Sunday, May 18, 2008

ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ?

ನಿನ್ನನ್ನು ಬಿಟ್ಟಿರಲಾರೆ. ಏನೋ ಸೆಳೆತ, ಎಂಥದ್ದೋ ಮೋಹ? ಮೊದಲು ನಾನು ಹೀಗಿರಲಿಲ್ಲ.. ನಿನ್ನ ಸಹವಾಸ ಮಾಡಿದ ಮೇಲೆ ಹೀಗಾದೆ! ಎಲ್ಲರೂ ಹೇಳುವಂತೆ ಕೆಟ್ಟು ಗ್ಯಾರೇಜು ಸೇರಿದೆ. ನಾನಂತೂ ಹಾಗೆ ಭಾವಿಸಿಲ್ಲ. ನೀನು ನನ್ನವಳಾದ ಮೇಲೆ, ಹೊಸ ಲೋಕ ನನ್ನದಾಯಿತು. ಇನ್ನಷ್ಟು ಬೆಳೆದಿದ್ದೇನೆಂಬ ಭಾವ ಮೈಮನಗಳ ಸುಳಿಯಲ್ಲಿ.
ಒಂದು ಕ್ಷಣ ನೀ ದೂರವಾದರೂ ತಲೆ ಗಿರ್ರೆನ್ನುತ್ತೆ. ನಿನ್ನ ಬಗ್ಗೆ ನನಗೆ ಮೊದಲಿಂದಲೂ ಕೆಟ್ಟ ಕುತೂಹಲ. ಮನೆಯಲ್ಲಿ ಯಾರು ಏನನ್ನುತ್ತಾರೋ ಎಂಬ ಅಳುಕಿನಿಂದ ನಿನ್ನನ್ನು ದೂರದಿಂದಲೇ ನೋಡಿ ಸುಮ್ಮನಾಗುತ್ತಿದ್ದೆ. ನಿನಗೆ ತಿಳಿದಿರಲಿಕ್ಕಿಲ್ಲ, ಸಮಯ ಸಿಕ್ಕಾಗಲೆಲ್ಲ ನಾನು ನಿನ್ನ ಬೆನ್ನು ಸವರುತ್ತಿದ್ದೆ. ತೊಡೆ ಚಿವುಟುತ್ತಿದ್ದೆ. ಗಲ್ಲ ಹಿಡಿದು ಏನೇ ಸುಂದರಿ ಎನ್ನುತ್ತಿದ್ದೆ. ನೀನು ನನ್ನನ್ನು ಗುರುತಿಸಿರಲಿಕ್ಕಿಲ್ಲ.
ಶ್ವೇತವರ್ಣೆಯಾದ ನೀನು ಈ ಕರಿಯನಿಗೆ ಸ್ವಂತವಾದ ಆ ದಿನ ಚೆನ್ನಾಗಿ ನೆನಪಿದೆ. ಗೆಳೆಯರ ಬಳಗದ ಮಧ್ಯೆ ನನ್ನ ಪುರುಷತ್ವ ಪರೀಕ್ಷೆಗೊಳಗಾದ ಅಗ್ನಿ ಪರೀಕ್ಷೆಯ ಸಂದರ್ಭವದು! ನಿನ್ನೊಳಗೆ ಒಂದಾಗದ ಹೊರತು, ಅಂದು ಅನ್ಯಮಾರ್ಗವಿರಲಿಲ್ಲ. ಮೊದಲ ಮಿಲನ ಮಹೋತ್ಸವಕ್ಕೆ ಗೆಳೆಯರು ಹುರಿದುಂಬಿಸಿದರು. ಲಿಮಿಟ್ಟುಗಳ ಮೀರುವುದರಲ್ಲೇ ಮುದವಿದೆ, ಗೆಲುವಿದೆ ಎಂದು ನನಗ್ಯಾಕೋ ಅನ್ನಿಸಿತ್ತು.
ಮೊದಲ ಸ್ಪರ್ಶಕ್ಕೇ ನಾ ನಿಜಕ್ಕೂ ಸೋತೆ. ಮುಖದ ಮೇಲೆ ಮೀಸೆ ಚಿಗುರುತ್ತಿವೆ ಎಂದು ಅನಿಸಿದ್ದು, ಆಗಲೇ.
ಆ ಪ್ರಥಮ ಚುಂಬನ ಹಿತಕರವಾಗೇನೂ ಇರಲಿಲ್ಲ. ಪುಣ್ಯಕ್ಕೆ ಹಲ್ಲು ಬೀಳಲಿಲ್ಲ ಅಷ್ಟೆ! ನಿನ್ನ ಸಂಗ, ಬಿಸಿಯುಸಿರಿನ ಹಸಿಬಿಸಿ ಅಪ್ಪುಗೆ ಮೊದಮೊದಲು ಕಷ್ಟವಾಯಿತು. ನಿನ್ನಿಂದ ಬಿಡುಗಡೆ ಪಡೆದಾಗ ಮುಖದ ಮೇಲೆ ಬೆವರ ಹನಿಗಳ ಮುತ್ತಿನ ಮಾಲೆ. ಬರ್ತಾಬರ್ತಾ ನಿನ್ನ ಸಂಗ ಇಷ್ಟವಾಯಿತು. ನನ್ನ ಎದೆಗೂಡಲ್ಲಿ ನಿನಗೆ ಜಾಗ ಕೊಟ್ಟೆ(ನಾ ಕೊಡುವುದೇನು? ನೀನೇ ಬಂದು ಕೂತೆ! ) ‘ನೀನಿಲ್ಲದೇ ನನಗೇನಿದೆ.. ನಿನ್ನಲ್ಲೇ ಈ ಜೀವ ಒಂದಾಗಿದೆ ’ ಎಂಬ ಸಾಲುಗಳನ್ನು ನಮ್ಮಿಬ್ಬರ ಕಂಡೇ ಬರೆದಿರಬೇಕು!
ನಿದ್ದೆ ಬಾರದ ರಾತ್ರಿಯಲ್ಲಿ ನೀನು ನೆನಪಾಗುವೆ. ಆದರೆ ಏನು ಮಾಡಲಿ? ನೀನಿಲ್ಲದ ಹೊತ್ತು, ಗಡಿಯಾರ ಮುಂದಕ್ಕೆ ಹೋಗುವುದೇ ಇಲ್ಲ. ಬೆಳಕಿನ ಸುರುಸುರು ಬತ್ತಿಗಳ ಹಿಡಿದು ಭೂಮಿಗಿಳಿಯಲು ಆ ಸೂರ್ಯನಿಗೇನು ದಾಡಿ? ಕಿಟಕಿಯ ತೆರೆದು ಕತ್ತಲಲ್ಲಿ ಬೆಳಕನ್ನು ಹುಡುಕುತ್ತೇನೆ. ವಿರಹ ವೇತನೆಯಿಂದ ಬಳಲಿ ಬೆಂಡಾದ ನನ್ನ ಮೇಲೆ ನಿನಗೆ ಒಂದಿಷ್ಟೂ ಅನುಕಂಪವಿಲ್ಲ!
ನಿನ್ನ ಸಂಗ ಮಾಡಿದ ಮೇಲೆ, ಕೆಲವರು ನನ್ನಿಂದ ದೂರವಾದರು. ಹೋಗಲಿ ಬಿಡು, ನನಗೇನು? ಜಗತ್ತಿನಲ್ಲಿ ನೀನು ನನ್ನೊಟ್ಟಿಗಿದ್ದರೆ ಸಾಕು, ನೂರೇನು ಸಾವಿರ ವರ್ಷ ಬೇಕಿದ್ದರೂ ಬೆಂಗಳೂರಿನ ಹೊಗೆ ಕುಡಿದು, ಟ್ರಾಫಿಕ್ ಜಾಮ್‌ನಲ್ಲಿ ನರಳುತ್ತಾ ಬಾಳಬಲ್ಲೆ. ಯಾಕೆಂದರೆ; ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು.. ಹೌದು ನೀನು ನನ್ನೊಟ್ಟಿಗೆ ಹೆಜ್ಜೆ ಹಾಕುತ್ತಿರುವೆ. ನಮ್ಮಿಬ್ಬರ ಸಂಬಂಧವನ್ನು ಕೆಲವರು ತಮಗೆ ದೋಚಿದಂತೆ ಅರ್ಥೈಸುತ್ತಾರೆ. ಅದು ಅವರ ಲಿಮಿಟ್ಟು. ನಿನ್ನ ಸಂಗ ಬಿಡುವಂತೆ ನಾನಾ ರೀತಿ ಹೇಳುತ್ತಾರೆ. ನನ್ನ ಜೀವದ ಉಸಿರಲ್ಲಿ ನಿನ್ನ ಉಸಿರು ಬೆರೆತಿದೆ. ಹೀಗಾಗಿ ಬೇರೆಯಾಗುವುದಾದರೂ ಹೇಗೆ ಎಂದು ಯೋಚಿಸುವಾಗಲೇ, ಅಗಲಿಕೆಯ ದಿನ ಸಮೀಪಿಸಿದೆ.
ನಾವಿಬ್ಬರೂ ಒಂದೇ ದೇಹವಾಗಿ ಸುಖಿಸುತ್ತಿರುವ ವೇಳೆಯಲ್ಲಿಯೇ ಅದ್ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾನಂತೂ ರೆಡಿ. ಆದರೆ ಅದೆಲ್ಲ ಆಗದ ಮಾತು. ನೀನಿಲ್ಲದೇ ನಾ ಹೇಗಿರಲಿ? ತಲೆ ಮತ್ತೆ ಗಿರ್ರೆನ್ನುತ್ತಿದೆ, ಬಾ ಕೊನೆಯದಾಗಿ ಒಂದು ಸಲ ಒಂದಾಗೋಣ. ಜಗತ್ತು ನಾಚುವಂತೆ, ಸುಖ ಉಣ್ಣೋಣ.

1 comment:

ವಿವೇಕ್ ಶಂಕರ್ said...

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada