Tuesday, August 21, 2007

ಗಂಡಂದಿರ ಗೋಳಿನ ಕತೆಗಳಿಗೆ ಇಲ್ಲವೇ ಕೊನೆ?


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ! ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


ಮೋಹನ್ ಮತ್ತು ಮಂಗಳಾ ಹೊಸ ದಂಪತಿಗಳು. ಮದುವೆಯಾಗಿ ಮೊನ್ನೆಗಷ್ಟೇ 9ತಿಂಗಳು ಪೂರ್ಣಗೊಂಡಿವೆ. ಪ್ರತಿರಾತ್ರಿಯೂ ಬೇರೆ ಮನೆ ಮಾಡಿ, ಇಲ್ಲಿ ನನಗೆ ಉಸಿರುಗಟ್ಟುತ್ತಿದೆ ಎಂದು ಮಂಗಳಾ ಹೇಳುತ್ತಲೇ ಇದ್ದಾಳೆ. ಮೋಹನ್ ಮನೆಗೆ ಹಿರಿಯ ಮಗ. ತಂಗಿ ಮದುವೆ, ತಮ್ಮನ ವಿದ್ಯಾಭ್ಯಾಸ, ಅಪ್ಪ ಅಮ್ಮನ ಆರೈಕೆ ಮತ್ತಿತರ ಜವಾಬ್ದಾರಿಗಳು ಅವನ ಮೇಲಿದೆ. ಈಗ ಮನೆಯಿಂದ ಕಾಲ್ ಕಿತ್ತರೆ ಚೆನ್ನಾಗಿರುವುದಿಲ್ಲ ಎಂಬ ತಿಳಿವಳಿಕೆ ಅವನಿಗಿದೆ. ಹೆಂಡತಿಗಾಗಿ ಹೆತ್ತವರ ಬಿಡಲು ಆತನಿಗೆ ಮನಸ್ಸಿಲ್ಲ.


ಮಂಗಳಾ ಹಟ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಹಬ್ಬಕ್ಕೆಂದು ತವರಿಗೆ ಹೋದವಳು, ಮತ್ತೆ ಗಂಡನ ಮನೆಗೆ ಬರಲೇ ಇಲ್ಲ. ಬಾ ಎಂದು ಗಂಡ ಕರೆದರೆ, ಬೇರೆ ಮನೆ ಮಾಡು ಎನ್ನುವ ಶರತ್ತು ಅವಳಿಂದ. ಕೊನೆಗೆ ಬೇಸತ್ತ ಮೋಹನ, ಬೇರೆ ಮನೆ ಮಾಡುವುದು ಅಸಾಧ್ಯ ಎಂದು ಘೋಷಿಸುತ್ತಾನೆ. ಆಗ ಮಂಗಳಾ ತನ್ನ ನಿಜ ಬಣ್ಣ ಪ್ರದರ್ಶಿಸುತ್ತಾಳೆ.ನಿಮ್ಮ ಜೊತೆಗೆ ನಿಮ್ಮ ಅಪ್ಪಅಮ್ಮನ ವಿರುದ್ಧವೂ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ವರದಕ್ಷಿಣೆಗಾಗಿ ನನ್ನನ್ನು ಹಿಂಸಿಸುತ್ತಿರುವುದಾಗಿ ಹೇಳುತ್ತೇನೆ ಎಂದು ಮಂಗಳಾ ಬ್ಲಾಕ್ ಮೇಲ್ ಶುರುಮಾಡುತ್ತಾಳೆ. ಮೋಹನ್ ಜಾಗದಲ್ಲಿ ನೀವಿದ್ದರೆ ಏನು ಮಾಡುವಿರಿ?


***


ಸೆಪ್ಟೆಂಬರ್ 11ರ ಘಟನೆಯಿಂದ ಪ್ರವೀಣ್ ಕಂಗೆಟ್ಟಿದ್ದಾನೆ. ಅಮೆರಿಕವೂ ಸಾಕು, ಅಲ್ಲಿನ ಕೆಲಸವೂ ಸಾಕು ಎಂದು ಅಡ್ಡಡ್ಡ ಕೈಮುಗಿದು, ತವರಿಗೆ ಮರಳಿದ್ದಾನೆ. ಭಾರತದಲ್ಲಿಯೇ ಏನಾದರೂ ಮಾಡುವ ಹಂಬಲ ಅವನದು. ಆದರೆ ಆತನ ಪತ್ನಿ ನಾಗಮಣಿಗೆ ಇದೆಲ್ಲವೂ ಇಷ್ಟವಿಲ್ಲ.


ಗಂಡ ಮತ್ತೆ ಅಮೆರಿಕಾಗೆ ಹೋಗಬೇಕು. ಡಾಲರ್ ಗಟ್ಟಲೇ ದುಡಿಯಬೇಕು. ಅವನು ಒಲ್ಲೆ ಎಂದ ತಕ್ಷಣ,ನಾಗಮಣಿ ಬುಸ್ ಬುಸ್ ಎನ್ನುತ್ತಾಳೆ. ವರದಕ್ಷಿಣೆ ಕೇಸಿನ ಪ್ರಸ್ತಾಪವಾಗುತ್ತದೆ.ಪ್ರವೀಣ್ ತನ್ನ ಹೆಂಡತಿಯ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ನಿಜಕ್ಕೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ನಾಗಮಣಿ ಪ್ರವೀಣ್ ವಿರುದ್ಧ ಸುಳ್ಳು ದೂರು ಸಲ್ಲಿಸುತ್ತಾಳೆ. ಕೋರ್ಟಲ್ಲಿ ಕೇಸು ನಡೆಯುತ್ತದೆ. ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿಕೊಳ್ಳಲು ಪ್ರವೀಣ ಪಡುವ ಕಷ್ಟ, ಆದ ಅವಮಾನಕ್ಕೆ ಯಾರು ಪರಿಹಾರ ನೀಡುತ್ತಾರೆ?


***


ಮೇಲಿನ ಎರಡು ಪ್ರಕರಣಗಳ ಓದಿದಾಗಲೇ, ನಿಮಗೆ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯ ದುರುಪಯೋಗ ಇಂದು ಹೆಚ್ಚುತ್ತಿದೆ. ಈ ಕಾಯ್ದೆ ಎಷ್ಟು ನ್ಯಾಯಪರವಾಗಿದೆ ? ಎಂಬ ಪ್ರಶ್ನೆ ಈದಿನಗಳಲ್ಲಿ ಪ್ರಸ್ತುತ.


ಈ ಕಾಯ್ದೆಯ ಅಡ್ಡಪರಿಣಾಮಗಳ ಬಗ್ಗೆ ಕಾನೂನು ಪಂಡಿತರು ಯೋಚಿಸಿಲ್ಲ. ನೊಂದು ಬೆಂದ ಹೆಂಗಳೆಯರ ರಕ್ಷಣೆಗಾಗಿ ರೂಪುಗೊಂಡ ವರದಕ್ಷಿಣೆ ಕಾಯ್ದೆ, ಇಂದು ಅನೇಕ ಅಮಾಯಕ ಪುರುಷರ ಪಾಲಿಗೆ ಸಿಂಹಸ್ವಪ್ನವಾಗಿದೆ. ಈ ಕಾಯ್ದೆಯನ್ನಿಟ್ಟುಕೊಂಡು ಕೆಲ ದುಷ್ಟ ಮಹಿಳೆಯರು ಶೋಷಿಸುತ್ತಿದ್ದಾರೆ. ದುರಂತವೆಂದರೆ ಪೋಷಕರು ಮತ್ತು ಕೆಲ ಮಹಿಳಾ ಪರ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗುತ್ತಿವೆ. ಸುಳ್ಳು ದೂರುಗಳಿಂದಾಗಿ ಅನೇಕ ಅಮಾಯಕರು ಮತ್ತು ಮುಕ್ತರು ಜೈಲು ಪಾಲಾಗಿದ್ದಾರೆ.


ನ್ಯಾಯಾಂಗದಲ್ಲಿನ ಯಾವ ಕಾನೂನು ಸಹಾ ಪುರುಷರ ರಕ್ಷಣೆಗೆ ಇಲ್ಲ. ಎಲ್ಲವೂ ಮಹಿಳೆಯರ ಪರವಾಗಿಯೇ ಇವೆ. ಮದುವೆಯಾದ ಪುರುಷರ ಗೌರವ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಒಂದು ಕಾಯ್ಯೆದೆಯನ್ನು ರೂಪಿಸುವಂತೆ ಆಗಾಗ ಕೆಲ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಮಾನವ ಹಕ್ಕುಗಳ ದಿನದಂದು ಇಂತಹ ಧ್ವನಿಗಳು ಹೆಚ್ಚು ಕೇಳಿ ಬರುತ್ತವೆ.


ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ. ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.


'ನಿಮ್ಮ ಹೆಂಡತಿ ನಿಮ್ಮನ್ನು ಶೋಷಿಸುತ್ತಾಳಾ? ಕೂಡಲೇ ಈ ಸಂಖ್ಯೆಗೆ ಕಾಲ್ ಮಾಡಿ' ಎನ್ನುವ ಫಲಕಗಳು ನವದೆಹಲಿಯ ಜನದಟ್ಟನೆ ಪ್ರದೇಶಗಳಲ್ಲಿ ಇಂದು ಕಾಣಿಸುತ್ತವೆ. ಈ ಫಲಕಗಳಲ್ಲಿ ಒಂದು ಮೊಬೈಲ್ ಸಂಖ್ಯೆ ಇರುತ್ತದೆ. ಆ ಮೊಬೈಲ್ ಸಂಖ್ಯೆಯ ವಕೀಲ, ಶೋಷಿತ ಗಂಡಂದಿರ ರಕ್ಷಣೆಗೆ ನಿಲ್ಲುವ ಭರವಸೆ ನೀಡುತ್ತಿದ್ದಾನೆ.


ಪುರುಷರ ಪರವಾಗಿ ದೆಹಲಿಯಲ್ಲಿ ಈಗ ಅನೇಕ ಸಂಘಟನೆಗಳು ತಲೆ ಎತ್ತಿವೆ. ಕೋಲ್ಕತಾದಲ್ಲಿ ಬ್ರದರ್ ಆರ್ಗನೈಸೇಸನ್ , ಈ ನಿಟ್ಟಿನಲ್ಲಿ ಗುರ್ತಿಸಿಕೊಂಡಿದೆ.


ಇದೆಲ್ಲ ಯಾಕೆ ?


ಈಗಿನ ಯುವತಿಯರು 'ನಾನು, ನನ್ನ ಗಂಡ, ನನ್ನ ಮಕ್ಕಳು' ಎಂದಷ್ಟೇ ಯೋಚಿಸುತ್ತಾರೆ. ಯೋಚನೆ ಅನುಷ್ಠಾನಕ್ಕೆ ಮುಂದಾದಾಗ, ವರದಕ್ಷಿಣೆ ಕಾನೂನು ಅವರಿಗೆ ಅಸ್ತ್ರವಾಗುತ್ತದೆ. ಮಗಳಿಗೆ ಬುದ್ಧಿ ಹೇಳಬೇಕಾದ ಅಪ್ಪ ಅಮ್ಮ, ತಮ್ಮ ಜವಾಬ್ದಾರಿ ಮರೆತು, ಮಗಳ ಬೆಂಬಲಕ್ಕೆ ನಿಲ್ಲುವ ಉದಾಹರಣೆಗಳೂ ಸಮಾಜದಲ್ಲಿವೆ.


ಹುಚ್ಚು ವರ್ತನೆ ಅಥವಾ ಯಾವುದೋ ಕಾರಣದಿಂದ ಮದುವೆಯಾದ ಹುಡುಗಿ ಆತ್ಮಹತ್ಯೆಗೆ ಶರಣಾದರೆ, ಅಳಿಯನ ಮೇಲೆ ಗೂಬೆ ಕೂರಿಸುವ ಅತ್ತೆ-ಮಾವಂದಿರ ಸಂಖ್ಯೆ ಕಡಿಮೆಯೇನಿಲ್ಲ.

No comments: