Monday, August 20, 2007

ಈ ತರ್ಕವನ್ನು ಒಪ್ಪಿ, ನಿಮ್ಮ ಬಾಳಸಂಗಾತಿಗೂ ತಿಳಿಸಿ!


ಇದು ತಮಾಷೆಯಂತೆ ಕಂಡರೂ, ಬದುಕಿನ ಸತ್ಯವನ್ನು ಹೊಂದಿದೆ! ಮದುವೆ ಕನಸು ಕಂಡವರು, ಮದುವೆಗೆ ಸಿದ್ಧರಾದವರು, ಮದುವೆಯಾಗಿ ಸಂಸಾರ ನಡೆಸುತ್ತಿರುವ ಮಂದಿ, ಈ ಬಗ್ಗೆ ತಿಳಿದರೆ ಒಳ್ಳೆಯದು. ದಾಂಪತ್ಯ ಎನ್ನುವುದು ಹಾಲು ಜೇನು.

ಮದುವೆ ಸಂದರ್ಭದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಯಾಕೆ ಹಾಕುತ್ತಾರೆ? ಈ ಪ್ರಶ್ನೆಗೆ ವಿಚಿತ್ರಾನ್ನದ ಭಟ್ಟರು ಏನೇನೋ ತರ್ಕಗಳನ್ನು ಈ ಹಿಂದೆ ಮಂಡಿಸಿದ್ದರು. ಆ ವಿಚಾರಗಳನ್ನು ಬಿಟ್ಟು, ಎಲ್ಲರೂ ಒಪ್ಪುವಂತಹ ಮತ್ತು ಸಮಾಧಾನ ಹೊಂದುವಂತಹ ಕಾರಣವೊಂದನ್ನು ಎಲ್ಲೋ ಓದಿದ ನೆನಪು. ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಸತ್ಯವನ್ನು ಜಗತ್ತಿಗೆ ಸಾರಿದವರು ಚೈನಾದವರು.

ಮೊದಲಿಗೆ ಹೆಬ್ಬೆರಳು ನಮ್ಮ ಹೆತ್ತವರನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸೋಣ. ಎರಡನೇ ಬೆರಳು(ತೋರು ಬೆರಳು) ನಮ್ಮ ಜೊತೆ ಒಡಹುಟ್ಟಿದವರನ್ನು, ಮಧ್ಯದ ಬೆರಳು ನಮ್ಮನ್ನು, ನಾಲ್ಕನೇ ಬೆರಳು(ಉಂಗುರದ ಬೆರಳು) ಬಾಳ ಸಂಗಾತಿಯನ್ನು, ಕೊನೆಯದು ಅಂದರೆ ಕಿರುಬೆರಳು ನಮ್ಮ ಮಕ್ಕಳನ್ನು ಪ್ರತಿನಿಧಿಸುತ್ತದೆ ಎಂದು ಕಲ್ಪಿಸಿಕೊಳ್ಳೋಣ.

ಮೊದಲು ಎರಡೂ ಕೈಗಳನ್ನು ಎದುರುಬದುರು ಇಟ್ಟುಕೊಳ್ಳಿ. ಮಧ್ಯದ ಬೆರಳನ್ನು ಬಗ್ಗಿಸಿ. ಚಿತ್ರದಲ್ಲಿರುವಂತೆ ಉಳಿದ ಬೆರಳುಗಳನ್ನು ಜೋಡಿಸಿ.

ಈಗ ನೋಡಿ ತಮಾಷೆ ನೆಪದಲ್ಲಿನ ಆಸಲಿ ಸತ್ಯ ಹೊರಬೀಳುತ್ತದೆ. ಯಾವ ಬೆರಳನ್ನು ಕದಲಿಸದೇ, ನಿಮ್ಮ ಹೆಬ್ಬೆರಳುಗಳನ್ನು ಬೇರೆ ಮಾಡಿ. ಅದು ಸುಲಭ ಸಾಧ್ಯವಾಗುತ್ತದೆ. ಹೆಬ್ಬೆರಳನ್ನು ಹೆತ್ತವರು ಎಂದು ಭಾವಿಸಲಾಗಿದ್ದು, ಅಪ್ಪ ಅಥವಾ ಅಮ್ಮ ಕೊನೆ ತನಕ ನಮ್ಮ ಜೊತೆ ಇರುವುದಿಲ್ಲ ಎಂಬುದನ್ನು ಅರಿಯಬಹುದಾಗಿದೆ.

ಅದೇ ರೀತಿ ಎರಡನೇ ಬೆರಳನ್ನು ಅಗಲಿಸಿ. ಅದೂ ಸಾಧ್ಯ. ಸಹೋದರ ಅಥವಾ ಸಹೋದರಿ ಶಾಶ್ವತವಲ್ಲ. ಬೇರೆ ಬೇರೆ ಕಡೆ ವಾಸ ಮಾಡಬೇಕಾಗುತ್ತದೆ. ಅಗಲಿಕೆ ಸಹಜವಾದದ್ದೇ ಎಂಬ ಪಾಠ ನಮಗೆ ತಿಳಿಯುತ್ತದೆ.

ಅದೇ ರೀತಿ ಕಿರುಬೆರಳು(ಮಕ್ಕಳು)ಗಳ ಅಗಲಿಸಿ. ಯಾವುದೇ ಕಷ್ಟವಿಲ್ಲದೇ ಈ ಕೆಲಸ ಮಾಡಬಹುದು. ಮದುವೆ ಮತ್ತಿರ ಕಾರಣದಿಂದ ಮಕ್ಕಳು ನಮ್ಮಿಂದ ದೂರವಾಗುತ್ತಾರೆ ಅಲ್ಲವೇ ?

ಈಗ ಉಗುರದ ಬೆರಳುಗಳನ್ನು ಅಂದರೆ ನಿಮ್ಮ ಬಾಳಸಂಗಾತಿ ಎಂದು ಕಲ್ಪಿಸಲಾಗಿರುವ ಬೆರಳನ್ನು ದೂರ ಮಾಡಲು ಯತ್ನಿಸಿ. ಅದು ಅಸಾಧ್ಯ! ಅಂದರೆ ಅದು ಗಂಡ ಹೆಂಡತಿಯ ನಂಟನ್ನು ವಿವರಿಸುತ್ತದೆ. ಇಬ್ಬರೂ ಸುದೀರ್ಘ ಕಾಲ ಒಬ್ಬರ ಜೊತೆ ಇನ್ನೊಬ್ಬರು ಇರಲೇ ಬೇಕು. ಅಂಟಿಕೊಂಡು ಬದುಕಿದರೆ ಸ್ವರ್ಗ ಸುಖ ಎಂಬ ಸತ್ಯವನ್ನು ಬಿಂಬಿಸುತ್ತದೆ.


No comments: