ್ನು ಹಿಂಸಿಸುತ್ತಿರುವುದಾಗಿ ಹೇಳುತ್ತೇನೆ ಎಂದು ಮಂಗಳಾ ಬ್ಲಾಕ್ ಮೇಲ್ ಶುರುಮಾಡುತ್ತಾಳೆ. ಮೋಹನ್ ಜಾಗದಲ್ಲಿ ನೀವಿದ್ದರೆ ಏನು ಮಾಡುವಿರಿ?


***


ಸೆಪ್ಟೆಂಬರ್ 11ರ ಘಟನೆಯಿಂದ ಪ್ರವೀಣ್ ಕಂಗೆಟ್ಟಿದ್ದಾನೆ. ಅಮೆರಿಕವೂ ಸಾಕು, ಅಲ್ಲಿನ ಕೆಲಸವೂ ಸಾಕು ಎಂದು ಅಡ್ಡಡ್ಡ ಕೈಮುಗಿದು, ತವರಿಗೆ ಮರಳಿದ್ದಾನೆ. ಭಾರತದಲ್ಲಿಯೇ ಏನಾದರೂ ಮಾಡುವ ಹಂಬಲ ಅವನದು. ಆದರೆ ಆತನ ಪತ್ನಿ ನಾಗಮಣಿಗೆ ಇದೆಲ್ಲವೂ ಇಷ್ಟವಿಲ್ಲ.


ಗಂಡ ಮತ್ತೆ ಅಮೆರಿಕಾಗೆ ಹೋಗಬೇಕು. ಡಾಲರ್ ಗಟ್ಟಲೇ ದುಡಿಯಬೇಕು. ಅವನು ಒಲ್ಲೆ ಎಂದ ತಕ್ಷಣ,ನಾಗಮಣಿ ಬುಸ್ ಬುಸ್ ಎನ್ನುತ್ತಾಳೆ. ವರದಕ್ಷಿಣೆ ಕೇಸಿನ ಪ್ರಸ್ತಾಪವಾಗುತ್ತದೆ.ಪ್ರವೀಣ್ ತನ್ನ ಹೆಂಡತಿಯ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ನಿಜಕ್ಕೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ನಾಗಮಣಿ ಪ್ರವೀಣ್ ವಿರುದ್ಧ ಸುಳ್ಳು ದೂರು ಸಲ್ಲಿಸುತ್ತಾಳೆ. ಕೋರ್ಟಲ್ಲಿ ಕೇಸು ನಡೆಯುತ್ತದೆ. ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿಕೊಳ್ಳಲು ಪ್ರವೀಣ ಪಡುವ ಕಷ್ಟ, ಆದ ಅವಮಾನಕ್ಕೆ ಯಾರು ಪರಿಹಾರ ನೀಡುತ್ತಾರೆ?


***


ಮೇಲಿನ ಎರಡು ಪ್ರಕರಣಗಳ ಓದಿದಾಗಲೇ, ನಿಮಗೆ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯ ದುರುಪಯೋಗ ಇಂದು ಹೆಚ್ಚುತ್ತಿದೆ. ಈ ಕಾಯ್ದೆ ಎಷ್ಟು ನ್ಯಾಯಪರವಾಗಿದೆ ? ಎಂಬ ಪ್ರಶ್ನೆ ಈದಿನಗಳಲ್ಲಿ ಪ್ರಸ್ತುತ.


ಈ ಕಾಯ್ದೆಯ ಅಡ್ಡಪರಿಣಾಮಗಳ ಬಗ್ಗೆ ಕಾನೂನು ಪಂಡಿತರು ಯೋಚಿಸಿಲ್ಲ. ನೊಂದು ಬೆಂದ ಹೆಂಗಳೆಯರ ರಕ್ಷಣೆಗಾಗಿ ರೂಪುಗೊಂಡ ವರದಕ್ಷಿಣೆ ಕಾಯ್ದೆ, ಇಂದು ಅನೇಕ ಅಮಾಯಕ ಪುರುಷರ ಪಾಲಿಗೆ ಸಿಂಹಸ್ವಪ್ನವಾಗಿದೆ. ಈ ಕಾಯ್ದೆಯನ್ನಿಟ್ಟುಕೊಂಡು ಕೆಲ ದುಷ್ಟ ಮಹಿಳೆಯರು ಶೋಷಿಸುತ್ತಿದ್ದಾರೆ. ದುರಂತವೆಂದರೆ ಪೋಷಕರು ಮತ್ತು ಕೆಲ ಮಹಿಳಾ ಪರ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗುತ್ತಿವೆ. ಸುಳ್ಳು ದೂರುಗಳಿಂದಾಗಿ ಅನೇಕ ಅಮಾಯಕರು ಮತ್ತು ಮುಕ್ತರು ಜೈಲು ಪಾಲಾಗಿದ್ದಾರೆ.


ನ್ಯಾಯಾಂಗದಲ್ಲಿನ ಯಾವ ಕಾನೂನು ಸಹಾ ಪುರುಷರ ರಕ್ಷಣೆಗೆ ಇಲ್ಲ. ಎಲ್ಲವೂ ಮಹಿಳೆಯರ ಪರವಾಗಿಯೇ ಇವೆ. ಮದುವೆಯಾದ ಪುರುಷರ ಗೌರವ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಒಂದು ಕಾಯ್ಯೆದೆಯನ್ನು ರೂಪಿಸುವಂತೆ ಆಗಾಗ ಕೆಲ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಮಾನವ ಹಕ್ಕುಗಳ ದಿನದಂದು ಇಂತಹ ಧ್ವನಿಗಳು ಹೆಚ್ಚು ಕೇಳಿ ಬರುತ್ತವೆ.


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ. ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


'ನಿಮ್ಮ ಹೆಂಡತಿ ನಿಮ್ಮನ್ನು ಶೋಷಿಸುತ್ತಾಳಾ? ಕೂಡಲೇ ಈ ಸಂಖ್ಯೆಗೆ ಕಾಲ್ ಮಾಡಿ' ಎನ್ನುವ ಫಲಕಗಳು ನವದೆಹಲಿಯ ಜನದಟ್ಟನೆ ಪ್ರದೇಶಗಳಲ್ಲಿ ಇಂದು ಕಾಣಿಸುತ್ತವೆ. ಈ ಫಲಕಗಳಲ್ಲಿ ಒಂದು ಮೊಬೈಲ್ ಸಂಖ್ಯೆ ಇರುತ್ತದೆ. ಆ ಮೊಬೈಲ್ ಸಂಖ್ಯೆಯ ವಕೀಲ, ಶೋಷಿತ ಗಂಡಂದಿರ ರಕ್ಷಣೆಗೆ ನಿಲ್ಲುವ ಭರವಸೆ ನೀಡುತ್ತಿದ್ದಾನೆ.


ಪುರುಷರ ಪರವಾಗಿ ದೆಹಲಿಯಲ್ಲಿ ಈಗ ಅನೇಕ ಸಂಘಟನೆಗಳು ತಲೆ ಎತ್ತಿವೆ. ಕೋಲ್ಕತಾದಲ್ಲಿ ಬ್ರದರ್ ಆರ್ಗನೈಸೇಸನ್ , ಈ ನಿಟ್ಟಿನಲ್ಲಿ ಗುರ್ತಿಸಿಕೊಂಡಿದೆ.


ಇದೆಲ್ಲ ಯಾಕೆ ?


ಈಗಿನ ಯುವತಿಯರು 'ನಾನು, ನನ್ನ ಗಂಡ, ನನ್ನ ಮಕ್ಕಳು' ಎಂದಷ್ಟೇ ಯೋಚಿಸುತ್ತಾರೆ. ಯೋಚನೆ ಅನುಷ್ಠಾನಕ್ಕೆ ಮುಂದಾದಾಗ, ವರದಕ್ಷಿಣೆ ಕಾನೂನು ಅವರಿಗೆ ಅಸ್ತ್ರವಾಗುತ್ತದೆ. ಮಗಳಿಗೆ ಬುದ್ಧಿ ಹೇಳಬೇಕಾದ ಅಪ್ಪ ಅಮ್ಮ, ತಮ್ಮ ಜವಾಬ್ದಾರಿ ಮರೆತು, ಮಗಳ ಬೆಂಬಲಕ್ಕೆ ನಿಲ್ಲುವ ಉದಾಹರಣೆಗಳೂ ಸಮಾಜದಲ್ಲಿವೆ.


ಹುಚ್ಚು ವರ್ತನೆ ಅಥವಾ ಯಾವುದೋ ಕಾರಣದಿಂದ ಮದುವೆಯಾದ ಹುಡುಗಿ ಆತ್ಮಹತ್ಯೆಗೆ ಶರಣಾದರೆ, ಅಳಿಯನ ಮೇಲೆ ಗೂಬೆ ಕೂರಿಸುವ ಅತ್ತೆ-ಮಾವಂದಿರ ಸಂಖ್ಯೆ ಕಡಿಮೆಯೇನಿಲ್ಲ.

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..


ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಹುಚ್ಚಾಟವೇ? ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಎಲ್ಲೆಡೆ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಕೇಳಿ ಸ್ನೇಹದ ಮಹಾತ್ಮೆ.


*ನಾವು ಪರೀಕ್ಷೆಗೆ ಹೊರಟಾಗ ಬೆಸ್ಟ್ ಆಫ್ ಲಕ್ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್ ಗೆ ಬಂದು, ಕಾಫಿ ಚೀಟಿ ಎಸೆಯುವವ ಆಪ್ತಮಿತ್ರ!

*ಏನಾದರೂ ಮಾಡಿ ನಾವು ಜೈಲು ಸೇರಿದಾಗ, ಜಾಮೀನು, ಕೋರ್ಟ್ ಎಂದು ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ!

ಮೇಲೆ ಪ್ರಸ್ತಾಪಿಸಿದಂತೆ ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ. ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಕೆಲವು ಸಲ ಹೌದಲ್ಲ ಅವ ಹೇಳಿದ್ದರಲ್ಲೂ ನಿಜಗಳಿವೆಯಲ್ಲ ಅನ್ನಿಸುತ್ತದೆ.

ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು. ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಗೆಳೆಯ. ಅಂತ ಒಬ್ಬ ಗೆಳೆಯ ಸಿಕ್ಕರೂ ಸಾಕು,ನೂರಾನೇ ಶಕ್ತಿ ಬರುತ್ತದೆ ಎಂಬುದು ಅವರ ವಾದ.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.
ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಎಂಎಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಎಂಎಸ್ ಗಳನ್ನಷ್ಟೇ Forward ಮಾಡುತ್ತಾರೆ. ಎಸ್ಎಂಎಸ್ ಸೇವೆ ಅವರ ಮೊಬೈಲ್ ನಲ್ಲಿ ಉಚಿತವಿದ್ದರೇ ಮಾತ್ರ. ಇಂಥವರನ್ನು ಎಸ್ಎಂಎಸ್ ಗೆಳೆಯರು ಎನ್ನಬಹುದು.

ನಾನು ಪದವಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ಮೊದಲ ಮಾತು :'ನಟೇಶ ನಿನ್ನಿಂದ ನನಗೊಂದು help ಆಗಬೇಕಿತ್ತಲ್ಲ..'ನಾನು ಇಲ್ಲ ಎಂದರೆ, ಫ್ರೆಂಡ್ ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು. ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯ ಜಗತ್ತಿನಲ್ಲಿ ಯಾರಿದ್ದಾನೆ ಹೇಳಿ. ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ಮಹಾತ್ಮರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ, ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ, ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ಪಾಲಿಸಿ ಮಿತ್ರ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ. ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, 'ನಾನು ಒಳ್ಳೆ ಗೆಳೆಯನೇ?' ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು. ಅದು ತಪ್ಪೇನಲ್ಲ ಬಿಡಿ..

ಸ್ನೇಹಕ್ಕೆ ಜೈ..

ಕೊನೆಯದಾಗಿ ಗೆಳೆತನಕ್ಕೆ ಸಂಬಂಧಿಸಿದ ಒಂದು ಎಸ್ಎಂಎಸ್ ಓದಿಕೊಳ್ಳಿ :

ಪ್ರೀತಿ ಎನ್ನುವುದು ಫ್ಯಾಷನ್
ಗೆಳೆತನ ಎಂಬುದು ಓಷನ್
ಫ್ಯಾಷನ್ ಬದಲಾಗುತ್ತದೆ
ಓಷನ್ ಎಂದೂ ಬದಲಾಗದು

Monday, August 20, 2007

ಈ ತರ್ಕವನ್ನು ಒಪ್ಪಿ, ನಿಮ್ಮ ಬಾಳಸಂಗಾತಿಗೂ ತಿಳಿಸಿ!


ಇದು ತಮಾಷೆಯಂತೆ ಕಂಡರೂ, ಬದುಕಿನ ಸತ್ಯವನ್ನು ಹೊಂದಿದೆ! ಮದುವೆ ಕನಸು ಕಂಡವರು, ಮದುವೆಗೆ ಸಿದ್ಧರಾದವರು, ಮದುವೆಯಾಗಿ ಸಂಸಾರ ನಡೆಸುತ್ತಿರುವ ಮಂದಿ, ಈ ಬಗ್ಗೆ ತಿಳಿದರೆ ಒಳ್ಳೆಯದು. ದಾಂಪತ್ಯ ಎನ್ನುವುದು ಹಾಲು ಜೇನು.

ಮದುವೆ ಸಂದರ್ಭದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಯಾಕೆ ಹಾಕುತ್ತಾರೆ? ಈ ಪ್ರಶ್ನೆಗೆ ವಿಚಿತ್ರಾನ್ನದ ಭಟ್ಟರು ಏನೇನೋ ತರ್ಕಗಳನ್ನು ಈ ಹಿಂದೆ ಮಂಡಿಸಿದ್ದರು. ಆ ವಿಚಾರಗಳನ್ನು ಬಿಟ್ಟು, ಎಲ್ಲರೂ ಒಪ್ಪುವಂತಹ ಮತ್ತು ಸಮಾಧಾನ ಹೊಂದುವಂತಹ ಕಾರಣವೊಂದನ್ನು ಎಲ್ಲೋ ಓದಿದ ನೆನಪು. ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಸತ್ಯವನ್ನು ಜಗತ್ತಿಗೆ ಸಾರಿದವರು ಚೈನಾದವರು.

ಮೊದಲಿಗೆ ಹೆಬ್ಬೆರಳು ನಮ್ಮ ಹೆತ್ತವರನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸೋಣ. ಎರಡನೇ ಬೆರಳು(ತೋರು ಬೆರಳು) ನಮ್ಮ ಜೊತೆ ಒಡಹುಟ್ಟಿದವರನ್ನು, ಮಧ್ಯದ ಬೆರಳು ನಮ್ಮನ್ನು, ನಾಲ್ಕನೇ ಬೆರಳು(ಉಂಗುರದ ಬೆರಳು) ಬಾಳ ಸಂಗಾತಿಯನ್ನು, ಕೊನೆಯದು ಅಂದರೆ ಕಿರುಬೆರಳು ನಮ್ಮ ಮಕ್ಕಳನ್ನು ಪ್ರತಿನಿಧಿಸುತ್ತದೆ ಎಂದು ಕಲ್ಪಿಸಿಕೊಳ್ಳೋಣ.

ಮೊದಲು ಎರಡೂ ಕೈಗಳನ್ನು ಎದುರುಬದುರು ಇಟ್ಟುಕೊಳ್ಳಿ. ಮಧ್ಯದ ಬೆರಳನ್ನು ಬಗ್ಗಿಸಿ. ಚಿತ್ರದಲ್ಲಿರುವಂತೆ ಉಳಿದ ಬೆರಳುಗಳನ್ನು ಜೋಡಿಸಿ.

ಈಗ ನೋಡಿ ತಮಾಷೆ ನೆಪದಲ್ಲಿನ ಆಸಲಿ ಸತ್ಯ ಹೊರಬೀಳುತ್ತದೆ. ಯಾವ ಬೆರಳನ್ನು ಕದಲಿಸದೇ, ನಿಮ್ಮ ಹೆಬ್ಬೆರಳುಗಳನ್ನು ಬೇರೆ ಮಾಡಿ. ಅದು ಸುಲಭ ಸಾಧ್ಯವಾಗುತ್ತದೆ. ಹೆಬ್ಬೆರಳನ್ನು ಹೆತ್ತವರು ಎಂದು ಭಾವಿಸಲಾಗಿದ್ದು, ಅಪ್ಪ ಅಥವಾ ಅಮ್ಮ ಕೊನೆ ತನಕ ನಮ್ಮ ಜೊತೆ ಇರುವುದಿಲ್ಲ ಎಂಬುದನ್ನು ಅರಿಯಬಹುದಾಗಿದೆ.

ಅದೇ ರೀತಿ ಎರಡನೇ ಬೆರಳನ್ನು ಅಗಲಿಸಿ. ಅದೂ ಸಾಧ್ಯ. ಸಹೋದರ ಅಥವಾ ಸಹೋದರಿ ಶಾಶ್ವತವಲ್ಲ. ಬೇರೆ ಬೇರೆ ಕಡೆ ವಾಸ ಮಾಡಬೇಕಾಗುತ್ತದೆ. ಅಗಲಿಕೆ ಸಹಜವಾದದ್ದೇ ಎಂಬ ಪಾಠ ನಮಗೆ ತಿಳಿಯುತ್ತದೆ.

ಅದೇ ರೀತಿ ಕಿರುಬೆರಳು(ಮಕ್ಕಳು)ಗಳ ಅಗಲಿಸಿ. ಯಾವುದೇ ಕಷ್ಟವಿಲ್ಲದೇ ಈ ಕೆಲಸ ಮಾಡಬಹುದು. ಮದುವೆ ಮತ್ತಿರ ಕಾರಣದಿಂದ ಮಕ್ಕಳು ನಮ್ಮಿಂದ ದೂರವಾಗುತ್ತಾರೆ ಅಲ್ಲವೇ ?

ಈಗ ಉಗುರದ ಬೆರಳುಗಳನ್ನು ಅಂದರೆ ನಿಮ್ಮ ಬಾಳಸಂಗಾತಿ ಎಂದು ಕಲ್ಪಿಸಲಾಗಿರುವ ಬೆರಳನ್ನು ದೂರ ಮಾಡಲು ಯತ್ನಿಸಿ. ಅದು ಅಸಾಧ್ಯ! ಅಂದರೆ ಅದು ಗಂಡ ಹೆಂಡತಿಯ ನಂಟನ್ನು ವಿವರಿಸುತ್ತದೆ. ಇಬ್ಬರೂ ಸುದೀರ್ಘ ಕಾಲ ಒಬ್ಬರ ಜೊತೆ ಇನ್ನೊಬ್ಬರು ಇರಲೇ ಬೇಕು. ಅಂಟಿಕೊಂಡು ಬದುಕಿದರೆ ಸ್ವರ್ಗ ಸುಖ ಎಂಬ ಸತ್ಯವನ್ನು ಬಿಂಬಿಸುತ್ತದೆ.


Friday, August 10, 2007

ಬರ್ತ್ ಡೇ ಖುಷಿಯಲ್ಲಿರೋ ಮಾಲಾಶ್ರೀ ಗಮನಕ್ಕೆ..


ಹುಟ್ಟೋ ಹೆಣ್ಣುಮಕ್ಕಳ ಹೆಸರಿಗೆ ಶ್ರೀಗಳು ಸೇರಿಕೊಳ್ಳುವಷ್ಟು ನಟಿ ಮಾಲಾಶ್ರೀ ಜನಪ್ರಿಯರಾಗಿದ್ದರು. ಇಂದು(ಆಗಸ್ಟ್ 10) ಅವರ ಹುಟ್ಟಿದ ದಿನ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ 'ದುರ್ಗಿ' ಈ ಮಾಲಾಶ್ರೀ. ರಾಣಿ ಮಹಾರಾಣಿಯಂತೆ ಮಿಂಚಿ, ಪ್ರೇಕ್ಷಕರ ಕನಸಿನ ರಾಣಿಯಾಗಿ ನಿದ್ದೆಗೆಡಿಸಿದ್ದು ಇದೇ ಮಾಲಾಶ್ರೀ. ಅದೆಲ್ಲಾ ಈಗ ಮಾಲಾಶ್ರೀ ಪಾಲಿಗೆ ಗತ ವೈಭವ! ಆದರೆ ಈಗಲೂ ಅವರ ಬಣ್ಣದ ಮೋಹ ಇಂಗಿಲ್ಲ. ಕಿರಣ್ ಬೇಡಿಯಾಗಿ ನಿಮ್ಮ ಮುಂದೆ ನಿಲ್ಲಲ್ಲಿದ್ದೇನೆ ಎಂದು ಪತ್ರಕರ್ತರ ಬಳಿ ಅವರು ಆಗಾಗ ಹೇಳುತ್ತಿರುತ್ತಾರೆ.

ನಂಜುಂಡಿ ಕಲ್ಯಾಣ ಚಿತ್ರದಿಂದ ಆರಂಭಗೊಂಡ ಮಾಲಾಶ್ರೀ ಅವರ ಚಿತ್ರಯಾತ್ರೆ, ಅನೇಕ ದಿಗ್ವಿಜಯಗಳ ಸಾಧಿಸಿದೆ. ಒಬ್ಬ ನಟನಿಗಿಂತಲೂ ಹೆಚ್ಚಿನ ಜನಪ್ರಿಯತೆ ಮತ್ತು ಶಕ್ತಿ ಅವರಿಗಿತ್ತು. ಹೀಗಾಗಿಯೇ ಒಂದು ಸಲ; 'ನನ್ನ ಜೊತೆ ನಾಯಿಮರಿ ಪಾತ್ರ ಮಾಡಿದರೂ ಚಿತ್ರ ನೂರು ದಿನ ಓಡುತ್ತೆ'ಎಂದು ಗರ್ವದಿಂದ ಮಾತನಾಡಿದ್ದರು.ಆ ಮಾತನ್ನು ಅವರು ದಕ್ಕಿಸಿಕೊಂಡಿದ್ದರು. ಆ ಮಾತು ಬಿಡಿ. ನಟನೆಯ ವಿಷಯಕ್ಕೆ ಬಂದರೆ, ಒಬ್ಬ ನಟಿಯಾಗಿ ಮಾಲಾಶ್ರೀ ಮಾಡಿದ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

ಗ್ಲಾಮರ್ ಪಾತ್ರಗಳಿಂದ ಹಿಡಿದು ಬಜಾರಿ ಪಾತ್ರದವರೆಗೆ, ಗಂಡುಬೀರಿಯಂತೆ ಬಡಿದಾಡುವ ಪಾತ್ರದವರೆಗೆ ಮಾಲಾಶ್ರೀ ಮಿಂಚಿದ್ದೇ ಮಿಂಚಿದ್ದು. ಆ ಮುಖಾಂತರ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ, ಅವರು ಇತಿಹಾಸ ನಿರ್ಮಾಣ ಮಾಡಿದವರು. ರಾಮಾಚಾರಿ, ಪೊಲೀಸನ ಹೆಂಡತಿ, ಸಿಬಿಐ ದುರ್ಗಾ, ಮಾಲಾಶ್ರೀ ಮಾಮಾಶ್ರೀ, ಎಸ್.ಪಿ.ಭಾರ್ಗವಿ, ಕಿತ್ತೂರಿನ ಹುಲಿ, ಬೆಳ್ಳಿ ಕಾಲುಂಗುರ ಚಿತ್ರಗಳು ಮಾಲಾಶ್ರೀ ಅಭಿನಯದ ಪ್ರಮುಖ ಚಿತ್ರಗಳು.

ಮಗಳು ಮತ್ತು ಗಂಡನ ಜೊತೆ ಸಂತೃಪ್ತ ಗೃಹಿಣಿಯಾಗಿ ಮಾಲಾಶ್ರೀ ಇಂದು ಆರಾಮವಾಗಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಪತಿ ದೇವರು ರಾಮುಗೆ ಸಹಕಾರ ನೀಡುತ್ತಿದ್ದಾರೆ. ಸೋಲಿನ ಮೇಲೆ ಸೋಲು ಕಂಡರೂ, ರಾಮು ಧೈರ್ಯ ಕುಂದಿಲ್ಲ. ಕಾರಣ ಅವರಿಂದೆ ಮಾಲಾಶ್ರೀ ಇದ್ದಾರೆ.

ತವರು ರಾಜ್ಯ ಆಂಧ್ರಪ್ರದೇಶವನ್ನು ಮರೆಯುವಷ್ಟು ಪ್ರೀತಿಯ ಹೊಳೆ ಹರಿಸಿದ ಕನ್ನಡ ಪ್ರೇಕ್ಷಕರಿಗೆ, ಮಾಲಾಶ್ರೀ ಏನಾದರೂ ಕೊಡಬೇಕು. ಅದು ಅವರ ಕರ್ತವ್ಯ. ಜೊತೆಗೆ ಋಣದ ಪ್ರಶ್ನೆ. ಮಚ್ಚು, ಕೊಚ್ಚು ಚಿತ್ರಗಳ ಜೊತೆಗೆ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ನೀಡುವತ್ತ ಮಾಲಾಶ್ರೀ ಯೋಚಿಸಲಿ.

ಹುಟ್ಟು ಹಬ್ಬದ ಶುಭಾಶಯ ದುರ್ಗಮ್ಮ.. ನೀನು ನೂರು ಕಾಲ ತಣ್ಣಗೆ ಬಾಳಮ್ಮ..

Wednesday, August 1, 2007

ಜಗತ್ತಿನಲ್ಲಿ ಯಾರನ್ನೂ ನಾ ಪ್ರೀತಿಸುವುದಿಲ್ಲ..


ನಾ ಯಾರನ್ನೂ ಪ್ರೀತಿಸುವುದಿಲ್ಲ..
ನನ್ನ ಪ್ರೀತಿ ಪಾತ್ರರೆಲ್ಲ ದೂರ ಬಹುದೂರ!
ಮತ್ತಷ್ಟು ಜನರ ಪ್ರೀತಿಸಿ
ನಾ ಬಾಣಲೆಯಿಂದ ಬೆಂಕಿಗೆ ಹಾರಲೇ?
ಕೊಟ್ಟಂತೆ ಕೊಟ್ಟು, ಮತ್ತೆ ಕಿತ್ತು ಕೊಳ್ಳುವ
ಅವನ ಆಟಕ್ಕೆ ನಾ ಜೋಕರ್ ಆಗಬೇಕೇ?

ಅದೊಂದು ದಿನ ನಾ ಊಹಿಸಿರಲಿಲ್ಲ..
ಶೂನ್ಯ ತುಂಬಿದ ಮನೆಗೆ ಬೆಳಕು ತಂದ
ನನ್ನ ಕಣ್ಣು ಹೊರೆಸಿದ.. ಹೆದರಬೇಡ
ನಾನಿದ್ದೇನೆ ಅಂದ. ಅಮ್ಮನಂತೆ ಮಡಿಲಿಗೆ
ಹಾಕಿಕೊಂಡು, ಜಗತ್ತು ಇಷ್ಟೇ ಅಲ್ಲ ಎಂದ
ಆಗ ನಮಗಿಂತ ಸುಖಿಗಳು ಇಲ್ಲ ಅನ್ನಿಸಿತು!

ಜಗತ್ತಿನ ಕಣ್ ಕುಕ್ಕುವಂತೆ ಊರು ಸುತ್ತಿದೆವು
ಮನಸ್ಸನ್ನು ಹಗುರ ಮಾಡಿಕೊಂಡೆವು
ರಸ್ತೆ ಬದಿ ನಿಂತು, ಕನಸ ಹಂಚಿಕೊಂಡೆವು
ನೆನಪುಗಳ ಹೆಕ್ಕಿ ತೆಗೆದು, ಸಂಭ್ರಮಿಸಿದೆವು
ಸಿಕ್ಕಿದ್ದನ್ನೆಲ್ಲ ತಿಂದು, ತೃಪ್ತಿಯಿಂದ ತೇಗಿದೆವು!
ಮಳೆಯಲ್ಲಿ ನೆಂದೆವು. ಬಿಸಿಲಲ್ಲಿ ಬೆಂದೆವು

ಯಾವುದೋ ಮುನಿಸು, ಯಾಕೋ ಕೋಪ
ಮಾತು ಇಲ್ಲವಾದಾಗ ಮೌನದಲ್ಲೂ ಮಾತು
ನಮ್ಮಿಬ್ಬರ ನಡುವಿನ ಸೇತುವೆ
ಯಾವ ಗಾಳಿ ಮಳೆಗೂ ಜಗ್ಗಲಿಲ್ಲ
ನಾ ಬೈದಾಗ ಆತ ಹೇಗೇಗೋ ನಗುತ್ತಿದ್ದ
ಆಗಾಗ ನೋವಾಗದಂತೆ ಕಾಲೆಳೆಯುತ್ತಿದ್ದ

ಅವನಂತಾಗಲು ನನಗೆ ಆಗಾಗ ಆಸೆ
ಹೇಳಲಾಗದ ಅಸೂಯೆ ಬೆರೆತ ಹೆಮ್ಮೆ
ಈ ಅಮಾಯಕನಿಗೆ ಜಗತ್ತೆಲ್ಲಿ
ಮೋಸಮಾಡುವುದೋ ಎಂಬ ದಿಗಿಲು
ಬೆತ್ತಲಾಗಲು ಇಬ್ಬರಲ್ಲೂ ಪೈಪೋಟಿ
ಆದರೂ ಏನೂ ಹೇಳಲಾಗದ ಅಸಹಾಯಕತೆ!

ನಾಲೆಯಿಂದ ನಾನು ಒಂಟಿ
ಯಾರ ಜೊತೆ ನಗಲಿ? ಯಾರೊಂದಿಗೆ
ಜಗಳ ಕಾಯಲಿ? ಅವನಿಗೆ ನನ್ನಂಥವರು
ಸಿಗಬಹುದು! ನನಗ್ಯಾರು ಸಿಗುತ್ತಾರೆ?
ಜಗದ ಸಂತೆಯಲ್ಲಿ ನಾ ಮತ್ತೆ ಒಂಟಿ.
ಧೈರ್ಯ ಸಾಲದು ಮತ್ತೆ ಜಂಟಿಯಾಗಲು

ಜಗತ್ತಿನ ನಿಯಮವೇ ವಿಚಿತ್ರ
ಬೇಕು ಎಂದದ್ದು ಸಿಕ್ಕಿದರೆ ಅವನಿಗೆಲ್ಲಿಯ
ಗೌರವ? ಭೂಮಿ ಗುಂಡಗಿದೆ
ಮತ್ತೆ ಸಿಗೋಣ.. ಸಿಕ್ಕಾಗ ಕೂತು
ಜಗತ್ತಿಗೆ ಗೋಲಿ ಹೊಡೆಯೋಣ..
ಹೋಗಿ ಬಾ ಗೆಳೆಯ... ಬದುಕು ಬಂಗಾರವಾಗಲಿ..