Tuesday, August 21, 2007

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..


ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಹುಚ್ಚಾಟವೇ? ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಎಲ್ಲೆಡೆ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಕೇಳಿ ಸ್ನೇಹದ ಮಹಾತ್ಮೆ.


*ನಾವು ಪರೀಕ್ಷೆಗೆ ಹೊರಟಾಗ ಬೆಸ್ಟ್ ಆಫ್ ಲಕ್ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್ ಗೆ ಬಂದು, ಕಾಫಿ ಚೀಟಿ ಎಸೆಯುವವ ಆಪ್ತಮಿತ್ರ!

*ಏನಾದರೂ ಮಾಡಿ ನಾವು ಜೈಲು ಸೇರಿದಾಗ, ಜಾಮೀನು, ಕೋರ್ಟ್ ಎಂದು ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ!

ಮೇಲೆ ಪ್ರಸ್ತಾಪಿಸಿದಂತೆ ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ. ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಕೆಲವು ಸಲ ಹೌದಲ್ಲ ಅವ ಹೇಳಿದ್ದರಲ್ಲೂ ನಿಜಗಳಿವೆಯಲ್ಲ ಅನ್ನಿಸುತ್ತದೆ.

ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?

ನಮ್ಮ ತಂದೆ ಹೇಳುತ್ತಿದ್ದರು. ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಗೆಳೆಯ. ಅಂತ ಒಬ್ಬ ಗೆಳೆಯ ಸಿಕ್ಕರೂ ಸಾಕು,ನೂರಾನೇ ಶಕ್ತಿ ಬರುತ್ತದೆ ಎಂಬುದು ಅವರ ವಾದ.

ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.
ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಎಂಎಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಎಂಎಸ್ ಗಳನ್ನಷ್ಟೇ Forward ಮಾಡುತ್ತಾರೆ. ಎಸ್ಎಂಎಸ್ ಸೇವೆ ಅವರ ಮೊಬೈಲ್ ನಲ್ಲಿ ಉಚಿತವಿದ್ದರೇ ಮಾತ್ರ. ಇಂಥವರನ್ನು ಎಸ್ಎಂಎಸ್ ಗೆಳೆಯರು ಎನ್ನಬಹುದು.

ನಾನು ಪದವಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ಮೊದಲ ಮಾತು :'ನಟೇಶ ನಿನ್ನಿಂದ ನನಗೊಂದು help ಆಗಬೇಕಿತ್ತಲ್ಲ..'ನಾನು ಇಲ್ಲ ಎಂದರೆ, ಫ್ರೆಂಡ್ ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ.

ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು. ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯ ಜಗತ್ತಿನಲ್ಲಿ ಯಾರಿದ್ದಾನೆ ಹೇಳಿ. ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ಮಹಾತ್ಮರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ, ಔಷಧಿಯಿಲ್ಲ.

ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ, ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ಪಾಲಿಸಿ ಮಿತ್ರ ಅನ್ನೋಣವೇ?

ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ.

ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ. ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, 'ನಾನು ಒಳ್ಳೆ ಗೆಳೆಯನೇ?' ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು. ಅದು ತಪ್ಪೇನಲ್ಲ ಬಿಡಿ..

ಸ್ನೇಹಕ್ಕೆ ಜೈ..

ಕೊನೆಯದಾಗಿ ಗೆಳೆತನಕ್ಕೆ ಸಂಬಂಧಿಸಿದ ಒಂದು ಎಸ್ಎಂಎಸ್ ಓದಿಕೊಳ್ಳಿ :

ಪ್ರೀತಿ ಎನ್ನುವುದು ಫ್ಯಾಷನ್
ಗೆಳೆತನ ಎಂಬುದು ಓಷನ್
ಫ್ಯಾಷನ್ ಬದಲಾಗುತ್ತದೆ
ಓಷನ್ ಎಂದೂ ಬದಲಾಗದು

1 comment:

suni said...

ಪರವಾಗಿಲ್ಲ ಚನ್ನಾಗಿದೆ